ಕೊಡಗಿನಲ್ಲಿ ಮಳೆಯ ರೌದ್ರಾವತಾರಕ್ಕೆ ಬೆಚ್ಚಿದ ಜನರು!
Recommended Video
ಮಡಿಕೇರಿ, ಜುಲೈ 17: ಬಿಡುವು ನೀಡದೆ ಸುರಿಯುವ ಮಳೆ, ಜತೆಯಲ್ಲೇ ಬಿರುಗಾಳಿ, ಮೈಕೊರೆಯುವ ಚಳಿ, ಎಲ್ಲೆಂದರಲ್ಲಿ ಉಕ್ಕಿ ಹರಿಯುವ ನೀರು, ವಿದ್ಯುತ್ ಇಲ್ಲದೆ ಕ್ಯಾಂಡಲ್, ಸೀಮೆಣ್ಣೆ ದೀಪಗಳಿಗೆ ಶರಣಾದ ಜನ, ಬೀಸುವ ಗಾಳಿಗೆ ಯಾವಾಗ ಮರ ಮನೆ ಮೇಲೆ ಬೀಳುತ್ತೋ ಭಯ... ಒಂದೇ ಎರಡೇ!
ಇಂಥ ನೂರಾರು ಸಮಸ್ಯೆಗಳು ಕೊಡಗಿನ ಜನರನ್ನಾವರಿಸಿದೆ. ಭೀತಿಯಲ್ಲೇ ಬದುಕ ಬೇಕಾದ ಪರಿಸ್ಥಿತಿ ಇದೀಗ ಎದುರಾಗಿದ್ದು, ಯಾವಾಗ ಮಳೆ ನಿಲ್ಲುತ್ತದೆಯೋ ಎಂದು ಕಾಯುವಂತಾಗಿದೆ.
ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!
ಕೊಡಗಿನವರಿಗೆ ಮಳೆಗಾಲ ಹೊಸತೇನಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಮಳೆಯ ಅಬ್ಬರವನ್ನು ಮರೆತಿದ್ದ ಜನಕ್ಕೆ ಈ ಬಾರಿಯ ಮಳೆಗಾಲ ತನ್ನ ಆರ್ಭಟವನ್ನು ತೋರಿಸಿದ್ದು ಭಯಹುಟ್ಟಿಸುವಂತೆ ಮಾಡಿದೆ. ನದಿಪಾತ್ರದ ಜನರಂತೂ ಪ್ರವಾಹದ ಭಯದಲ್ಲೇ ಇರುವಂತಾಗಿದೆ. ಕಳೆದೊಂದು ವಾರದಿಂದ ನದಿಗಳ ಪ್ರವಾಹ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಸರಾಸರಿ 70 ಮಿ.ಮೀ. ಮಳೆ ಸುರಿಯುತ್ತಲೇ ಇರುವುದರಿಂದ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ!
ಕಣ್ಣೀರಲ್ಲಿ ಕಾಫಿ ಬೆಳೆಗಾರರು
ಈ ಬಾರಿಯ ಮಳೆಗಾಳಿಗೆ ತಗ್ಗುಪ್ರದೇಶ, ತೇವವಿರುವ ಪ್ರದೇಶಗಳಲೆಲ್ಲ ಜಲ ಉಕ್ಕುತ್ತಿದ್ದು ನೀರು ಹರಿದು ಬರುತ್ತಿದೆ. ಗದ್ದೆಯನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದ ಬೆಳೆಗಾರರು ನೀರು ಉಕ್ಕಿ ತೋಟಕ್ಕೆ ನುಗ್ಗಿದ ಕಾರಣದಿಂದ ತೋಟ ನಾಶವಾಗುತ್ತಿರುವುದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಕೆಲವೆಡೆ ತೋಟಗಳಲ್ಲಿದ್ದ ಮರಗಳು ನೆಲಕ್ಕೆ ಉರುಳಿ ಬಿದ್ದ ಕಾರಣ ಕಾಫಿ ಗಿಡಗಳು ಸೇರಿದಂತೆ ಇತರೆ ಗಿಡಗಳು ನಾಶವಾಗಿವೆ. ತೋಟದಲ್ಲಿ ಕೆಲಸ ಮಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಬೀಸುವ ಬಿರುಗಾಳಿಗೆ ಯಾವ ಮರ ಯಾವಾಗ ಮುರಿದು ಬೀಳುತ್ತೋ ಎನ್ನಲಾಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗೆ ಮರಗಳು ಅಡ್ಡಲಾಗಿ ಬೀಳುತ್ತಿರುವುದರಿಂದ ವಾಹನಗಳಲ್ಲಿ ತೆರಳುವವರು ಹೆದರಿಕೊಂಡೇ ಸಂಚರಿಸುವಂತಾಗಿದೆ.
ಮಂಜಿನನಗರಿ ಮಡಿಕೇರಿಲಿ ಬೇರೂರಿದ ವರುಣ: ತಾಪತ್ರಯ ಒಂದೋ, ಎರಡೋ!
