ಕೊಡಗಿನಲ್ಲಿ 'ಬ್ರಹ್ಮ' ಕುಲಸ್ಥರಾದ ಬ್ರಾಹ್ಮಣರ ಬೆನ್ನಿಗೆ ನಿಲ್ಲಲು ಕರೆ: ಕಾರಣವೇನು?
ಮಡಿಕೇರಿ, ಜನವರಿ 30: ಕಟ್ಟೆಮಾಡು ಮೃತ್ಯುಂಜಯ ದೇಗುಲದ ಅರ್ಚಕರ ಮೇಲಿನ ಹಲ್ಲೆ ಜಿಲ್ಲೆಯಲ್ಲಿ ಕಿಡಿಹೊತ್ತಿಸಿದೆ. ಅರ್ಚಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರೆ, ಅತ್ತ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ನಡುವೆ ಕರ್ನಾಟಕ ಅರೆಭಾಷೆ,ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ(ರಿ) ಯ ಸದಸ್ಯ ಸೂದನ.ಎಸ್.ಈರಪ್ಪ ಅವರು ಘಟನೆಗೆ ಸಂಬಂಧಿಸಿದಂತೆ ಬರೆದ ಪತ್ರ ಗಮನಸೆಳೆದಿದೆ.
ಇಷ್ಟಕ್ಕೂ ಸೂದನ ಈರಪ್ಪ ಬರೆದ ಪತ್ರದಲ್ಲಿ ಏನಿದೆ? ಇಲ್ಲಿದೆ ವಿವರ... ದೇವರು ಮತ್ತು ಭಕ್ತರ ಪ್ರತಿನಿಧಿಯಾಗಿ ಗರ್ಭ ಗುಡಿಯಲ್ಲಿ ಪೂಜಿಸುವ ಅರ್ಚಕ ಹಾಗೂ ಅವರ ತಾಯಿಯ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ. ಇಂತಹ ಹೇಯಕೃತ್ಯವನ್ನು ಕೆಲವರು ವೈಯಕ್ತಿಕ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಖಂಡನೀಯ. ಕಾನೂನಿನ ಕುಣಿಕೆಯಿಂದ ಹಲ್ಲೆ ನಡೆಸಿದವರು ತಪ್ಪಿಸಿಕೊಂಡರು "ಬ್ರಹ್ಮಶಾಪ" ಇವರಿಗೆ ತಪ್ಪಿದ್ದಲ್ಲ.

ಅರ್ಚಕರ ಮೇಲೆ ಹಲ್ಲೆ ನಡೆಸಿರುವುದು 'ದೇವರ ಮೇಲೆ ಹಲ್ಲೆ ಮಾಡಿದಷ್ಟೆ ಪಾಪಕಾರ್ಯ. ಹಿಂದು 'ಸಂಸ್ಕೃತಿ'ಯಲ್ಲಿ ಅರ್ಚಕರು ಶಾಸ್ತ್ರ- ಪುರಾಣ, ವೈದಿಕ ಮಂತ್ರ ಗಳನ್ನು ಪಠಣ ಮಾಡಿ ಗರ್ಭ ಗುಡಿಯಲ್ಲಿ ಪೂಜಿಸಿ ನಮ್ಮನ್ನು ಸಂತೃಪ್ತಿಗೊಳಿಸುತ್ತಾರೆ. 'ಬ್ರಹ್ಮ' ಕುಲಸ್ಥರಾದ ಬ್ರಾಹ್ಮಣರ ಬೆನ್ನಿಗೆ ಎಲ್ಲರೂ ನಿಲ್ಲಬೇಕಾಗಿದೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು 750ಕ್ಕೂ ಹೆಚ್ಚು ದೇವಾಲಗಳಿವೆ ಅವರಲ್ಲಿ 650ಕ್ಕೂ ಹೆಚ್ಚು ದೇವಾಲಯಗಳಲ್ಲಿ ಬ್ರಾಹ್ಮಣರೆ ಅರ್ಚಕರಾಗಿದ್ದಾರೆ. ಜಿಲ್ಲೆಯಲ್ಲಿ ಬ್ರಾಹ್ಮಣರ ಸಂಖ್ಯೆ 20,000ಕ್ಕೂ ಹೆಚ್ಚಿದ್ದಾರೆ. ಈ ಘಟನೆಯಿಂದ ಆ ಜನಾಂಗಕ್ಕೆ ನೋವು ಉಂಟಾಗಿದೆ. ಶಾಂತಿ ಹಾಗೂ ಸಂಸ್ಕಾರ ಬೋಧಿಸುತ್ತಾ, ಸರ್ವೆ ಜನ ಸುಖಿನೋ ಭವಂತು