ಜಲಾಶಯ ತುಂಬಿದರೂ ಕೊಡಗು ಕೃಷಿಕರಿಗೆ ಸಂಕಷ್ಟ ತಪ್ಪಿದ್ದಲ್ಲ!
ಮಡಿಕೇರಿ, ಸೆಪ್ಟೆಂಬರ್ 19: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರದ ಕುಸಿತದ ಪರಿಣಾಮ ಕೊಡಗಿಗೆ ತಟ್ಟಿರುವುದರಿಂದ ಧೋ ಎಂದು ಮಳೆ ಸುರಿಯುತ್ತಿರುವ ಕಾರಣ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.
ಕೆಲವೆಡೆ ಭತ್ತದ ಗದ್ದೆಗೆ ನೀರು ನುಗ್ಗಿದ್ದರೆ, ಮತ್ತೆ ಕೆಲವೆಡೆ ರಸ್ತೆ ಮೇಲೆ ನೀರು ಹರಿದು ಸಂಪರ್ಕ ಸ್ಥಗಿತಗೊಂಡಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆ ಸುರಿದಿದ್ದು, ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾಶಯ ತುಂಬಿದೆ. ಹೆಚ್ಚುವರಿ ನೀರು ಹರಿದು ಕಾವೇರಿಯನ್ನು ಸೇರುತ್ತಿದೆ. ಸಾಮಾನ್ಯವಾಗಿ ಜೂನ್ ನಿಂದ ಆಗಸ್ಟ್ ತನಕ ಭಾರೀ ಮಳೆ ಸುರಿದು ಬಳಿಕ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಮುಂಗಾರಿನ ಕೊನೆಯಲ್ಲಿ ಮಳೆ ಸುರಿಯುತ್ತಿದ್ದು, ಮಳೆಯ ಪ್ರಮಾಣ ಜಾಸ್ತಿಯಾಗಿದ್ದರೂ ಇಲ್ಲಿನ ಬೆಳೆಗಾರರಿಗೆ ಯಾವುದೇ ಪ್ರಯೋಜನವಾದಂತೆ ಕಂಡು ಬರುತ್ತಿಲ್ಲ.
ಚೆನ್ನೈನಲ್ಲಿ ಪಂದ್ಯ ಮುಗಿದ ಬಳಿಕ 'ಕಿಂಗ್' ಧೋನಿ ಮಾಡಿದ್ದೇನು?
ಮಳೆ ಸುರಿಯುತ್ತಿರುವ ಕಾರಣ ತೇವಾಂಶ ಜಾಸ್ತಿಯಾಗಿ ಕಾಫಿ ಫಸಲು ಉದುರಿ ನೆಲಕ್ಕೆ ಬೀಳುತ್ತಿದೆ. ಆದರೂ ಮಳೆ ಬರುತ್ತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಿ ಮುಂದಿನ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗದಿದ್ದರೆ ಅಷ್ಟೇ ಸಾಕು ಎಂದು ಬಯಸುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭದಿಂದಲೇ ಆಶಾದಾಯಕ ಮುಂಗಾರು ಮಳೆಯಾಗಿದೆ. ಜೂನ್ ಹಾಗೂ ಜುಲೈನಲ್ಲಿ ತಿಂಗಳಲ್ಲಿ ಸಮರ್ಪಕವಾಗಿ ಮಳೆ ಸುರಿಯದ ಕಾರಣದಿಂದಾಗಿ ಕೆಆರ್ ಎಸ್ ಜಲಾಶಯಕ್ಕೆ ನೀರು ಹರಿದು ಹೋಗದೆ ಜಲಾಶಯ ತುಂಬಿರಲಿಲ್ಲ.ಇದೀಗ ಮಳೆ ಬರುತ್ತಿರುವುದರಿಂದ ನೀರು ಹರಿದು ಹೋಗುತ್ತಿರುವುದರಿಂದ ಸದ್ಯ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 102 ಅಡಿಗೇರಿದೆ.
ಎಷ್ಟು ಮಳೆಯಾಗಿದೆ?