ಮಳೆಯಲ್ಲೇ ಭತ್ತದ ಕೃಷಿ ಚಟುವಟಿಕೆ
ಮರಗಳು ಬಿದ್ದ ಕಾರಣ ವಿದ್ಯುತ್ ಕಂಬಗಳು ಕೆಲವು ಕಡೆ ಬಿದ್ದಿದ್ದರೆ, ಮತ್ತೆ ಕೆಲವು ಕಡೆ ತಂತಿಗಳು ತುಂಡಾಗಿವೆ. ಹೀಗಾಗಿ ಕೆಲವು ದಿನಗಳಿಂದ ಗ್ರಾಮೀಣ ಪ್ರದೇಶಗಳು ಕತ್ತಲೆಯಲ್ಲೇ ಇವೆ. ಜನ ಹಿಡಿಶಾಪ ಹಾಕುತ್ತ ಕ್ಯಾಂಡಲ್, ಸೀಮೆಣ್ಣೆ ದೀಪಕ್ಕೆ ಶರಣಾಗಿದ್ದಾರೆ. ಈಗ ಭತ್ತದ ಕೃಷಿಯ ಕಾಲವಾಗಿರುವುದರಿಂದ ರೈತರು ಸುರಿಯುವ ಮಳೆಯನ್ನು ಲೆಕ್ಕಿಸದೆ ಗದ್ದೆ ಕೆಲಸಗಳಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ. ಕೆಲವೆಡೆ ಭತ್ತದ ನಾಟಿಯನ್ನು ಆರಂಭಿಸಿದ್ದರೆ ಇನ್ನು ಕೆಲವೆಡೆ ನಾಟಿ ಮಾಡಲು ಗದ್ದೆಯನ್ನು ತಯಾರು ಮಾಡಲಾಗುತ್ತಿದೆ. ಇನ್ನು ಕಾವೇರಿ, ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲಿರುವ ಗದ್ದೆ ಬಯಲುಗಳು, ಕಾಫಿ ತೋಟಗಳು ಜಲಾವೃತಗೊಂಡಿವೆ.
ಮಡಿಕೇರಿ ನಗರದಲ್ಲಿ ಗಾಳಿ ರಭಸ ತೀವ್ರಗೊಂಡಿದ್ದು, ಮನೆಗಳ ಛಾವಣಿ ಹಾರಿ ಹೋಗಿದ್ದರೆ, ಮನೆಗಳ ಗೋಡೆಗಳು ಕುಸಿದು ಬಿದ್ದಿದೆ. ಕೆಲವೆಡೆ ಮನೆಯ ಮೇಲೆಯೇ ಮರಗಳು ಬಿದ್ದಿವೆ. ಗುಡ್ಡಗಳಲ್ಲಿ ನಿರ್ಮಿಸಿರುವ ಮನೆಗಳು ಕುಸಿಯುವ ಭಯವೂ ಜನರನ್ನು ಕಾಡುತ್ತಿದೆ.
ಪ್ರತಿದಿನ ಸರಾಸರಿ 71 ಮಿ.ಮೀ. ಮಳೆ
ಕಳೆದೊಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 71.43 ಮಿ.ಮೀ ಮಳೆ ಸುರಿದಿದೆ. ಪ್ರತಿ ದಿನವೂ ಇದೇ ಸರಾಸರಿಯನ್ನು ಕಾಯ್ದುಕೊಂಡು ಹೋಗುತ್ತಿರುವುದರಿಂದ ನದಿಯಲ್ಲಿ ಪ್ರವಾಹ ಇಳಿಮುಖವಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 2199.88 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 885.43 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಸಿದರೆ 1314 ಮಿ.ಮೀ. ಮಳೆ ಹೆಚ್ಚಿನ ಮಳೆ ಸುರಿದಿರುವುದು ಕಂಡು ಬರುತ್ತಿದೆ.
2,859 ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯಕ್ಕೆ ಸುಮಾರು 19543 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 2856.12 ಅಡಿಯಷ್ಟು ನೀರನ್ನಿಟ್ಟುಕೊಂಡು ನದಿಗೆ 21423 ಕ್ಯೂಸೆಕ್ ಮತ್ತು ನಾಲೆಗೆ 450 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
ಬಾಗಿನ ಅರ್ಪಿಸಲಿರುವ ಮುಖ್ಯಮಂತ್ರಿ
ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಾಗಿನ ಅರ್ಪಿಸಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಗೆ ಜು.19 ಆಗಮಿಸಲಿದ್ದು ಅಧಿಕಾರಿಗಳ ಸಭೆ ನಡೆಸಲಿದ್ದು, ಅಂದು ವಾಸ್ತವ್ಯ ಹೂಡುವ ಸಾಧ್ಯತೆಯಿದ್ದು 20ರಂದು ತಲಕಾವೇರಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಮೂಲಗಳ ಮಾಹಿತಿ ಪ್ರಕಾರ 19 ರಂದು ಮಧ್ಯಾಹ್ನ 2.20 ಗಂಟೆಗೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಅಥವಾ ಹಾರಂಗಿ ಜಲಾಶಯ ಬಳಿಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದು, ಬಳಿಕ ಮಧ್ಯಾಹ್ನ 3 ಗಂಟೆಗೆ ಹಾರಂಗಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಲಿದ್ದಾರೆ. ಆ ನಂತರ ಸಂಜೆ 5 ಗಂಟೆಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಜುಲೈ 20 ರಂದು ಬೆಳಗ್ಗೆ 6.20 ಗಂಟೆಗೆ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.