ಎಂದು ಪ್ರತಿ ದಿನ ಪ್ರಾರ್ಥಿಸುವ ಅರ್ಚಕರನ್ನು, ಅವರ ಕುಟುಂಬದವರನ್ನು ಈ ರೀತಿ ಅಮಾನುಷ ರೀತಿಯಲ್ಲಿ ಮೂರ್ನಾಡಿನ ಪಟ್ಟಣದ ಹೃದಯ ಭಾಗದಲ್ಲಿರುವ ಅವರ ಮನೆಗೆ ತೆರಳಿ ರಾಜಾರೋಷವಾಗಿ ಹಲ್ಲೆ ಮಾಡಿ ಹೇಡಿಯಂತೆ ತಲೆ ಮಾರಿಸಿಕೊಂಡಿದ್ದು ನಿಜಕ್ಕೂ ಘೋರ ದುರಂತ.

ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ವಿಷಾದನೀಯ
ಕಟ್ಟೆಮಾಡು "ಮಹಾ ಮೃತ್ಯುಂಜಯ" ದೇವಸ್ಥಾನದ ವಿಚಾರವನ್ನು ನೆಪಮಾಡಿಕೊಂಡು ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ಜಾತಿನಿಂದನೆ, ವ್ಯಕ್ತಿನಿಂದನೆ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಲ್ಲಿ ನಿರತರಾಗಿರುವುದು ವಿಷಾದನೀಯ. ಕೊಡಗಿನ ಎಲ್ಲಾ ಗ್ರಾಮಗಳಲ್ಲಿ, ಎಲ್ಲಾ ವರ್ಗದ ಜನರು ಕಷ್ಟ-ಸುಖ, ಸಭೆ-ಸಮಾರಂಭಗಳಲ್ಲಿ ಪಾಲ್ಗೊಂಡು ಅನೋನ್ಯತೆಯಿಂದ ಬಾಳುತ್ತಿದ್ದಾರೆ. ಬಹಳಷ್ಟು ಮಂದಿಗೆ ಇನ್ನು ಸಹ ಜಾತಿ ಎಂಬ 'ವಿಷಜಂತು' ವಿನ ಬಗ್ಗೆ ಗೊತ್ತೆ ಇಲ್ಲ. ಸಹಬಾಳ್ವೆಯಲ್ಲೆ ಇವರು ತೊಡಗಿದ್ದಾರೆ. ಆದರೆ ಕೆಲವೇ ಕೆಲವು ವ್ಯಕ್ತಿಗಳು ಇಂತಹವರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ವಿಷಾದನೀಯ.
ಗೌರವಯುತವಾಗಿ ಬದುಕಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಕೊಡಗು ಯಾವ ಜನಾಂಗದ ಸ್ವತ್ತು ಅಲ್ಲ. ಯಾರು ಕೂಡ ನೇರವಾಗಿ ಮಣ್ಣಿನಡಿಯಿಂದ ಹುಟ್ಟಿಬಂದಿಲ್ಲ. ಹೆತ್ತ ತಾಯಿಯ ಗರ್ಭದಿಂದಲೇ ಜನಿಸಿದವರು. ಯಾವ ಜಾತಿಯವರ ಇತಿಹಾಸ- ಪುರಾಣಗಳನ್ನು ಯಾರು ಸಹ ಕೆದಕಿ ಜನಸಾಮಾನ್ಯರನ್ನು ಉದ್ರೇಕಗೊಳಿಸುವುದು ಬೇಡ. ಹೊಸ ಇತಿಹಾಸದತ್ತ ನಾವು ಸಮಾನ ಮನಸ್ಕರಾಗಿ ಮುನ್ನುಗ್ಗಬೇಕು. ಕೊಡವರಲ್ಲಿ ಹಾಗೂ ಗೌಡರಲ್ಲಿ ನನ್ನೊಂದು ನೇರ ಪ್ರಶ್ನೆ, ವಿವಾಹ-ಸಾವು, ಇನ್ನಿತರ ಕಷ್ಟ- ಸುಖಗಳಲ್ಲಿ ಅಗತ್ಯ ಸಹಕಾರ ಬೇಕಾದಾಗ ಪರಸ್ಪರ ಅವಲಂಬಿಸಬಾರದು ಎಂದು ಹೇಳಿಕೆ ನೀಡಿ. ನಿಮ್ಮ ತಾಕತ್ತು ನೋಡೋಣ. ಕೊಡಗಿನಲ್ಲಿ ನಿಮ್ಮ ನೆರೆಕರೆಯಲ್ಲಿ ಎಲ್ಲಾ ವರ್ಗದವರು ಇದ್ದು, ಅನೋನ್ಯತೆಯೊಂದೆ ಮಾರ್ಗ.
