ಮಾನ್ಸೂನ್ ದೃಶ್ಯ ವೈಭವ ಸವಿಯಲು ಕೊಡಗಿಗೆ ಪ್ರವಾಸಿಗರ ಆಗಮನ: ಇಳಿಮುಖವಾದ ಮಳೆ
ಮಡಿಕೇರಿ, ಜುಲೈ 16: ಕೋವಿಡ್ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆ ಕಳೆದ 3 ತಿಂಗಳಿನಿಂದ ಬಂದ್ ಆಗಿದ್ದ ಪ್ರವಾಸಿ ತಾಣಗಳೆಲ್ಲವೂ ಅನ್ಲಾಕ್ ಹಿನ್ನೆಲೆ ತೆರೆದುಕೊಂಡಿದ್ದು, ಕೊಡಗು ಜಿಲ್ಲೆಗೆ ಪ್ರವಾಸಿಗರ ಆಗಮನವಾಗುತ್ತಿದೆ.
ಮಳೆ, ಚಳಿಯ ನಡುವೆ ಮಾನ್ಸೂನ್ ಪ್ರವಾಸಿ ದಿನದ ಹೆಸರಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಡಿಕೇರಿಯ ಪ್ರಕೃತಿ ಪ್ರಿಯರ ನೆಚ್ಚಿನ ತಾಣ ಅಬ್ಬಿ ಜಲಪಾತ ವೀಕ್ಷಿಸಲೆಂದು ಇಂದು ಪ್ರವಾಸಿಗರ ದಂಡೇ ಹರಿದು ಬಂದಿತ್ತು.
ಕಳೆದ ಒಂದು ವಾರದ ಮಳೆಗೆ ದುಮ್ಮಿಕ್ಕಿ ಹರಿಯುತ್ತಿರುವ ಅಬ್ಬಿಯ ಸೊಬಗನ್ನು ನೋಡಿ ಪುಳಕಿತಗೊಂಡ ಪ್ರವಾಸಿಗರು ಇತರ ಪ್ರವಾಸಿ ತಾಣಗಳಿಗೂ ತೆರಳುವ ಅಭಿಲಾಷೆ ವ್ಯಕ್ತಪಡಿಸಿದರು.
ಕೋವಿಡ್ ನಿಯಮ ಪಾಲಿಸಲು ಪ್ರವಾಸಿಗರಿಗೆ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಸಲಹೆ ನೀಡುತ್ತಿದ್ದಾರೆ. ಪ್ರವಾಸಿಗರ ಆಗಮನದಿಂದ ಪ್ರವಾಸೋದ್ಯಮವನ್ನೇ ನಂಬಿರುವವರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ, ಕೆಲವು ಸಂಘಟನೆಗಳು ಕೋವಿಡ್ ಆತಂಕದ ಹಿನ್ನೆಲೆ ಪ್ರವಾಸಿಗರ ಆಗಮನವನ್ನು ವಿರೋಧಿಸುತ್ತಿವೆ.
ಕಬಿನಿ ಜಲಾಶಯ ಭರ್ತಿಗೆ ಬರೀ 5 ಅಡಿ ಬಾಕಿ
ಈ ಕುರಿತು ಪ್ರತಿಕ್ರಿಯಿಸಿದ, ಅಣಿಲ ಕೊಡವ ಸಮಾಜ ಯುವ ಘಟಕದ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, "ಈಗಾಗಲೇ ಪ್ರವಾಸಿಗರ ದಟ್ಟಣೆಯ ಕಾರಣದಿಂದ ರಾಜ್ಯ ಸರ್ಕಾರವೇ ನಂದಿ ಬೆಟ್ಟಕ್ಕೆ ವೀಕೆಂಡ್ ಪ್ರವೇಶವನ್ನು ನಿರ್ಬಂಧಿಸಿದೆ. ಇನ್ನು ಕೊಡಗಿನಲ್ಲೂ ಪ್ರವಾಸಿಗರ ದಟ್ಟಣೆಯಿಂದಾಗಿ ಕೋವಿಡ್ ಮೂರನೇ ಅಲೆಯು ಹರಡಲು ನಾವೇ ವೇದಿಕೆ ಒದಗಿಸಿಕೊಟ್ಟಂತಾಗುತ್ತದೆ. ಪ್ರವಾಸಿಗರಿಂದ ಹೋಂ ಸ್ಟೇ, ಹೋಟೆಲ್ಗಳವರಿಗೆ ಒಂದಷ್ಟು ಲಾಭ ಬರಬಹುದು. ಆದರೆ ಕೋವಿಡ್ ಮೂರನೇ ಅಲೆಯು ಸ್ಪೋಟಗೊಂಡರೆ ಇಡೀ ಕೊಡಗಿನ ಎಲ್ಲ ಜನರೂ ಶಿಕ್ಷೆ ಅನುಭವಿಸಬೇಕಾಗುತ್ತದೆ,'' ಎಂದರು.
