ಕೊರೊನಾ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಕ್ಕೆ ಅಂಗಡಿ ಖಾಲಿ ಮಾಡಿಸಿದ ಮಾಲೀಕ
ಮಡಿಕೇರಿ, ಅಕ್ಟೋಬರ್ 13: ಕೊರೊನಾ ವೈರಸ್ ಎಂಬ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಲೇ ಸಾಗಿದೆ. ಇವತ್ತು ಇದ್ದವರು ನಾಳೆ ಇರುತ್ತೀವೋ ಇಲ್ಲವೋ ಎಂದು ಹೇಳುವುದು ಕಷ್ಟ.
ಇಂತಹ ಸಂಕಷ್ಟ ಸಮಯದಲ್ಲಿ ಕೊರೊನಾ ಸಾವು ಎಂದರೆ ಸ್ವತಃ ಮನೆಯವರೇ ಹೆಣ ಮುಟ್ಟುವುದಿಲ್ಲ. ಎಲ್ಲರೂ ಭಯಭೀತರಾಗುವ ಸಮಯದಲ್ಲೂ ಜೀವವನ್ನೆ ಪಣಕ್ಕಿಟ್ಟು ಕೊರೊನಾ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರನ್ನು ಅಂಗಡಿ ಮಾಲೀಕನೊಬ್ಬ ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ಮಡಿಕೇರಿ ಸಮೀಪದ ಹಾಸನ ಜಿಲ್ಲೆಯ ಗಡಿ ಗ್ರಾಮವಾದ ಕೊಡ್ಲಿಪೇಟೆಯಲ್ಲಿ ನಡೆದಿದೆ.

ಅಂತ್ಯಸಂಸ್ಕಾರದಲ್ಲಿ ಇತರ 6 ಮಂದಿಯೊಂದಿಗೆ ಭಾಗಿ
ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಯಾರೂ ಮುಂದೆ ಬರದಿರುವ ಸಮಯದಲ್ಲಿ ಸೇವಾ ಭಾರತಿ ಸಂಸ್ಥೆ ಬಹುತೇಕ ಎಲ್ಲ ಊರುಗಳಲ್ಲೂ ಅಂತ್ಯಸಂಸ್ಕಾರ ಮಾಡುತ್ತಿದೆ. ಅದರಂತೆ ಕೊಡ್ಲಿಪೇಟೆಯಲ್ಲೂ ದಿನೇಶ ಎಂಬ ಸ್ವಯಂ ಸೇವಕ ಇತರರೊಂದಿಗೆ ಸೇರಿ ಕಳೆದ ಅ.9 ರಂದು ಮೃತಪಟ್ಟ ಬ್ಯಾಡಗೊಟ್ಟದ ಮಲ್ಲಳ್ಳಿ ಗ್ರಾಮದ ಮಹಿಳೆಯ ಅಂತ್ಯಸಂಸ್ಕಾರದಲ್ಲಿ ಇತರ 6 ಮಂದಿಯೊಂದಿಗೆ ಭಾಗಿಯಾಗಿದ್ದರು. ಸರ್ಕಾರದ ಸಕಲ ಮಾರ್ಗಸೂಚಿಯನ್ನು ಚಾಚೂ ತಪ್ಪದೇ ಪಾಲಿಸಿ ಇತರ ಸ್ವಯಂ ಸೇವಕರೊಂದಿಗೆ ಸೇವಾ ಕಾರ್ಯ ಕೈಗೊಂಡಿದ್ದ ದಿನೇಶ್ ಅವರಿಗೆ ಮಾರನೇ ದಿನ ಅಚ್ಚರಿ ಕಾದಿತ್ತು.

