ಮದ್ಯದ ಅಮಲಿನಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚಿದವರ ಬಂಧನ
ಮಡಿಕೇರಿ: ಬೇಸಿಗೆಯಲ್ಲಿ ಬೆಂಕಿ ತಗುಲಿ ಅರಣ್ಯ ನಾಶವಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗುವುದರೊಂದಿಗೆ ಪ್ರಾಣಿ ಪಕ್ಷಿಗಳು, ಸರಿಸೃಪಗಳು ಬೆಂಕಿಯಲ್ಲಿ ಬೆಂದು ಹೋಗುತ್ತಿವೆ.
ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದರೂ ಅರಣ್ಯಗಳಿಗೆ ಬೆಂಕಿ ಬೀಳುವುದನ್ನು ತಪ್ಪಿಸಲು ಸಾಧ್ಯವಾಗದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ ಇದರ ಹಿಂದೆ ಕಿಡಿಗೇಡಿಗಳ ಕೃತ್ಯ ಇರುವುದು ಇದೀಗ ಬೆಳಕಿಗೆ ಬಂದಿದ್ದು, ಕೊಡಗು ಮತ್ತು ದಕ್ಷಿಣಕನ್ನಡ ಗಡಿಭಾಗದ ಅರಣ್ಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಅದು ಕಾಡ್ಗಿಚ್ಚು ಅಲ್ಲ ಕಿಡಿಗೇಡಿಗಳು ಹಚ್ಚಿದ ಬೆಂಕಿ ಎಂಬುದು ಇದೀಗ ಗೊತ್ತಾಗಿದೆ.
ನಂದಿಬೆಟ್ಟದಲ್ಲಿ ಕಾಡ್ಗಿಚ್ಚು, ನೂರಾರು ಎಕರೆ ಹುಲ್ಲು ನಾಶ
ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮದ್ಯದ ಅಮಲಿನಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.
ದಬ್ಬಡ್ಕ ಗ್ರಾಮದ ಉದಯಕುಮಾರ್ ಹಾಗೂ ಪ್ರಸನ್ನ ಬಂಧಿತರಾಗಿದ್ದಾರೆ. ಕೆಲವು ದಿನಗಳ ಹಿಂದೆ ಸಂಪಾಜೆ ಅರಣ್ಯ ವಲಯ ವ್ಯಾಪ್ತಿಯ ದಬ್ಬಡ್ಕ ಉಪ ವಲಯದ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಬೆಂಕಿ ಬಿದ್ದು 15 ರಿಂದ 20 ಎಕರೆಯಲ್ಲಿದ್ದ ಅರಣ್ಯಗಳು ಬೆಂಕಿಗೆ ಆಹುತಿಯಾಗಿತ್ತು.
ನಾಗರಹೊಳೆ: ಆನೆ ದಾಳಿಗೆ ಅರಣ್ಯಾಧಿಕಾರಿ ಬಲಿ
ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂಬ ಸಂಶಯ ಅರಣ್ಯಾಧಿಕಾರಿಗಳಿಗೆ ಬಂದಿದ್ದರಿಂದ ಕೂಡಲೇ ಮಡಿಕೇರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರೂ ಅವರ ಮಾರ್ಗದರ್ಶನದಂತೆ ಸಂಪಾಜೆ ವಲಯ ಅರಣ್ಯಾಧಿಕಾರಿ ಶಮಾ ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಪಿ.ಜೆ. ರಾಘವ, ವಿಜೇಂದ್ರಕುಮಾರ್ ಮತ್ತು ಸಿಬ್ಬಂದಿ ಕೆ.ಪಿ. ಜೋಯಪ್ಪ, ಎಂ.ಎಸ್. ಪುನೀರ್, ಚಂದ್ರಪ್ಪ ಬಣಕಾರ್, ಡಿ. ಕಾರ್ತಿಕ್ ವಾಹನ ಚಾಲಕ ಶಿವಪ್ರಸಾದ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಗಿಳಿದಿತ್ತು.
ಈ ವೇಳೆ ಇಬ್ಬರು ಕಿಡಿಗೇಡಿಗಳು ಜೀಪಿನಲ್ಲಿ ಬಂದು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ದೊರೆತಿತ್ತು. ಹೀಗಾಗಿ ಚಹರೆ ಹಾಗೂ ಚಲನವಲನಗಳನ್ನು ಗಮನಿಸಿ ದಬ್ಬಡ್ಕ ಗ್ರಾಮದ ಉದಯಕುಮಾರ್ ಹಾಗೂ ಪ್ರಸನ್ನ ಎಂಬಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಮದ್ಯದ ಅಮಲಿನಲ್ಲಿ ನಾವು ಕೃತ್ಯವೆಸಗಿರುವದಾಗಿ ಒಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಜೀಪನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಮೇರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.