ಹೋಂ ಸ್ಟೇ ಮಾಲೀಕರ ಸಂಘವು ಕೊಡಗಿನಲ್ಲಿ ಪ್ರವಾಸಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕೆಂದೂ ಇಲ್ಲದಿದ್ದರೆ ಕಾನೂನು ಹೋರಾಟ ಮಾಡುವುದಾಗಿಯೂ ಈ ಹಿಂದೆ ಎಚ್ಚರಿಸಿತ್ತು.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಡಿಕೇರಿ- ಮಂಗಳೂರು ರಾಜ್ಯ ಹೆದ್ದಾರಿಯಲ್ಲಿರುವ ಕೊಯನಾಡುವಿನಲ್ಲಿ ಪಯಸ್ವಿನಿ ನದಿ ತುಂಬಿ ಹರಿಯುತ್ತಿದೆ. ಗುರುವಾರ ರಾತ್ರಿ ನದಿ ತೀರದ 8 ಕುಟುಂಬಗಳ ನಿವಾಸಿಗಳನ್ನು ಕೊಯನಾಡು ಸರ್ಕಾರಿ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿರುವ ಕುಟುಂಬಗಳನ್ನು ಭೇಟಿ ಮಾಡಿದ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ನೊಂದವರಿಗೆ ಸಾಂತ್ವನ ಹೇಳಿದರು. ಸುಮಾರು 15 ದಿನಗಳಿಗಾಗುವಷ್ಟು ಆಹಾರ ಸಾಮಾಗ್ರಿಗಳನ್ನು ಕೂಡ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಪವನ್ ಪೆಮ್ಮಯ್ಯ, "ಅತಿವೃಷ್ಟಿಯಾದಾಗ ನೆರವಿಗೆ ಧಾವಿಸಲು ಕೊಡಗು ರಕ್ಷಣಾ ವೇದಿಕೆಯ ತಂಡ ರಚನೆಗೊಂಡಿದ್ದು, ಜಿಲ್ಲೆಯ ಮೂಲೆ ಮೂಲೆಯಲ್ಲಿ ಕಾರ್ಯಾಚರಿಸಲಿದೆ,'' ಎಂದರು.
Recommended Video
ಕೊಯನಾಡು ಗ್ರಾಮದ ಕುಟುಂಬಗಳಿಗೆ ಕಾಳಜಿ ಕೇಂದ್ರದಲ್ಲಿರುವವರೆಗೂ ನೆರವು ನೀಡಲಾಗುವುದು ಮತ್ತು ಕೊರವೇಯ ಈ ಭಾಗದ ಪದಾಧಿಕಾರಿಗಳು ಪ್ರತಿದಿನ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಲಿದ್ದಾರೆ. ಶುಕ್ರವಾರ ಜಿಲ್ಲೆಯಲ್ಲಿ ಮಳೆಯು ಬಿರುಸು ಕಡಿಮೆ ಆಗಿದ್ದು, ಜನರು ಮನೆಯಿಂದ ಹೊರಗೆ ಬಂದು ಅವಶ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿತು.