ಕೆಎಸ್ಐಎಸ್ಎಫ್ ಕಣ್ಗಾವಲಲ್ಲಿ ಕೊಡಗಿನ ಹಾರಂಗಿ ಜಲಾಶಯ!
ಮಡಿಕೇರಿ, ಸೆಪ್ಟೆಂಬರ್ 7: ಇನ್ನು ಮುಂದೆ ಕೊಡಗಿನ ಕುಶಾಲನಗರ ಬಳಿಯಿರುವ ಹಾರಂಗಿ ಜಲಾಶಯ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಣ್ಗಾವಲಿನಲ್ಲಿ ಇರಲಿದೆ. ಹೀಗಾಗಿ ಜಲಾಶಯದ ಸುತ್ತಮುತ್ತ ಅಕ್ರಮ ಪ್ರವೇಶ, ಪುಂಡಾಟ ಎಲ್ಲದಕ್ಕೂ ಕಡಿವಾಣ ಬೀಳಲಿದೆ.
ಇದುವರೆಗೆ ಸಿವಿಲ್ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದರಾದರೂ ಇನ್ನು ಮುಂದೆ ಕೈಗಾರಿಕಾ ಭದ್ರತಾ ಪಡೆಯ ಕಾವಲಿನಲ್ಲಿ ಹಾರಂಗಿ ಜಲಾಶಯವಿರುವುದು ಸ್ಥಳೀಯರಿಗೆ ನೆಮ್ಮದಿ ತಂದಿದೆ. ಕಾರಣ ಪುಂಡ ಪೋಕರಿಗಳ ಹಾವಳಿ ಜಾಸ್ತಿಯಾಗಿತ್ತು. ಪೊಲೀಸರ ಕಣ್ತಪ್ಪಿಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದರಲ್ಲದೆ, ಪ್ರಶ್ನಿಸಲು ಹೋದವರ ಮೇಲೆಯೇ ಎಗರಿ ಬೀಳುತ್ತಿದ್ದರು.

