ವಲಸಿಗರಿಗೆ ಆಧ್ಯತೆ, ಕೊಡಗು ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ
ಕೊಡಗು, ಜೂನ್ 26 : ಕೊಡಗು ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಕಾಂಗ್ರೆಸ್ ಜಿಲ್ಲಾ ಪ್ರಬಾರ ಅಧ್ಯಕ್ಷರ ವಿರುದ್ಧವೇ ನಾಯಕರು ಅಸಮಾಧಾನಗೊಂಡಿದ್ದು, ಬ್ಲಾಕ್ ಅಧ್ಯಕ್ಷರೊಬ್ಬರು ಜಿಲ್ಲಾಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹಾಗೆನೋಡಿದರೆ ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ನೊಳಗೆ ಶೀತಲ ಸಮರಗಳು ಶುರುವಾಗಿದ್ದು, ಒಬ್ಬರನ್ನು ಮತ್ತೊಬ್ಬರು ಕಾಲೆಳೆಯುತ್ತಲೇ ಸಾಗುತ್ತಿರುವುದು ಕಂಡು ಬಂದಿದೆ.
ಜಿಲ್ಲಾ ಕಾಂಗ್ರೆಸ್ ಘಟಕಗಳ ಬಿಕ್ಕಟ್ಟು ಶಮನಕ್ಕೆ ವೇಣುಗೋಪಾಲ್ ಪ್ರವಾಸ
ಇದೇ ಕಾರಣದಿಂದಲೇ ಜಿಲ್ಲಾಧ್ಯಕ್ಷರ ನೇಮಕ ತಡವಾಗುತ್ತಿದೆ ಎಂದರೆ ತಪ್ಪಾಗಲಾರದು. ಇಲ್ಲಿಯೂ ಮೂಲ, ವಲಸಿಗರು, ಕೊಡವ, ಕೊಡವೇತರರು ಎಂಬ ಗುಂಪುಗಾರಿಕೆಗಳು ಕಂಡು ಬರುತ್ತಿದ್ದು, ಇದು ಸಂಘಟನೆಯ ಮೇಲೆ ಪರಿಣಾಮ ಬೀರುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ ಕೊಡಗಿನ ಕಾಂಗ್ರೆಸ್ ಮುಖಂಡರನ್ನು ಅನಾಥಪ್ರಜ್ಞೆ ಕಾಡುತ್ತಿದೆ. ಪಕ್ಷಕ್ಕಾಗಿ ತಳಮಟ್ಟದಿಂದ ದುಡಿಯುತ್ತಾ ಬಂದಿರುವ ಮುಖಂಡರು, ಕಾರ್ಯಕರ್ತರು ಸೂಕ್ತ ಸ್ಥಾನಮಾನ ಸಿಗದೆ ಬೇಸರಪಟ್ಟುಕೊಳ್ಳುವಂತಾಗಿದೆ.
ವಲಸೆ ಬಂದವರಿಗೆ ಹುದ್ದೆ
ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಆಯಕಟ್ಟಿನಲ್ಲಿ ಹುದ್ದೆಗಳು ದೊರೆತು ಅವರು ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಿರುವುದು ಒಂದಷ್ಟು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ.ಈಗಾಗಲೇ ಕೊಡಗಿನ ಮಟ್ಟಿಗೆ ಪ್ರಭಾವಿ ನಾಯಕರು ಎಂದು ಕರೆಯಿಸಿಕೊಳ್ಳುತ್ತಿದ್ದ ಅರುಣ್ ಮಾಚಯ್ಯ, ಸುಮಾವಸಂತ್, ಟಿ.ಜಾನ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸಭೆಗಳಲ್ಲಿ ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ.
ಕಾಂಗ್ರೆಸ್ ಹೀನಾಯ ಸ್ಥಿತಿಗೆ ಕಾರಣ?