ಸದ್ಯ ರಾಜಕಾರಣಿಗಳ ಮೌನ ಅಸಹನೀಯ
ತಮ್ಮ ಸ್ವಾರ್ಥಕೊಸ್ಕರ ರಾಜಕಾರಣಿಗಳು ಕೆಲವು ವ್ಯಕ್ತಿಗಳನ್ನು ಬೆಳಸಿ ಜಾತಿ ಮೂಲಕ ಮತದ ಬೇಟೆಗಾಗಿ ಬಳಸಿಕೊಂಡು ನಂತರ ಏನೂ ಅರಿಯದವರಂತೆ ಮೌನವಾಗಿ ಕುಳಿತುಕೊಂಡಿದ್ದಾರೆ. ಇಂತಹವರ ಬಗ್ಗೆ ಜನಸಾಮಾನ್ಯರು ಅರಿತುಕೊಳ್ಳಬೇಕಾಗಿದೆ. ಕಟ್ಟೆಮಾಡು "ಮಹಾ ಮೃತ್ಯುಂಜಯ" ದೇವಸ್ಥಾನವನ್ನು ಆ ಗ್ರಾಮದವರು, ಸುತ್ತ ಮುತ್ತಲಿನ ದಾನಿಗಳೊಂದಿಗೆ ಪುನರ್ ನಿರ್ಮಾಣ ಮಾಡಿದ್ದಾರೆ. ಜ್ಯೋತಿಷಿ- ತಂತ್ರಿಗಳ ಮಾರ್ಗದರ್ಶನದಂತೆ ಪೂಜಕಾರ್ಯಗಳು ನಡೆಯುತ್ತಿವೆ. ಇಲ್ಲಿಗೆ ಬರುವ ಭಕ್ತಾದಿಗಳು ಎಲ್ಲರೂ ಸಮಾನರು ಎಂಬ ಮಾರ್ಗಸೂಚಿಯನ್ನು ಇವರು ಅಳವಡಿಸಿಕೊಂಡಿದ್ದಾರೆ.
ಈ ವಿವಾದವನ್ನು ಅವರುಗಳೆ ಬಗೆಹರಿಸಲಿ. ಮೂರನೇ ವ್ಯಕ್ತಿಗಳ ಅಗತ್ಯ ಏಕೆ ಬೇಕು? ನಾವು ದೇವರನ್ನು ನಿರ್ಮಲ ಮನಸ್ಸಿನಿಂದ ಪೂಜಿಸಬೇಕೆ ಹೊರತು, ಇಲ್ಲಿ ದೇಹದ ಮೇಲೆ ಧರಿಸುವ ಯಾವುದೇ ಧಿರಿಸು ಅಲ್ಲ. ಹುಟ್ಟುವಾಗ ಬೆತ್ತಲೆ, ಹೋಗುವಾಗ ಸಹ ಬೆತ್ತಲೆ. ಪಾಪ- ಕರ್ಮ-ಧರ್ಮಗಳನ್ನು ಮಾತ್ರ ನಾವು ಸಾಯುವಾಗ ಹೊತ್ತುಕೊಂಡು ಹೋಗುತ್ತೇವೆ. ಆಸ್ತಿ-ಸಂಪತ್ತು-ವಸ್ತ್ರವನ್ನಲ್ಲ.












Click it and Unblock the Notifications