ಇದುವರೆಗೆ ಆಗಿರುವ ಮಳೆಯ ಪ್ರಮಾಣದ ಬಗ್ಗೆ ಹೇಳುವುದಾದರೆ ಮಡಿಕೇರಿಯಲ್ಲಿ 120, ಕಾವೇರಿ ಉಗಮ ಸ್ಥಳ ತಲಕಾವೇರಿಯಲ್ಲಿ 200 ಸೆಂ.ಮೀ. ಮಳೆ ದಾಖಲಾಗಿದೆ. ವೀರಾಜಪೇಟೆ ವ್ಯಾಪ್ತಿಯಲ್ಲಿ 61.77 ಸೆಂ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ 60 ಸೆಂ.ಮೀ. ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಜಿಲ್ಲೆಯ ಬೆಳೆಗಾರರು ಕಾಫಿ, ಒಳ್ಳೆಮೆಣಸು ಶುಂಠಿ ಕೃಷಿಯ ಮೇಲೆ ವ್ಯತ್ತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಭತ್ತದ ಕೃಷಿಗೆ ಹಾನಿ
ಜೂನ್ ನಲ್ಲಿ ಮಳೆಯಾಗದ ಕಾರಣದಿಂದ ಭತ್ತದ ಕೃಷಿಗೆ ತೊಂದರೆಯಾಗಿತ್ತು. ಈಗ ಮಳೆ ಬರುತ್ತಿರುವುದರಿಂದ ಮಾಡಿದ ಭತ್ತದ ಕೃಷಿಗೆ ಹಾನಿಯಾಗುತ್ತಿದೆ. ಸೋಮವಾರಪೇಟೆಯ ಪುಷ್ಟಗಿರಿ ಬೆಟ್ಟಶ್ರೇಣಿಯ ಬೆಟ್ಟದಳ್ಳಿ, ಹಂಚಿನಳ್ಳಿ, ಶಾಂತಳ್ಳಿ, ಕುಂದಳ್ಳಿ, ತೋಳೂರುಶೆಟ್ಟಳ್ಳಿ, ಸೂರ್ಲಬ್ಬಿ, ಕುಂಬಾರಗಡಿಗೆ ಭಾಗದಲ್ಲೂ ಮಳೆ ಬೀಳುತ್ತಿದ್ದು ಕುಮಾರನದಿಗೆ ನೀರು ಹರಿದು ಹೋಗುತ್ತಿದೆ.
ನಿಲ್ಲು ಮಳೆರಾಯ!
ಜಿಲ್ಲೆಯಾದ್ಯಂತ ಮಳೆಯ ಕಾರಣ ಕೆಲವೆಡೆಯಿರುವ ತೊರೆಗಳು, ಜಲಪಾತಗಳು ತುಂಬಿಹರಿಯುತ್ತಿವೆ. ದಸರಾ ಹತ್ತಿರ ಬರುತ್ತಿರುವ ವೇಳೆಯಲ್ಲೇ ಮಳೆ ಸುರಿಯುತ್ತಿರುವುದು ಜನರಿಗೆ ಬೇಸರ ಹುಟ್ಟಿಸುತ್ತಿದೆ. ದಸರಾ ವೇಳೆಗೆ ಮಳೆ ಕಡಿಮೆಯಾದರೆ ಸಾಕೆಂದು ಜನ ಕಾಯುತ್ತಿದ್ದಾರೆ.
ಜಲಾಶಯ ಭರ್ತಿಯಾದರೂ ಸಂಕಷ್ಟ ತಪ್ಪಿದ್ದಲ್ಲ
ಈ ಸಮಯದಲ್ಲಿ ನದಿ ಉಕ್ಕಿ ಹರಿಯುವುದನ್ನು ಜನ ನೋಡಿರಲಿಲ್ಲ. ಈಗ ಎಲ್ಲೆಂದರಲ್ಲಿ ಜಲಾವೃತಗೊಂಡ ದೃಶ್ಯಗಳು ಎದ್ದು ಕಾಣುತ್ತಿದೆ. ಹೀಗೆಯೇ ಮುಂದುವರೆದರೆ ಕೆಆರ್ ಎಸ್ ಜಲಾಶಯ ಭರ್ತಿಯಾಗಬಹುದು. ಆದರೆ ಕೊಡಗಿನ ಬೆಳೆಗಾರರು ಸಂಕಷ್ಟ ತಪ್ಪಿದಲ್ಲ.