ಹಾರಂಗಿ ಜಲಾಶಯದ ಸುತ್ತ ಬಿಗಿ ಭದ್ರತೆ
ಸದ್ಯ ಸುಮಾರು ಸಿಐ ಕೆ.ಎಸ್. ಚಂದ್ರಶೇಖರ್ ನೇತೃತ್ವದಲ್ಲಿ ಒಬ್ಬರು ಪಿಎಸ್ಐ, ಮೂರು ಮಂದಿ ಹೆಡ್ ಪೊಲೀಸ್ ಕಾನ್ಸ್ಟೆಬಲ್ ಹಾಗೂ 20 ಮಂದಿ ಸಿಬ್ಬಂದಿ ಜಲಾಶಯವನ್ನು ಸುತ್ತುವರಿದು ಕಾವಲು ಕಾಯುತ್ತಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಹೆಚ್ಚಿನ ತರಬೇತಿಯನ್ನು ನೀಡಲಾಗಿದ್ದು, ಕಠಿಣ ಪರಿಸ್ಥಿತಿಯಲ್ಲಿಯೂ ಕಾರ್ಯ ನಿರ್ವಹಿಸುವ ಚಾಕಚಕ್ಯತೆ ಗಳಿಸಿದ್ದಾರೆ.
ಬಂದೋಬಸ್ತ್ ಹೇಗಿದೆ ಎಂದರೆ ಜಲಾಶಯದ ಮುಖ್ಯದ್ವಾರ, ಮೇಲ್ಭಾಗದಲ್ಲಿನ ಅಣೆಕಟ್ಟೆಯ ಗೇಟ್, ಪವರ್ ಹೌಸ್ ಹೀಗೆ ಎಲ್ಲೆಡೆ ಕೆಎಸ್ಐಎಸ್ಎಫ್ ಪೊಲೀಸರನ್ನು ನಿಯೋಜಿಸಲಾಗಿದ್ದು, ಅವರೆಲ್ಲರೂ ಕಣ್ಣಲ್ಲಿ ಕಣ್ಣಿಟ್ಟು ಜಲಾಶಯವನ್ನು ಕಾಯಲಿದ್ದಾರೆ. ಜತೆಗೆ ಭದ್ರತಾ ಸಿಬ್ಬಂದಿಗೆ ಬಂದೂಕು ನೀಡಲಾಗಿದ್ದು, ಬಂದೂಕು ಹಿಡಿದ ಸಿಬ್ಬಂದಿ ಬಲದಂಡೆ ಕಾಲುವೆಯ ಕೊನೇ ಹಂತದ ತನಕವೂ ವಾಹನದಲ್ಲಿ ಗಸ್ತು ತಿರುಗಿ ನಿಗಾವಹಿಸಲಿದ್ದಾರೆ.
ಪೊಲೀಸ್ ಪಡೆಯ ಮುಖ್ಯಸ್ಥರ ಅನುಮತಿ ಕಡ್ಡಾಯ
ಜಲಾಶಯ ನೋಡಲು ಬರುವ ಪ್ರವಾಸಿಗರ ವಾಹನಗಳ ನಿಲುಗಡೆಗೆ ಅಣೆಕಟ್ಟೆ ಪ್ರವೇಶ ದ್ವಾರದ ಬಳಿ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಖಾಸಗಿ ವಾಹನಗಳ ಪ್ರವೇಶಕ್ಕೆ ಪೊಲೀಸ್ ಪಡೆಯ ಮುಖ್ಯಸ್ಥರ ಅನುಮತಿ ಕಡ್ಡಾಯವಾಗಿದೆ. ಈ ಹಿಂದೆ ಪ್ರವೇಶ ದ್ವಾರದಿಂದ ಅಣೆಕಟ್ಟೆ ಬಳಿ ತೆರಳಲು ನೀರಾವರಿ ಇಲಾಖೆ ಅನುಮತಿ ಪಡೆದರೆ ಸಾಕಾಗುತ್ತಿತ್ತು. ಇನ್ನು ಮುಂದೆ ಅದು ಸಾಧ್ಯವಿಲ್ಲ.
ಹಾರಂಗಿ ಉದ್ಯಾನ ಹಾಗೂ ರಾತ್ರಿ ಸಂಗೀತ ಕಾರಂಜಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಭದ್ರತಾ ಪಡೆ ಸಂಪೂರ್ಣ ರಕ್ಷಣೆ ಒದಗಿಸಲಿದೆ. ಜತೆಗೆ ಪ್ರತಿಯೊಬ್ಬರ ತಪಾಸಣೆ ಬಳಿಕವೇ ಜಲಾಶಯದ ಒಳಗೆ ಪ್ರವೇಶ ನೀಡಲಾಗುತ್ತದೆ. ವಾಹನಗಳಲ್ಲಿ ಬರುವ ಪ್ರವಾಸಿಗರ ಮಾಹಿತಿ ಹಾಗೂ ವಾಹನ ಪರೀಕ್ಷಿಸಿ ನಂಬರ್ ದಾಖಲು ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಅಕ್ರಮ ಚಟುವಟಿಕೆಗೆ ಕಡಿವಾಣ
ಈ ಹಿಂದೆ ಜಲಾಶಯದ ಭದ್ರತೆಯನ್ನು ಡಿಆರ್ ಪೊಲೀಸರಿಗೆ ವಹಿಸಲಾಗಿತ್ತು. ಜಲಾಶಯದ ಎಡದಂಡೆ, ಬಲದಂಡೆ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಡಿಆರ್, ಸಿವಿಲ್, ಖಾಸಗಿ ಭದ್ರತಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಎಲ್ಲವನ್ನು ಬದಲಾಯಿಸಿ ಕೆಎಸ್ಐಎಸ್ಎಫ್ಗೆ ಭದ್ರತೆ ನೀಡಿರುವುದು ಜಲಾಶಯದ ಭದ್ರತಾ ದೃಷ್ಠಿಯಿಂದ ಒಳ್ಳೆಯ ತೀರ್ಮಾನವಾಗಿದೆ.
ಜಲಾಶಯಕ್ಕೆ ಪುಂಡಪೋಕರಿಗಳು ಬರುವುದು, ಜಲಾಶಯ ಬಳಿಯ ಖಾಲಿ ಜಾಗಗಳಲ್ಲಿ ಮೋಜು ಮಸ್ತಿ ಮಾಡುವುದು ಅದನ್ನು ತಡೆಯಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗುವುದು ನಡೆಯುತ್ತಿತ್ತು. ಇನ್ನು ಮುಂದೆ ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳಲಿದೆ.

1.65 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು
ಇದೀಗ 2859 ಅಡಿ ಸಾಮರ್ಥ್ಯದ ಜಲಾಶಯ ತುಂಬಿ ತುಳುಕುತ್ತಿದ್ದು, ಈ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಕಾರಣ ನೀರು ನದಿಗೆ ಹರಿಸಲಾಗುತ್ತಿದೆ. 1.65 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ. ಇನ್ನು ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 8.5 ಟಿಎಂಸಿಯಾಗಿದೆ. ಕೆಆರ್ಎಸ್ ಜಲಾಶಯದ ಹಿಂದಿನ ಶಕ್ತಿಯಾಗಿರುವ ಹಾರಂಗಿ ಜಲಾಶಯ ಕೊಡಗಿನಲ್ಲಿರುವ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ.












Click it and Unblock the Notifications