ಕೊಡಗಿನ ಜೇನು ಕೃಷಿಗೆ ಅರಣ್ಯ ಇಲಾಖೆ ಪ್ರೋತ್ಸಾಹ
ಮಡಿಕೇರಿ, ಫೆಬ್ರವರಿ 8: ಕೊಡಗಿನಲ್ಲಿ ಜೇನು ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಅರಣ್ಯ ಇಲಾಖೆ ಮಹತ್ವದ ಹೆಜ್ಜೆಯಿರಿಸಿ ಜೇನು ಪೆಟ್ಟಿಗೆಗಳನ್ನು ವಿತರಿಸಿ ಸ್ವಾವಲಂಬಿ ಕೃಷಿಕರ ಕೈ ಜೋಡಿಸಿದೆ.
ನಗರಗಳಿಗೆ ನಕಲಿ ಜೇನಿನ ಹಾವಳಿ ಮತ್ತು ಜೇಜು ಕೃಷಿಕರ ನಿರುತ್ಸಾಹವನ್ನು ಅರಿತ ಇಲಾಖೆ ಈ ಕೆಲಸವನ್ನು ಮಾಡಿದೆ ಅಲ್ಲದೆ ಜೇನಿನ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿಯೂ ಅನುಕೂಲವಾಗಿದೆ. ಜೇನು ಹುಳುಗಳ ಸಂತತಿ ಕಡಿಮೆಯಾದರೆ ಪ್ರಕೃತಿ ದತ್ತವಾಗಿ ಬಂದಿರುವ ಕೆಲವು ಫಸಲಿನ ಹೂಗಳಿಗೆ ಪರಾಗಸ್ಪರ್ಶಕ್ಕೆ ಅನಾನುಕೂಲವಾಗಿ ಮಿಡಿಕಚ್ಚದೆ ನಷ್ಟ ಅನುಭವಿಸ ಬೇಕಾಗುತ್ತದೆ. ಸಾಮಾನ್ಯವಾಗಿ ಕಾಫಿ ಹೂ ಅರಳಿದಾಗ ಅದರ[ನೇಪಥ್ಯಕ್ಕೆ ಸರಿದ ಕೊಡಗಿನ ಜೇನು ಉತ್ಪಾದನೆ]
ಪರಾಗಕ್ಕೆ ಬರುವ ಜೇನು ಹುಳುಗಳು ಪರಾಗಸ್ಪರ್ಶಕ್ಕೆ ಕಾರಣವಾಗುತ್ತಿವೆ. ಹೀಗೆಯೇ ಹಲವು ಫಸಲಿಗೆ ಜೇನುಹುಳುಗಳ ಅಗತ್ಯತೆ ಇದೆ.
ಆದ್ದರಿಂದ ಜೇನು ಕೃಷಿ ನೇಪಥ್ಯಕ್ಕೆ ಸರಿದು ಹೋದರೆ ಹಲವು ರೀತಿಯಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಇದನ್ನು ಮನಗಂಡ ಅರಣ್ಯ ಇಲಾಖೆ ಯುವಕರಿಗೆ ಜೇನುಪೆಟ್ಟಿಗೆಗಳನ್ನು ವಿತರಿಸುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಕೈಜೋಡಿಸಿದೆ.
ಈಗಾಗಲೇ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳನ್ನು ಗುರುತಿಸಿ ಸುಮಾರು 4 ಸಾವಿರ ಬೆಲೆಯ ಜೇನು ಪೆಟ್ಟಿಗೆಯನ್ನು ಜೇನುಹುಳುಗಳ ಕುಟುಂಬದೊಂದಿಗೆ ಈಗಾಗಲೇ ವಿತರಿಸಿದೆ. ಅರಣ್ಯ ಇಲಾಖೆಯ ಪ್ರತಿ ವಲಯ ಮಟ್ಟಕ್ಕೂ 200 ಜೇನು ಪೆಟ್ಟಿಗೆಯನ್ನು ವಿತರಿಸಲಾಗಿದ್ದು, ಜೇನು ಪೆಟ್ಟಿಗೆ, ಹುಳಗಳ ನಿರ್ವಹಣೆ, ಜೇನು ಸಾಕಾಣಿಕೆಯ ಪ್ರಯೋಜದ ಬಗ್ಗೆ ನುರಿತರಿಂದ ತರಬೇತಿಯನ್ನು ನೀಡಲಾಗುತ್ತಿದೆ.
ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದಿಂದ ಕುಶಾಲನಗರದ ಅರಣ್ಯ ಇಲಾಖೆಯಲ್ಲಿ ಆಯ್ದ ಫಲಾನುಭವಿಗಳಿಗೆ ಒಬ್ಬರಿಗೆ 5ಪೆಟ್ಟಿಗೆಯಂತೆ 200 ಜೇನು ಪೆಟ್ಟಿಗೆಯನ್ನು ವಿತರಿಸಲಾಗಿದೆ. ಫಲಾನುಭವಿಗಳು ಆಸಕ್ತಿಯಿಂದ ಜೇನು ಕೃಷಿ ಮಾಡಿದ್ದೇ ಆದರೆ ತಾವಿದ್ದಲ್ಲೇ ಒಂದಷ್ಟು ಆದಾಯದೊಂದಿಗೆ ಶುದ್ಧ ಜೇನುಪಡೆಯಲು ಹಾಗೂ ಕೊಡಗಿನ ಜೇನನ್ನು ಉತ್ತುಂಗಕ್ಕೇರಿಸಲು ಸಾಧ್ಯವಾಗುತ್ತದೆ.