ಮಂಜಿನ ನಡುವೆ ದಾರಿ ಕಾಣದೆ ಲಾರಿ-ಕಾರು ಅಪಘಾತ; ಇಬ್ಬರು ಸಾವು
ಮಡಿಕೇರಿ, ಜುಲೈ 20: ಮುಂಜಾನೆಯ ಮಂಜು ಮುಸುಕಿನ ಹಾದಿಯಲ್ಲಿ ಸಾಗುತ್ತಿದ್ದ ಲಾರಿ ಹಾಗೂ ಕಾರುಗಳ ಚಾಲಕರಿಗೆ ರಸ್ತೆ ಸರಿಯಾಗಿ ಕಾಣಿಸದೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಮಡಿಕೇರಿ ಕುಶಾಲನಗರ ರಸ್ತೆಯ ಬಾಳೆಕಾಡ್ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಮಡಿಕೇರಿಯಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾನೆ ಮಂಜು ಮುಸುಕಿನ ವಾತಾವರಣವಿತ್ತು. ರಸ್ತೆ ಕಾಣಿಸದಷ್ಟು ದಟ್ಟ ಮಂಜು ಕವಿದಿದ್ದರಿಂದ ಎದುರಿನಿಂದ ಬರುವ ವಾಹನಗಳೇ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಚಾಲನೆ ಮಾಡುವುದೇ ಕಷ್ಟಕರವಾಗಿದೆ. ಹೀಗಾಗಿ ಮುಂಜಾನೆ ಬಾಳೆಕಾಡ್ ಎಂಬಲ್ಲಿ ಅನಿಲದ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಲಾರಿಗೆ ಎದುರಿನಿಂದ ಬಂದ ಕಾರು ಕಾಣಿಸದೆ ಎರಡೂ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಲ್ಲಿ ಕಿರಣ್ (23) ಹಾಗೂ ಶ್ರವಣ್ (25) ಎಂಬ ಇಬ್ಬರು ಮೃತಪಟ್ಟಿದ್ದಾರೆ. ರಾಜು ಮತ್ತು ಪುಟ್ಟೇಗೌಡ ಎಂಬುವರು ಗಂಭೀರ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಇವರೆಲ್ಲರೂ ಕೋಲಾರ ಮೂಲದವರು ಎಂದು ತಿಳಿದುಬಂದಿದೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಗಾಲದಲ್ಲಿ ಮಡಿಕೇರಿ ವ್ಯಾಪ್ತಿಯಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಹೆಚ್ಚಾಗಿ ಮಂಜು ಮುಸುಕಿಗೊಳ್ಳುವುದಲ್ಲದೆ, ಮಳೆಯೂ ಇರುವುದರಿಂದ ರಸ್ತೆಯೇ ಕಾಣದಂಥ ವಾತಾವರಣ ನಿರ್ಮಾಣವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಾಹನ ಚಾಲನೆ ಮಾಡುವಾಗ, ಅದರಲ್ಲೂ ತಿರುವು ರಸ್ತೆಗಳಲ್ಲಿ ಚಾಲಕರು ಜಾಗರೂಕರಾಗಿರಬೇಕಾಗುತ್ತದೆ. ಕೊಡಗು ಹೊರತುಪಡಿಸಿ ಬೇರೆ ಕಡೆಯಿಂದ ಬರುವ ಪ್ರವಾಸಿಗರಿಗೆ ಇಲ್ಲಿನ ವಾತಾವರಣದ ಅರಿವಿಲ್ಲದಿರುವುದರಿಂದ, ಜತೆಗೆ ರಸ್ತೆಯೂ ಕಾಣದೆ ವಾಹನ ಚಾಲನೆ ಮಾಡುವುದರಿಂದ ಅವಘಡಗಳು ಸಂಭವಿಸುತ್ತಿವೆ.
ಆದ್ದರಿಂದ ದೂರದಿಂದ ಬರುವ ಪ್ರವಾಸಿಗರು ಮಡಿಕೇರಿ ವ್ಯಾಪ್ತಿಯಲ್ಲಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವುದು ಅಗತ್ಯವಾಗಿದೆ. ಇನ್ನಾದರೂ ಕೊಡಗಿನತ್ತ ಬರುವ ಪ್ರವಾಸಿಗರು ಈ ಬಗ್ಗೆ ಎಚ್ಚರಿಕೆ ವಹಿಸುವುದನ್ನು ಮರೆಯದಿರಲಿ.












Click it and Unblock the Notifications