ಕೊಡಗು : ಕೊರೊನಾ ತಡೆಯಲು ಕೈಗೊಂಡ 6 ಕ್ರಮಗಳು
ಮಡಿಕೇರಿ, ಮಾರ್ಚ್ 23 : ಕೊಡಗು ಜಿಲ್ಲೆಯಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವೈರಸ್ ಹರಡುವುದನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದೆ.
Recommended Video
ಕರ್ನಾಟಕ ಸರ್ಕಾರ ಕೊಡಗು ಜಿಲ್ಲೆಯನ್ನು 31-03-2020ರ ತನಕ ಲಾಕ್ ಡೌನ್ ಮಾಡುವಂತೆ ಆದೇಶ ನೀಡಿದೆ. ಸೋಮವಾರ ಜಿಲ್ಲಾಧಿಕಾರಿಗಳು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿದರು.
ಜಿಲ್ಲೆಯಲ್ಲಿ ಕೊರೊನಾ ಹರಡುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ವಾಸವಾಗಿದ್ದ ಕೇತುಮೊಟ್ಟೆ ಪ್ರದೇಶದ ಸುತ್ತ 500 ಮೀಟರ್ ಏರಿಯಾವನ್ನು ಕಂಟೈನ್ ಮೆಂಟ್ ಪ್ರದೇಶ ಎಂದು ಗುರುತಿಸಲಾಗಿದೆ.
ಈ ಭಾಗದಲ್ಲಿರುವ 75 ಮನೆಗಳ ನಿವಾಸಿಗಳಿಗೆ ದಿನ ಬಳಕೆಯ ಆಹಾರ ಪದಾರ್ಥ ಮತ್ತು ದಿನ ನಿತ್ಯದ ಶುಚಿತ್ವಕ್ಕೆ ಬೇಕಾದ ವಸ್ತುಗಳನ್ನು ಜಿಲ್ಲಾಡಳಿತದಿಂದ ವಿತರಣೆ ಮಾಡಲಾಗುತ್ತದೆ.

ಚೆಕ್ ಪೋಸ್ಟ್ನಲ್ಲಿ ತೀವ್ರ ನಿಗಾ
ವಿವಿಧ ಜಿಲ್ಲೆಗಳಿಂದ ಕೊಡಗು ಜಿಲ್ಲೆಯೊಳಗೆ ಆಗಮಿಸುವ ವಾಹನಗಳನ್ನು ನಿರ್ಬಂಧಿಸಲು ಜಿಲ್ಲೆಯ 13 ಭಾಗಗಳಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ಗಳನ್ನು ತೆರೆದು ನಿಗಾ ವಹಿಸಲಾಗಿದೆ.

ನೋಡೆಲ್ ಅಧಿಕಾರಿಗಳ ನೇಮಕ
ಜಿಲ್ಲೆಯ ಎಲ್ಲಾ ಹೋಬಳಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಸದರಿ ನೋಡಲ್ ಅಧಿಕಾರಿಗಳು ತಮಗೆ ಜವಾಬ್ದಾರಿ ವಹಿಸಿದ ಹೋಬಳಿ ವ್ಯಾಪ್ತಿಯಲ್ಲಿ ಲಾಕ್ ಡೌನ್ ನಿಂದ ಸಾರ್ವಜನಿಕರಿಗೆ ಅತ್ಯಾವಶ್ಯಕ ಸೇವೆಗಳಲ್ಲಿ ಯಾವುದೇ ತೊಂದರೆಯಾಗದಂತೆ ಮತ್ತು ಗೃಹ ಸಂಪರ್ಕ ತಡೆಯಲ್ಲಿರುವ ವ್ಯಕ್ತಿಗಳು ಸಾರ್ವಜನಿಕವಾಗಿ ತಿರುಗಾಡದಂತೆ ನಿಗಾ ವಹಿಸಲಿದ್ದಾರೆ.

ಪಡಿತರಗಳ ವಿತರಣೆ
ಪಡಿತರ ಕಾರ್ಡ್ ಹೊಂದಿದ್ದು, ಪಡಿತರ ಸೌಲಭ್ಯ ಪಡೆಯುತ್ತಿರುವವರಿಗೆ ಮುಂಗಡವಾಗಿ ಏಪ್ರಿಲ್ ಮತ್ತು ಮೇ ಮಾಹೆಯ ಪಡಿತರವನ್ನು ಸಂಚಾರಿ ವಾಹನದ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಮಾರ್ಚ್ ಮಾಹೆಯ ಪಡಿತರ ಪಡೆಯಲು ಬಾಕಿ ಇದ್ದಲ್ಲಿ, ಅವರಿಗೂ ಸಹ ವಿತರಿಸಲಾಗುವುದು.

ಪ್ರತಿ ತಾಲೂಕಿಗೆ 1 ಕೋಟಿ
ಕರೋನ ವೈರಸ್ ಸಂಬಂಧ ಖರ್ಚು-ವೆಚ್ಚಗಳನ್ನು ಭರಿಸಲು ತಾಲ್ಲೂಕಿಗೆ ತಲಾ ರೂ.1.00 ಕೋಟಿಯಂತೆ ಜಿಲ್ಲೆಯ ಮೂರು ತಹಶೀಲ್ದಾರರುಗಳಿಗೆ ರೂ.3.00 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಕೋವಿಡ್ -19 ಕೇರ್ ಕೇಂದ್ರ
ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ವಿದ್ದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೋವಿಡ್19 ಕೇರ್ ಕೇಂದ್ರಗಳನ್ನು ತೆರೆಯಲು ಸೂಕ್ತ ಕಟ್ಟಡಗಳನ್ನು ಗುರುತಿಸಲು ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಾರ್ಥನೆ ನಿಷೇಧ
ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಅಧಿಕಾರಿಗಳು ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚಿಸಿ ಎಲ್ಲಾ ಚರ್ಚ್ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವುದನ್ನು 31-03-2020 ರವರೆಗೆ ನಿಷೇಧಿಸಲಾಗಿದೆ. ಇದು ಪ್ರತಿ ಭಾನುವಾರದಂದು ಚರ್ಚುಗಳಲ್ಲಿ ಮತ್ತು ಪ್ರತಿ ಶುಕ್ರವಾರದಂದು ಮಸೀದಿಗಳಲ್ಲಿ ಮಾಡಲಾಗುವ ಪ್ರಾರ್ಥನೆಗಳಿಗೂ ಅನ್ವಯವಾಗುತ್ತದೆ.











Click it and Unblock the Notifications