ಮಳೆಗಾಲ ಆರಂಭಕ್ಕೂ ಮುನ್ನ ಕೊಡಗಿಗೆ ಬಂದ ಎನ್ಡಿಆರ್ಎಫ್ ಪಡೆ
ಮಡಿಕೇರಿ, ಮೇ 28 : ಮುಂಗಾರು ಮಳೆ ಆರಂಭವಾಗಲು ಕೆಲವೇ ದಿನಗಳು ಬಾಕಿ ಇದೆ. ಕೊಡಗು ಜಿಲ್ಲೆಗೆ ಎನ್ಡಿಆರ್ಎಫ್ನ ಒಂದು ಪಡೆ ಆಗಮಿಸಿದೆ. ಕಳೆದ ಬಾರಿ ಮಳೆ, ಭೂ ಕುಸಿತದಿಂದ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿತ್ತು.
ಕೊಡಗು ಜಿಲ್ಲಾಡಳಿತ ಈ ಬಾರಿಯ ಮುಂಗಾರು ಮಳೆ ಸಂದರ್ಭದಲ್ಲಿ ಯಾವುದೇ ವಿಪತ್ತು ಸಂಭವಿಸದಂತೆ ಮುನ್ನೆಚ್ಚರಿಕೆ ಕೈಗೊಂಡಿದೆ. ಆದ್ದರಿಂದ, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಒಂದು ತಂಡವನ್ನು ಜಿಲ್ಲೆಗೆ ಕರೆಸಲಾಗಿದೆ.
ಮುಂಗಾರು ಮಳೆ ಆರಂಭ : ಕೊಡಗಿನಲ್ಲಿ 13 ಅಪಾಯಕಾರಿ ಸ್ಥಳ ಗುರುತು
ಆಂಧ್ರಪ್ರದೇಶದ ಗುಂಟೂರಿನಿಂದ ಆಗಮಿಸಿರುವ ಎನ್ಡಿಆರ್ಎಫ್ ತಂಡದ ನೇತೃತ್ವದಲ್ಲಿ ಕಮಾಂಡರ್ ವೆಲ್ಲೂರು ರಮೇಶ್ ಮತ್ತು ದೊಡ್ಡ ಬಸಪ್ಪ ವಹಿಸಿಕೊಂಡಿದ್ದಾರೆ. ತಂಡದಲ್ಲಿ 26 ಸದಸ್ಯರಿದ್ದು, ಮಳೆಗಾಲ ಮುಗಿಯುವ ತನಕ ಕೊಡಗಿನಲ್ಲಿಯೇ ತಂಡ ವಾಸ್ತವ್ಯ ಹೂಡಲಿದೆ.
ಮಳೆಗಾಲ ಆರಂಭ : ಕೊಡಗಿನಲ್ಲಿ ತೆಗೆದುಕೊಂಡ ಕ್ರಮಗಳು
ಮೇ 29ರಂದು ಜಿಲ್ಲಾ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಜೊತೆಗೆ ಎನ್ಡಿಆರ್ಎಫ್ ತಂಡ ಅಣಕು ಕಾರ್ಯಾಚರಣೆಯನ್ನು ನಡೆಸಲಿದೆ. ವಿಪತ್ತು ಉಂಟಾದರೆ ಯಾವ ರೀತಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಸೂಚನೆಯನ್ನು ನೀಡಲಿದೆ.
ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ, ಜಲ ಪ್ರಳಯದ ಆತಂಕಕ್ಕೆ ಸಿಲುಕಿದ ಜನರು!
ಪೊಲೀಸ್ ಅಧಿಕಾರಿಗಳಿಗೆ ತರಬೇತಿ
ಈ ಬಾರಿಯ ಮುಂಗಾರು ಮಳೆ ಸಮಯದಲ್ಲಿ ವಿಪತ್ತು ಉಂಟಾಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಪ್ರಕೃತಿ ವಿಕೋಪ ಸಂಭವಿಸಿದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು 60 ಪೊಲೀಸರ 4 ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡ ಎನ್ಡಿಆರ್ಎಫ್ ತಂಡದ ಜೊತೆ ಕೆಲಸ ಮಾಡಲಿದೆ.
ಸೂಚನಾ ಫಲಕ ಅಳವಡಿಕೆ
ಕೊಡಗು ಜಿಲ್ಲೆಯ ಪ್ರವಾಸಿ ಸ್ಥಳಗಳು, ಗುರುತಿಸಿರುವ 13 ಅಪಾಯಕಾರಿ ಸ್ಥಳಗಳಲ್ಲಿ ಜಿಲ್ಲಾಡಳಿತ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಿದೆ. ಪ್ರವಾಸಿಗರು ಸೂಚನಾ ಫಲಕದಲ್ಲಿರುವ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.
ನೀರಿನ ಹರಿವಿಗೆ ವ್ಯವಸ್ಥೆ
ಕಳೆದ ಬಾರಿ ಭೂ ಕುಸಿತದಿಂದಾಗಿ ಹಲವಾರು ಸ್ಥಳಗಳಲ್ಲಿ ನೀರಿನ ಹರಿವಿಗೆ ತೊಂದರೆ ಉಂಟಾಗಿತ್ತು. ಈ ಬಾರಿ ಜಿಲ್ಲಾಡಳಿತ ಮಳೆಗಾಲ ಆರಂಭಕ್ಕೂ ಮುನ್ನ ಹಲವು ಪ್ರದೇಶಗಳಲ್ಲಿ ನೀರಿನ ಸರಾಗ ಹರಿವಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ನೋಟಿಸ್ ಜಾರಿ
ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರಿಗೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದೆ.