ರಕ್ಷಣಾ ಕಾರ್ಯ ಸುಗಮ, ಪೊಲೀಸ್ ಸಿಬ್ಬಂದಿ ಒಂದು ದಿನದ ಸಂಬಳ ಕೊಡಗಿಗೆ
ಕೊಡಗು, ಆಗಸ್ಟ್ 24: ಪೊಲೀಸ್ ಇಲಾಖೆಯು ಸಿಬ್ಬಂದಿಯು ತಮ್ಮ ಒಂದು ದಿನದ ಸಂಬಳವನ್ನು ಕೊಡಗು ಸಂತ್ರಸ್ತರಿಗೆಂದು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದೆ ಎಂದು ಡಿಜಿಪಿ ನೀಲಮಣಿ ರಾಜು ಹೇಳಿದರು.
ಕೊಡಗಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಬ್ಬಂದಿಯ ಒಟ್ಟು ಸಂಬಳ 5.54 ಕೋಟಿ ರೂಪಾಯಿ ಆಗಲಿದ್ದು, ಎಲ್ಲ ಮೊತ್ತವನ್ನು ಕೊಡಗಿನ ಸಂತ್ರಸ್ತರಿಗಾಗಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕೊಡಗಿನಲ್ಲಿ ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಅವರು, ಹವಾಮಾನ ವೈಪರಿತ್ಯದಿಂದಾಗಿ ಡ್ರೋಣ್ ಕಾರ್ಯಾಚರಣೆಗೆ ಅಡಚಣೆ ಆಗುತ್ತಿದೆ ಹಾಗಾಗಿ ರಾಪ್ಟರ್ ಮುಖಾಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪೊಲೀಸ್ ಶ್ವಾನ ದಳವನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದರು.

ಕಾರ್ಯಾಚರಣೆಗೆ ಸವಲತ್ತು ಕೊರತೆ ಇಲ್ಲ
ಕಾರ್ಯಾಚಾರಣೆಗೆ ಬಂದ ಎಲ್ಲ ತಂಡವನ್ನು ಹಾಗೇ ಉಳಿಸಿಕೊಂಡಿದ್ದು, ಕಾರ್ಯಾಚರಣೆಗೆ ಸವಲತ್ತುಗಳು ಕೊರತೆ ಇಲ್ಲ ಎಂದರು. ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳನ್ನೂ ಕೊಡಗಿಗೆ ಕರೆಸಿಕೊಂಡಿದ್ದು, ಅವರನ್ನು ಪರಿಹಾರ ಕೇಂದ್ರಗಳಿಗೆ ನಿಯೋಜಿಸಲಾಗಿದೆ ಎಂದರು.

10 ಮಂದಿ ಸಾವು, 9 ಮಂದಿ ಕಾಣೆ,
ಈವರೆಗೆ 10 ಮಂದಿ ಸಾವಿಗೀಡಾಗಿದ್ದಾರೆ ಅವರ ಮೃತದೇಹ ಸಿಕ್ಕಿದೆ. 9 ಮಂದಿ ಕಾಣೆಯಾಗಿದ್ದು ಅವರಲ್ಲಿ ನಾಲ್ಕು ಜನ ಬದುಕುಳಿದಿರುವ ಸಾಧ್ಯತೆ ಕಡಿಮೆ. ಎಲ್ಲರ ಪತ್ತೆಗಾಗಿ ಪೊಲೀಸ್ ಸಿಬ್ಬಂದಿ ಅವಿರತ ಶ್ರಮಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನಿನ್ನೆ ಕಾಲೂರು ಗ್ರಾಮದಲ್ಲಿ ಒಬ್ಬ ಹುಡುಗ ನಾಪತ್ತೆ
ನಿನ್ನೆ ಕಾಲೂರು ಗ್ರಾಮದಲ್ಲಿ ಒಬ್ಬ ಬಾಲಕ ಕಾಣೆಯಾಗಿದ್ದಾನೆ. ನೀರಿನಲ್ಲಿ ಕೊಚ್ಚಿಹೋಗಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ. ರಕ್ಷಣೆಗಾಗಿ ತಂಡ ಹೋಗಿದೆ. ದೊರಕುವ ವಿಶ್ವಾಸವಿದೆ. ನಾಪತ್ತೆಯಾಗಿರುವ ಗೌರಮ್ಮ, ಮಂಜುಳ, ಗಿಲ್ಬರ್ಟ್, ಚಂದ್ರಪ್ಪ ಅವರುಗಳುಗಳು ಕಾಣೆಯಾಗಿದ್ದು, ಅವರು ಬದುಕಿರುವ ಸಾಧ್ಯತೆ ಕಡಿಮೆ ಎಂದು ಅವರು ಮಾಹಿತಿ ನೀಡಿದರು.

ಅಪಾಯಕಾರಿ ಸ್ಥಳಗಳಲ್ಲಿ ಪ್ರವೇಶ ನಿರ್ಭಂಧ
ಅಪಾಯಕಾರಿ ಸ್ಥಳಗಳಿಂದ ಒಂದು ಕಿ.ಮೀಟರ್ ವ್ಯಾಪ್ತಿಯಲ್ಲಿ ಮಾನವ ಪ್ರವೇಶ ನಿಷೇಧಿಸಲಾಗಿದೆ. ಸೇನಾಪಡೆಗಳ ನೆರವನ್ನೂ ಪಡೆಯಲಾಗಿದೆ. ಮತ್ತೆ ಮಳೆ ಬಂದರೂ ಜೀವಹಾನಿ ಆಗದಂತೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

12 ಪೊಲೀಸ್ ಗೃಹಗಳೂ ಅಪಾಯದ ಸ್ಥಿತಿಯಲ್ಲಿ
ಪರಿಹಾರ ಸಾಮಗ್ರಿಗಳು ದುರ್ಬಳಕೆ ಆಗುತ್ತಿರುವ ಬಗ್ಗೆ ಈ ವರೆಗೆ ಯಾವ ದೂರು ಬಂದಿಲ್ಲ. ಆದರೂ ಈ ಬಗ್ಗೆ ನಿಗಾ ವಹಿಸಲು ತಂಡವನ್ನು ರಚಿಸಲಾಗುವುದು. 12 ಪೊಲೀಸ್ ಗೃಹಗಳೂ ಸಹ ಅಪಾಯದ ಸ್ಥಿತಿಯಲ್ಲಿದ್ದು ಅಲ್ಲಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications