ಕೊಡಗು: ಪ್ರವಾಹ ಪೀಡಿತ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವ ಹುಚ್ಚು
Recommended Video

ಮೈಸೂರು, ಆಗಸ್ಟ್ 27 : ಕೊಡಗು ಪ್ರವಾಹದಿಂದ ಸೂರು ಕಳೆದುಕೊಂಡು ನೊಂದವರು ಒಂದೆಡೆಯಾದರೆ, ಈ ನೋವಿನ ಸಮಯದಲ್ಲೂ ಸೆಲ್ಫಿ ತೆಗೆದುಕೊಳ್ಳುವ ಹುಚ್ಚರು ಒನ್ನೊಂದು ಕಡೆ.
ಹೌದು, ಪ್ರವಾಹ ಪೀಡಿತ ಜಾಗಗಳಲ್ಲಿ ಹೋಗಿ ಸಾಹಸಮಯವಾಗಿ ಸೆಲ್ಫಿ ತೆಗೆಸಿಕೊಳ್ಳುವವರ ಸಂಖ್ಯೆ ಕೊಡಗಿನಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ದುರಂತ ಸ್ಥಳಗಳು ಇದೀಗ ಟೂರಿಸ್ಟ್ ಸ್ಪಾಟ್ಗಳಾಗಿ ಬದಲಾದಂತೆ ಗೋಚರವಾಗುತ್ತಿದೆ.

ಮಳೆಯ ಆರ್ಭಟವೇನೋ ಇಳಿಮುಖವಾಗುತ್ತಿದೆ. ಇದರೊಟ್ಟಿಗೆ ಈಗ ಪರಿಸ್ಥಿತಿ ಹೇಗಿದೆ ಎಂಬ ಕುತೂಹಲದಲ್ಲಿಯೇ ದುರಂತ ತಾಣಗಳನ್ನು ವೀಕ್ಷಿಸಲು ಬರುತ್ತಿದ್ದಾರೆ. ಪ್ರವಾಹದಿಂದ ದುರಂತಕ್ಕೀಡಾದ ಸ್ಥಳಕ್ಕೆ ಬಂದು ಫೊಟೊಗಳನ್ನು ತೆಗೆಸಿಕೊಳ್ಳುತ್ತಿದ್ದಾರೆ ಹಲವರು. ಇದು ಜಿಲ್ಲಾಡಳಿತಕ್ಕೆ ತಲೆ ನೋವು ತಂದಿದೆ.
ಮಕ್ಕಂದೂರಿನ ಭಾಗದಲ್ಲಿ ಪ್ರಪಾತಕ್ಕೆ ಬಿದ್ದ ಮನೆಯನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಲೇ ಇದ್ದಾರೆ. ಪ್ರಪಾತ ಕಾಣುವಂತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಮಡಿಕೇರಿಯಿಂದ ಅನತಿ ದೂರದಲ್ಲಿರುವ ಈ ಪ್ರದೇಶ ಇದೀಗ ಟೂರಿಸ್ಟ್ ಹಾಟ್ ಸ್ಪಾಟ್ ಆದಂತಿದೆ. ಮಾಧ್ಯಮದಲ್ಲಿ ಹಾಗೂ ಪತ್ರಿಕೆಗಳಲ್ಲಿ ಜಿಲ್ಲೆಯ ಸ್ಥಿತಿಯನ್ನು ನೋಡಿದ ಮಂದಿ ಇದೀಗ ಖುದ್ದು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಆ.31ರ ತನಕ ಜಿಲ್ಲೆಗೆ ಬರಬೇಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ.
ಈ ನಡುವೆ ಕೆಲವರು ದುರಂತ ಸ್ಥಳಗಳಿಗೆ ತೆರಳುವವರಿಂದ ಟಿಕೆಟ್ ಸಂಗ್ರಹಿಸಿ ಎಂದು ಸಲಹೆ ನೀಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸರು ಬರಬೇಡಿ ಎಂದರೂ ಕೇಳದೆ ಭಾರಿ ಸಂಖ್ಯೆಯಲ್ಲಿ ಜನರು ಈ ತಾಣಗಳಿಗೆ ಬರುತ್ತಿರುವುದರಿಂದ ಇಂತಹ ಸ್ಥಳಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಅವರಿಂದ ಪ್ರವೇಶ ಶುಲ್ಕ ಸಂಗ್ರಹಿಸಲಿ. ಇದರಿಂದ ಲಕ್ಷಾಂತರ ರೂ. ಆದಾಯ ಬರಬಹುದು. ಈ ಮೊತ್ತವನ್ನು ಆಯಾ ಪ್ರದೇಶದ ನಿರಾಶ್ರಿತರ ಪುನರ್ವಸತಿಗೆ ಬಳಸಬಹುದು ಎಂದು ಹೇಳುತ್ತಾರೆ ಇಲ್ಲಿನ ನಿವಾಸಿ ದರ್ಶನ್.

ಸದ್ಯ ಜನರ ಕ್ರೇಜ್ ಎಂಬಂತಾಗಿರುವ ಫೇಸ್ ಬುಕ್ ಲೈವ್ ಎಲ್ಲರ ನಿದ್ದೆಗೆಡಿಸಿದೆ. ಅತ್ಯಂತ ಅಪಾಯಕಾರಿಯಾಗಿರುವ ಈ ಪ್ರದೇಶದಲ್ಲಿ ಕೆಲವರು ಅಲ್ಲಿಂದಲೇ ಫೇಸ್ಬುಕ್ನಲ್ಲಿ ಲೈವ್ ನೀಡುತ್ತಿದ್ದಾರೆ. ಕೆಲವರು ವೀಕ್ಷಕ ವಿವರಣೆಯೊಂದಿಗೆ ವಿಡಿಯೋ ಮಾಡುತ್ತಿದ್ದಾರೆ. ಇನ್ನು ಕೆಲವರು ಟಿವಿ ಆಂಕರ್ಗಳಂತೆ ವಿಡಿಯೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತೇಲಿಬಿಡುತ್ತಿದ್ದಾರೆ. ಇಂತಹವುಗಳು ವೈರಲ್ ಆಗುತ್ತಿದ್ದು, ಸಾಕಷ್ಟು ಲೈಕ್ಗಳು ಬರುತ್ತಿವೆ. ಪರಿಣಾಮ, ದಿನದಿಂದ ದಿನಕ್ಕೆ ಪ್ರವಾಸಿಗರ ಒತ್ತಡ ಈ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ. ಜನರು ಹಾಗೂ ವಾಹನಗಳ ಒತ್ತಡದಿಂದ ಮತ್ತೆ ಭೂಮಿ ಕುಸಿಯುವ ಆತಂಕವೂ ಎದುರಾಗಿದೆ.












Click it and Unblock the Notifications