ಕೊಡಗು ಎಸ್ಪಿ ರಾಜೇಂದ್ರ ಪ್ರಸಾದ್ರವರಿಗೆ ರಾಷ್ಟ್ರಪತಿ ಪದಕ
ಮಡಿಕೇರಿ, ಆಗಸ್ಟ್ 14: ಮೂಲತಃ ಕೋಲಾರದವರಾಗಿದ್ದು ಇದೀಗ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಪಿ.ರಾಜೇಂದ್ರ ಪ್ರಸಾದ್ ಅವರಿಗೆ ಅತ್ಯುತ್ತಮ ಸೇವೆಗಾಗಿ ಸ್ವಾತಂತ್ರ್ಯೋತ್ಸವದ ಸಂದರ್ಭ ನೀಡಲಾಗುವ ರಾಷ್ಟ್ರಪತಿಗಳ ಪದಕ ದೊರೆತಿದೆ.
ರಾಜ್ಯದ 21 ಹೆಮ್ಮೆಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ
ಕೊಡಗು ಜಿಲ್ಲಾ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಅವರು ಕಳೆದ ಒಂದು ವರ್ಷದಲ್ಲಿ ಅನೇಕ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೋಮು ಸಂಘರ್ಷಗಳು ಮರುಕಳಿಸದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಸಮಾಜದಲ್ಲಿ ಸಾಮರಸ್ಯ ಮೂಡುವಂತೆ ಮಾಡಿರುವುದು ವಿಶೇಷವಾಗಿದೆ.
ತಮ್ಮ ಅತ್ಯುತ್ತಮ ಸೇವೆಯ ಮೂಲಕವೇ ಸಾರ್ವಜನಿಕರ ಹಾಗೂ ಸಂಘ, ಸಂಸ್ಥೆಗಳ ಮೆಚ್ಚುಗೆಗೆ ಪಾತ್ರರಾಗಿರುವ ಪಿ.ರಾಜೇಂದ್ರ ಪ್ರಸಾದ್, ಕೊಡಗಿನಲ್ಲಿ ಸೇವೆಯಲ್ಲಿರುವಾಗ ರಾಷ್ಟ್ರಪತಿಗಳ ಪದಕ ಲಭಿಸಿರುವುದು ಹೆಚ್ಚು ಹರ್ಷವನ್ನುಂಟು ಮಾಡಿರುವುದಾಗಿ ತಿಳಿಸಿದ್ದಾರೆ.
1999ರ ಅವಧಿಯಲ್ಲಿ 3 ವರ್ಷಗಳ ಕಾಲ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಮತ್ತು ಅಂದಿನ ಎಸ್ಪಿ ಉಮೇಶ್ ಅವರು ರಜೆಯಲ್ಲಿದ್ದಾಗ ಪ್ರಭಾರ ಎಸ್ಪಿಯಾಗಿ ರಾಜೇಂದ್ರ ಪ್ರಸಾದ್ ಅವರು ಕಾರ್ಯ ನಿರ್ವಹಿಸಿದ್ದಾರೆ. 1997ರಲ್ಲಿ ಕೆಎಸ್ಪಿಎಸ್ ಹಾಗೂ 2006 ರಲ್ಲಿ ಐಪಿಎಸ್ ಮಾಡಿದ್ದು, ಮೂಲತ: ಕೋಲಾರ ಜಿಲ್ಲೆಯವರಾಗಿದ್ದಾರೆ.
ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪೊಲೀಸ್ ಇಲಾಖೆಗೆ ಸೇರುವುದಕ್ಕೂ ಮೊದಲು 12 ವರ್ಷಗಳ ಕಾಲ ತುಮಕೂರು, ಮೂಡಿಗೆರೆ ಹಾಗೂ ಬೆಂಗಳೂರಿನಲ್ಲಿ ಉಪನ್ಯಾಸಕ ವೃತ್ತಿಯನ್ನು ಮಾಡಿದ್ದಾರೆ. ಕಾನೂನು ಪದವಿ ಪಡೆದಿದ್ದಾರೆ.