ಕೊಡಗಿನಲ್ಲಿ ಪೊಲೀಸ್ ರಕ್ಷಣೆ ಕೋರಿದ ತಮಿಳುನಾಡು ಶಾಸಕರು
ಮಡಿಕೇರಿ, ಸೆಪ್ಟೆಂಬರ್ 14: ತಮಿಳುನಾಡಿನ ರಾಜಕೀಯ ಕೊಡಗಿಗೆ ಶಿಫ್ಟ್ ಆಗಿದ್ದು ಸುಮಾರು ನಾಲ್ಕೈದು ಮಂದಿ ಎಐಎಡಿಎಂಕೆ ಶಾಸಕರು ಸುಂಟಿಕೊಪ್ಪ ಬಳಿಯ ಪಾಡಿಂಗ್ ಟನ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಮೊದಲಿಗೆ ತಮಿಳುನಾಡಿನ ಶಾಸಕರು ಕೊಡಗಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಸುದ್ದಿ ಬಂದಿತ್ತಾದರೂ ಎಲ್ಲಿ ಯಾವ ರೆಸಾರ್ಟ್ ಎಂಬುದು ಮಾತ್ರ ಯಾರ ಗಮನಕ್ಕೂ ಬಂದಿರಲಿಲ್ಲ. ಈ ನಡುವೆ ವಾಸ್ತವ್ಯ ಹೂಡಿದ್ದ ಶಾಸಕರ ಪೈಕಿ ಪೊಲೀಸರಿಗೆ ಬೇಕಾಗಿದ್ದ ಪಿ.ಪಳನಿಯಪ್ಪನ್ ಕೂಡ ಇದ್ದರು ಎಂಬುವುದು ಸುದ್ದಿಯಾಗಿತ್ತು.
ಹೀಗಾಗಿ ತಮಿಳುನಾಡಿನಿಂದ ಡಿವೈಎಸ್ಪಿಗಳಾದ ಸತ್ಯಮೂರ್ತಿ, ವಿಜಯ್ ರಾಘವನ್, ವೇಲು ಮುರುಗನ್ ನೇತೃತ್ವದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪೊಲೀಸರು ರೆಸಾರ್ಟ್ ಮೇಲೆ ದಾಳಿ ನಡೆಸಿದ್ದರು. ಆದರೆ ಆದಾಗಲೇ ರೆಸಾರ್ಟ್ನಿಂದ ಪಳನಿಯಪ್ಪ ಬೇರೆಡೆಗೆ ಕಾಲ್ಕಿತ್ತಿದ್ದರಿಂದ ಪೊಲೀಸರು ಕಾಲಿ ಕೈಯಲ್ಲಿ ಹಿಂತಿರುಗಿದ್ದರು.
ಇಷ್ಟಕ್ಕೂ ಮಾಜಿ ಸಚಿವ ಪಳನಿಸ್ವಾಮಿಯನ್ನು ತಮಿಳುನಾಡು ಪೊಲೀಸರೇಕೆ ಹುಡುಕಿಕೊಂಡು ಬಂದಿದ್ದರು ಎಂಬುದನ್ನು ನೋಡುವುದಾದರೆ ಈತ ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಪನ್ನೀರ್ ಸೆಲ್ವಂ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಈ ವೇಳೆಯಲ್ಲಿ ನಾಮಕ್ಕಲ್ ಮೆಡಿಕಲ್ ಕಾಲೇಜು ಗುತ್ತಿಗೆದಾರ ಸುಬ್ರಹ್ಮಣಿ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದನು.
ಈತನ ಆತ್ಮಹತ್ಯೆಗೆ ಪಳನಿಯಪ್ಪನ್ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಐಪಿಸಿ 306ರಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆಗೊಳಪಡಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇಲ್ಲಿನ ರೆಸಾರ್ಟ್ನಲ್ಲಿರುವ ಮಾಹಿತಿ ಪಡೆದ ಪೊಲೀಸರು ಬಂದಿದ್ದರಾದರೂ ಪಳನಿಯಪ್ಪನ್ ಮಾತ್ರ ಪೊಲೀಸರಿಗೆ ಸಿಕ್ಕಿಲ್ಲ.
ಏಕೆಂದರೆ ಸೆ.10ರಂದು ರೆಸಾರ್ಟ್ಗೆ ಬಂದಿದ್ದ ಇವರು, ಮಾರನೆಯ ದಿನ ಅಂದರೆ ಸೆ.11ರಂದು ಹಿಂತಿರುಗಿದ್ದರು. ಈ ನಡುವೆ ತಮಿಳುನಾಡಿನಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದ ಸುದ್ದಿಯೂ ಕೇಳಿ ಬಂದಿದೆ.
ಇದೆಲ್ಲದರ ನಡುವೆ ಈಗಾಗಲೇ ರೆಸಾರ್ಟ್ನಲ್ಲಿ ಬೀಡು ಬಿಟ್ಟಿರುವ ಸೆಂದಿಲ್ ಬಾಲಾಜಿ ಹಾಗೂ ಇತರ ಮೂವರು ಶಾಸಕರು ತಮಗೆ ಪೊಲೀಸ್ ರಕ್ಷಣೆ ಬೇಕೆಂದು ಸಮೀಪದ ಸುಂಟಿಕೊಪ್ಪ ಠಾಣೆಗೆ ತಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ತಮಿಳುನಾಡು ಪೊಲೀಸರಿಂದ ತಮಗೆ ಕಿರುಕುಳವಾಗುತ್ತಿದೆ ಎಂದು ದೂರು ನೀಡಿದ್ದು, ಡಿವೈಎಸ್ಪಿ ಸಂಪತ್ ಅವರು ಮನವಿ ಅರ್ಜಿ ಸ್ವೀಕರಿಸಿದ್ದಾರೆ. ಈ ಬಗ್ಗೆ ರೆಸಾರ್ಟ್ ಮಾಲೀಕರಿಗೆ ರಕ್ಷಣೆ ನೀಡುವಂತೆ ಸೂಚಿಸಲಾಗುವುದು ಎಂದು ಸಮಜಾಯಿಷಿ ನೀಡಿದ್ದಾರೆ. ಅಗತ್ಯವಿದ್ದರೆ ಸಂಬಂಧಿಸಿದ ಶಾಸಕರನ್ನು ಇರಿಸಿಕೊಂಡಿರುವ ರೆಸಾರ್ಟ್ ಮಾಲೀಕರು ಇಲಾಖೆಗೆ ಶುಲ್ಕ ಪಾವತಿಸಿ ರಕ್ಷಣಾ ವ್ಯವಸ್ಥೆ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಒಟ್ಟಾರೆ ತಮಿಳುನಾಡಿನಿಂದ ಬಂದು ಕೊಡಗಿನಲ್ಲಿ ಬೀಡು ಬಿಟ್ಟಿರುವ ಶಾಸಕರು ರೆಸಾರ್ಟ್ನಲ್ಲಿದ್ದುಕೊಂಡೇ ತಮ್ಮ ರಾಜಕೀಯ ನಡೆಸುತ್ತಿದ್ದಾರೆ.