ಟಿಪ್ಪುವಿನ ವೀರತ್ವ ಕೊಡವರಿಗೆ ಸ್ಫೂರ್ತಿ: ಎ.ಕೆ.ಸುಬ್ಬಯ್ಯ
ಮಡಿಕೇರಿ, ನವೆಂಬರ್ 08: ಟಿಪ್ಪು ಜಯಂತಿ ಆಚರಣೆಗೆ ದಿನ ಹತ್ತಿರವಾಗುತ್ತಿದ್ದಂತೆಯೇ ಪರ ವಿರೋಧ ಹೇಳಿಕೆಗಳು ಹೆಚ್ಚಾಗುತ್ತಿದೆ. ಈ ನಡುವೆ ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಅವರು ಆಡಳಿತದಲ್ಲಿ ದೂರದೃಷ್ಟಿ ಹೊಂದಿದ್ದ ಟಿಪ್ಪು ಸುಲ್ತಾನ್ ಒಬ್ಬ ಪ್ರಚಂಡ ದೇಶಭಕ್ತ ಮಾತ್ರವಲ್ಲದೇ ಅಪ್ರತಿಮ ವೀರನಾಗಿದ್ದ. ಜೊತೆಗೆ ಜೀವಪ್ರೇಮಿಯೂ, ಮುತ್ಸದಿಯೂ ಆಗಿದ್ದ ಟಿಪ್ಪುವಿನ ವೀರತ್ವ ವೀರ ಕೊಡವರಿಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಬ್ರಿಟೀಷರಿಗೆ ಸದಾ ಸಿಂಹಸ್ವಪ್ನರಾಗಿದ್ದ ಟಿಪ್ಪುವನ್ನೇ ಮಣಿಸಿದ ಕೊಡವರು ಹೆಮ್ಮೆ ಪಟ್ಟುಕೊಳ್ಳಬೇಕು. ಎದುರಾಳಿಯ ಪರಾಕ್ರಮಕ್ಕೆ ತಲೆದೂಗಿ ಗೌರವಿಸುವುದೇ ವೀರರ ಲಕ್ಷಣವಾಗಿದೆ. ಅದು ಬಿಟ್ಟು ಟಿಪ್ಪು ಕೊಡವರನ್ನು ಕೊಂದ ಎಂದು ಸಂಘ ಪರಿವಾರ ಹಬ್ಬಿಸುವ ಸುಳ್ಳಿಗೆ ಮರುಳಾಗಿ ಕುಣಿಯುವುದು ವೀರ ಕೊಡವರ ಲಕ್ಷಣವಲ್ಲ ಎಂದು ಹೇಳಿದ್ದಾರೆ.

ಕೊಡಗಿನ ಕಾಂಗ್ರೆಸ್ಸಿಗರು ಟಿಪ್ಪು ಜಯಂತಿ ವಿಷಯದಲ್ಲಿ ಕಣಕ್ಕಿಳಿಯಬೇಕು. ಸಂಘ ಪರಿವಾರ ಮತ್ತು ಕೋಮುವಾದಿಗಳು ಕಾನೂನು ಬಾಹಿರ ಪ್ರತಿಭಟನೆ ನಡೆಸಿದರೆ ಅದನ್ನು ಕಾಂಗ್ರೆಸ್ ಪ್ರತಿರೋಧಿಸಬೇಕು. ಆದರೆ ಕೊಡಗು ಕಾಂಗ್ರೆಸ್ನ ಮುಂದಾಳುಗಳು ಈ ಕುರಿತು ಇನ್ನೂ ಮೌನ ವಹಿಸಿದಂತಿದೆ ಎಂದು ಕೊಡಗು ಕಾಂಗ್ರೆಸ್ ನಾಯಕರನ್ನು ಛೇಡಿಸಿರುವ ಅವರು, ಇದನ್ನು ರಾಜ್ಯದ ಕಾಂಗ್ರೆಸ್ ವರಿಷ್ಠರು ಗಮನಿಸಬೇಕು. ಅಂತವರನ್ನು ಗುರುತಿಸಿ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ಪಡೆಯಲು ಅನರ್ಹರೆಂದು ಘೋಷಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಮತ್ತು ಕೆಪಿಸಿಸಿಯನ್ನು ಎ.ಕೆ. ಸುಬ್ಬಯ್ಯ ಒತ್ತಾಯಿಸಿದ್ದಾರೆ.
ಸುಬ್ಬಯ್ಯ ಅವರ ಈ ಮಾತುಗಳು ಜಿಲ್ಲೆಯಲ್ಲಿ ಕೆಲವು ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಜಿಲ್ಲಾಡಳಿತ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರೆ, ಪೊಲೀಸ್ ಇಲಾಖೆ ಎಲ್ಲೆಡೆ ಬಂದೋಬಸ್ತ್ ಮಾಡಿದೆ. ಈಗಾಗಲೇ ಹೊರರಾಜ್ಯಗಳಿಂದ ಪೊಲೀಸ್ ಪಡೆಯನ್ನು ಕರೆಯಿಸಲಾಗಿದೆ. ಕೇಂದ್ರ ಭದ್ರತಾಪಡೆ ಜಿಲ್ಲೆಗೆ ಆಗಮಿಸಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಕೆಲವು ನಾಯಕರ ಹೇಳಿಕೆಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿದೆ. ಒಟ್ಟಾರೆ ಶಾಂತಿಯ ನಾಡಿನಲ್ಲಿ ಇದೀಗ ಭಯದ ವಾತಾವರಣ ನಿರ್ಮಾಣವಾಗಿದ್ದಂತು ಸತ್ಯ.












Click it and Unblock the Notifications