ಇನ್ನು ಜೆಡಿಎಸ್ ನಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡು ಜನಪರ ಹೋರಾಟ ಮಾಡಿಕೊಂಡು ಬಂದಿದ್ದ ವಿ.ಪಿ.ಶಶಿಧರ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಅವರು ಇಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲದಾಗಿದೆ.ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಾಯಕ ಜಿಲ್ಲಾಧ್ಯಕ್ಷನಾಗದಿರುವುದೇ ಇವತ್ತು ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬರಲು ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಜಿಲ್ಲಾಧ್ಯಕ್ಷ ಹುದ್ದೆಗೆ ಕಿತ್ತಾಟಗಳು
ಜಿಲ್ಲಾಧ್ಯಕ್ಷರ ಆಯ್ಕೆಯೇ ರಾಜ್ಯ ನಾಯಕರ ತಲೆನೋವಿಗೆ ಕಾರಣವಾಗಿದೆ. ಕಳೆದೊಂದು ವರ್ಷದಿಂದ ಶೀಘ್ರವೇ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗುತ್ತದೆ ಎಂಬ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರು ಹೇಳುತ್ತಾ ಬಂದಿದ್ದರೂ ಜಿಲ್ಲಾಮಟ್ಟದ ನಾಯಕರ ಕಿತ್ತಾಟಗಳು ಆಯ್ಕೆಗೆ ತೊಡಕಾಗಿದೆ.ಸದ್ಯ ಪ್ರಬಾರಿ ಅಧ್ಯಕ್ಷ ಟಿ.ಪಿ.ರಮೇಶ್ ಅವರೇ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಅವರ ವಿರುದ್ಧವೇ ಕೆಲವು ನಾಯಕರು ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲ ಪ್ರತ್ಯೇಕ ಸಭೆಗಳನ್ನು ಅವರ ಗಮನಕ್ಕೆ ತರದೆ ಮಾಡುತ್ತಿದ್ದಾರೆ. ಅವರ ನೋಟೀಸ್ಗೂ ಕಿಮ್ಮತ್ತು ನೀಡುತ್ತಿಲ್ಲ.
ಉಸ್ತುವಾರಿ ಸಚಿವ ಸೀತಾರಾಂಗೆ ತಿಳಿಯದ ಗೊಂದಲ
ಉಸ್ತುವಾರಿ ಸಚಿವ ಸೀತಾರಾಂ ಅವರಿಗೂ ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆ ಸ್ನಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯದಂತಾಗಿದೆ. ಹೀಗಾಗಿ ಹಿರಿಯ ನಾಯಕ ಜೆ.ಎ.ಕರುಂಬಯ್ಯ ಅವರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. ಸದ್ಯ ಅನಾರೋಗ್ಯದ ನಿಮಿತ್ತ ಕರುಂಬಯ್ಯ ಅವರು ಪಕ್ಷದ ಚಟುವಟಿಕೆಯಿಂದ ದೂರವಿದ್ದಾರೆ.
ಜೂ.28 ರಂದು ಬ್ಲಾಕ್ ಕಾಂಗ್ರೆಸ್ ಸಭೆ
ಜೂ.28 ರಂದು ನಡೆಯುವ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆಯ ನಂತರ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದು, ತಮ್ಮೊಂದಿಗೆ ನಗರಸಭೆಯ ಸದಸ್ಯರಾದ ಲೀಲಾಶೇಷಮ್ಮ, ಶ್ರೀಮತಿ ಬಂಗೇರ, ವೀಣಾಕ್ಷಿ ಸೇರಿದಂತೆ ಹಲವು ಮುಖಂಡರು ಇರುವುದಾಗಿಯೂ ಹೇಳಿರುವುದು ಪಕ್ಷ ಬಿಡುವ ಸೂಚನೆಯಾಗಿದೆ.
ಎಚ್.ವಿಶ್ವನಾಥ್ ಎಫೆಕ್ಟ್
ಏಕೆಂದರೆ ಇವರು ಮಾಜಿ ಸಂಸದ ಎಚ್.ವಿಶ್ವನಾಥ್ ಅವರ ಬೆಂಬಲಿಗರಾಗಿದ್ದು, ಇತ್ತೀಚೆಗೆ ವಿಶ್ವನಾಥ್ ಅವರು ಮಡಿಕೇರಿಯಲ್ಲಿ ಕರೆದಿದ್ದ ವಿಶ್ವಾಸಿಗಳ ಸಭೆಯ ನೇತೃತ್ವವನ್ನು ಇವರೇ ವಹಿಸಿದ್ದರು. ನಗರಸಭಾ ಸದಸ್ಯರೂ ಆಗಿರುವ ಕೆ.ಎಂ.ಗಣೇಶ್ ಅವರ ಈ ನಡೆ ಜಿಲ್ಲಾ ಕಾಂಗ್ರೆಸ್ ಮಾತ್ರವಲ್ಲದೆ, ಮಡಿಕೇರಿ ನಗರಸಭೆಯ ಆಡಳಿತದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜ್ಯ ನಾಯಕರು ಈ ಸಮಸ್ಯೆಯನ್ನು ಯಾವ ರೀತಿಯಲ್ಲಿ ಬಗೆಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.