ಅಂಗಡಿ ಖಾಲಿ ಮಾಡಿ ಎಂದು ಒತ್ತಡ
ತಾನು ಕಳೆದ ಒಂದೂವರೆ ವರ್ಷದಿಂದ ಬಾಡಿಗೆ ಕಟ್ಟಿಕೊಂಡು ವ್ಯಾಪಾರ ನಡೆಸುತ್ತಿದ್ದ ಅಂಗಡಿಯ ಮಾಲೀಕರು, ದಿಢೀರಾಗಿ ಬಂದು ಅಂಗಡಿ ಖಾಲಿ ಮಾಡುವಂತೆ ಸೂಚಿಸಿದರು. ಇದರಿಂದ ಆಘಾತಕ್ಕೊಳಗಾದ ದಿನೇಶ್ ಅವರು ಕಾರಣ ಕೇಳಿದಾಗ, ನೀವು ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ್ದೀರಿ, ನೀವು ಇಲ್ಲಿರುವುದು ಬೇಡ, ಅಂಗಡಿ ಖಾಲಿ ಮಾಡಿ ಎಂದು ಒತ್ತಡ ಹೇರಿದ್ದಾರೆ.

ಜೀವನಾಧಾರವಾಗಿದ್ದ ಅಂಗಡಿ ಕಳೆದುಕೊಳ್ಳುವಂತಾಗಿದೆ
ಮಾಲೀಕರಿಗೆ ವಾಸ್ತವಾಂಶವನ್ನು ವಿವರಿಸಿದರೂ ಕೇಳುವ ಗೋಜಿಗೆ ಹೋಗದೇ ಬೇರೊಂದು ಬೀಗವನ್ನು ತಾವೇ ಜಡಿದಿದ್ದಾರೆ. ಆಸ್ಟ್ರೇಲಿಯಾದಲ್ಲಿದ್ದ ಅಂಗಡಿ ಮಾಲೀಕರು ಕಳೆದ ನಾಲ್ಕು ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದರು.
ಕಳೆದ ಒಂದೂವರೆ ವರ್ಷಗಳಿಂದ 'ಮಾಧವ ಸ್ವದೇಶಿ ವಸ್ತು ಭಂಡಾರ'ದ ಹೆಸರಿನಲ್ಲಿ ಅಂಗಡಿ ತೆರೆದು ಸ್ವದೇಶಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ದಿನೇಶ್ ಅವರು, ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿದ್ದಕ್ಕೆ ಇದೀಗ ಜೀವನಾಧಾರವಾಗಿದ್ದ ಅಂಗಡಿ ಕಳೆದುಕೊಳ್ಳುವಂತಾಗಿದೆ.
Recommended Video

ಕೊರೊನಾ ವೈರಸ್ ಗೆ ಯಾವುದೇ ಔಷಧಿಯಿಲ್ಲ
ಸದ್ಯಕ್ಕೆ ಕೊರೊನಾ ವೈರಸ್ ಗೆ ಯಾವುದೇ ಔಷಧಿಯಿಲ್ಲ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕೊರೊನಾದೊಂದಿಗೆ ಬದುಕಬೇಕು ಎಂದು ಸ್ವತಃ ಪ್ರಧಾನಿಗಳೇ ಹೇಳಿದ್ದಾರೆ. ಇದರೊಂದಿಗೆ ಸೋಂಕಿಗೆ ತುತ್ತಾದ ವ್ಯಕ್ತಿಗಳ ಅಂತ್ಯಕ್ರಿಯೆ ನಡೆಸುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಸೇವಾ ಮನೋಭಾವನೆಯಡಿ ಮೃತರ ಅಂತ್ಯ ಸಂಸ್ಕಾರ ನೆರವೇರಿಸಿದಕ್ಕೆ, ಅಂಗಡಿ ಖಾಲಿ ಮಾಡಿಸುವ ಮೂಲಕ ಮಾಲೀಕರು ಮರೆಯಲಾರದ ಉಡುಗೊರೆ ನೀಡಿದ್ದಾರೆ! "ಛೇ ಇಂತಹವರೂ ಇದ್ದಾರಾ?" ಎಂದು ಸ್ಥಳೀಯರು ಶಾಪ ಹಾಕುತ್ತಿದ್ದಾರೆ.












Click it and Unblock the Notifications