ಈಜಲು ಹೋಗಿ ಕಾವೇರಿ ನದಿ ಪಾಲಾದ ವಿದ್ಯಾರ್ಥಿಗಳು
ಮಡಿಕೇರಿ, ಜೂನ್ 6: ಕಾವೇರಿ ನದಿಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕುಶಾಲನಗರ ಬಳಿಯ ಮಾದಾಪಟ್ಟಣದಲ್ಲಿ ಬುಧವಾರ ನಡೆದಿದೆ.
ಮಡಿಕೇರಿಯ ಉಕ್ಕುಡ ನಿವಾಸಿ ರಮೇಶ್ ಎಂಬುವರ ಪುತ್ರ ಆಕಾಶ್, ಮ್ಯಾನ್ಸ್ ಕಾಂಪೌಂಡ್ ಬಳಿಯ ನಿವಾಸಿ ಚೆಲುವರಾಜುರವರ ಪುತ್ರ ಗಗನ್ ಮತ್ತು ಮೇಕೇರಿ ಗ್ರಾಮದ ನಿವಾಸಿ ಉಮೇಶ್ ಅವರ ಪುತ್ರ ಶಶಾಂಕ್ ಮೃತಪಟ್ಟವರು. ಈ ಮೂವರು ವಿದ್ಯಾರ್ಥಿಗಳು ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದರು.
ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಗೆಳೆಯ ಸ್ಯಾಂಡಲ್ ಕಾಡ್ ಎಸ್ಟೇಟ್ ನಲ್ಲಿರುವ ಮನ್ಸೂರ್ ಮನೆಗೆ ಗಗನ್, ಆಕಾಶ್ ಮತ್ತು ಶಶಾಂಕ್ ತೆರಳಿದ್ದರು. ಅಲ್ಲಿ ಊಟ ಮುಗಿಸಿಕೊಂಡು ಕುಶಾಲನಗರಕ್ಕೆ ತೆರಳಿದ್ದಾರೆ. ಆ ನಂತರ ಮಾದಾಪಟ್ಟಣ ಬಳಿ ಸರ್ಕಾರಿ ಇಂಜಿನಿಯರ್ ಕಾಲೇಜು ಮುಂಭಾಗದಲ್ಲಿರುವ ಕಾವೇರಿ ನದಿಗೆ ಈಜಲು ತೆರಳಿದ್ದು, ಅಲ್ಲಿ ಕೆಲವು ಸಮಯ ಈಜಾಡಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಆಕಸ್ಮಿಕವಾಗಿ ನೀರಲ್ಲಿ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಕುಶಾಲನಗರ ಟೌನ್ ಪೊಲೀಸ್ ಠಾಣಾಧಿಕಾರಿ ಜಗದೀಶ್, ಸಿಬ್ಬಂದಿ ರವೀಂದ್ರ, ಮಾಚಯ್ಯ ಅವರು ಪರಿಶೀಲನೆ ನಡೆಸಿದ್ದು, ಈಜುಗಾರರ ಸಹಾಯದಿಂದ ಶವವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications