ರಾಜಕೀಯ ಬದಿಗೊತ್ತಿ ಹೊಸ ಕೊಡಗಿನ ನಿರ್ಮಾಣಕ್ಕೆ ಮುಂದಾಗಿ...
ಮೈಸೂರು, ಆಗಸ್ಟ್ 28: ಅತ್ತ ಕೇರಳದಲ್ಲಿ ಪ್ರವಾಹಕ್ಕೆ ಕಾಸರಗೋಡು ಹೊರತು ಪಡಿಸಿ ಬಹುತೇಕ ಜಿಲ್ಲೆಗಳು ಮುಳುಗಿ ಹೋಗಿದ್ದವು. ಅಲ್ಲಿ ನಡೆದಿದ್ದು ಅಂತಿಂಥ ಪ್ರವಾಹವಲ್ಲ ಅದು ಮಹಾಪ್ರವಾಹ. ಆದರೆ ಮತ್ತೆ ಕೇರಳ ಕಟ್ಟಲು ರಾಜ್ಯ ಸರ್ಕಾರದೊಂದಿಗೆ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಎಲ್ಲವೂ ಹೆಗಲಿಗೆ ಹೆಗಲಾಗಿ ನಿಂತಿವೆ.
ಕೇರಳಕ್ಕೆ ಹೋಲಿಸಿದರೆ ನಮ್ಮ ರಾಜ್ಯದ ಒಂದು ಜಿಲ್ಲೆಯಲ್ಲಿ ಅದರಲ್ಲೂ ಕೇವಲ ಹದಿನೈದು ಗ್ರಾಮದಲ್ಲಷ್ಟೆ ಅನಾಹುತ ಆಗಿರುವುದು. ಈಗ ರಾಜ್ಯದಾದ್ಯಂತ ಹರಿದು ಬರುತ್ತಿರುವ ಸಹಾಯಹಸ್ತ ಮತ್ತು ಸರ್ಕಾರ ಮತ್ತು ವಿರೋಧ ಪಕ್ಷಗಳು ಮನಸ್ಸು ಮಾಡಿದರೆ ಕೊಡಗನ್ನು ಮತ್ತೆ ಕಟ್ಟುವುದು, ಸಂತ್ರಸ್ತರಾದವರಿಗೊಂದು ಸೂರು ಕಲ್ಪಿಸಿ ಅವರ ಬದುಕು ಹಸನುಗೊಳಿಸುವುದು ಕಷ್ಟವೇನಲ್ಲ.
ಆದರೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡೆಯುತ್ತಿರುವ ಡ್ರಾಮಾಗಳನ್ನು ನೋಡಿದರೆ ಈ ಜನಪ್ರತಿನಿಧಿಗಳಿಂದ ಅದೆಲ್ಲ ಸಾಧ್ಯವಾಗುತ್ತಾ ಎಂಬ ಸಂಶಯ ಕಾಡತೊಡಗಿದೆ.

ಸಂತ್ರಸ್ತರಿಗೆ ಭವಿಷ್ಯದ ಚಿಂತೆ, ನಾಯಕರಿಗೆ ವೋಟಿನ ಚಿಂತೆ!
ಕೇಂದ್ರದ ಜನಪ್ರತಿನಿಧಿಗಳು ರಾಜ್ಯ ಸರ್ಕಾರದ ಕಡೆಗೆ, ರಾಜ್ಯ ಸರ್ಕಾರದ ಪ್ರತಿನಿಧಿಗಳು ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾ ಕೆಸರು ಎರಚಿಕೊಳ್ಳುತ್ತಿದ್ದಾರೆ. ಆದರೆ ಅತ್ತ ತಮ್ಮ ಇಡೀ ಬದುಕನ್ನೇ ಕೆಸರು ಮಾಡಿಕೊಂಡ ಸಂತ್ರಸ್ತ ಜನ ಮುಂದೆ ಬದುಕು ಹೇಗೆ ಎಂಬ ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಪ್ರವಾಹಕ್ಕಿಂತ ರಾಜಕೀಯ ಭೂಕಂಪವೇ ಹೆಚ್ಚಾಯ್ತು!
ಈಗಾಗಲೇ ಕೊಡಗಿನ ಮಂದಿ ತಮಗಾದ ಆಘಾತದಿಂದ ಹೊರಬಂದಿಲ್ಲ. ಅಲ್ಲಿ ಜಿಲ್ಲಾಡಳಿತ ಸೇರಿದಂತೆ ಸಂಘ ಸಂಸ್ಥೆಗಳು ಸಂತ್ರಸ್ತರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಿದ್ದರೆ, ಇತ್ತ ರಾಜಧಾನಿಯಲ್ಲಿ ರಾಜಕೀಯ ಭೂಕಂಪನದ ಸುದ್ದಿಗಳು ಕೇಳಿ ಬರುತ್ತಿವೆ. ಬೇಷರತ್ ಬೆಂಬಲ ನೀಡಿ ಜೆಡಿಎಸ್ ನ ರಾಜ್ಯಾಧ್ಯಕ್ಷರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದ ಕಾಂಗ್ರೆಸ್ ನಲ್ಲಿ ತಳಮಳಗಳು ಆರಂಭವಾಗಿವೆ. ಅವರಿಗೆ ರಾಜ್ಯದ ಜನ ಪ್ರವಾಹದಿಂದ, ಭೂಕುಸಿತದಿಂದ, ಮಹಾಮಳೆಯಿಂದ ತತ್ತರಿಸಿ ಸಾಯುತ್ತಿರುವುದು, ಬರದಿಂದ ಕಂಗಾಲಾಗಿರುವುದು ಯಾವುದೂ ಕಾಣುತ್ತಿಲ್ಲ. ಅವರಿಗೆ ಕಾಣುತ್ತಿರುವುದು ರಾಜಕೀಯ ಲಾಭ ಅಷ್ಟೇ.

ರಾಜಕೀಯ ಲಾಭ ಬದಿಗಿಟ್ಟು ಕೆಲಸ ಮಾಡಬೇಕಿದೆ
ನಮ್ಮ ಜನಪ್ರತಿನಿಧಿಗಳಿಗೆ ಈಗ ಕೊಡಗಿನಲ್ಲಿ ಆಗಿರುವ ಅನಾಹುತ ಕೇವಲ ಸ್ಯಾಂಪಲ್ ಅಷ್ಟೆ. ಅದನ್ನೇ ತಡೆದುಕೊಳ್ಳೋಕೆ ಆಗಿಲ್ಲ ಅಂದ್ರೆ ಕೇರಳದಂತಹ ದುರಂತ ಸಂಭವಿಸಿದರೆ ಅದನ್ನು ಇವರು ನಿಭಾಯಿಸೋಕೆ ಸಾಧ್ಯನಾ? ಈಗಲೇ ನಾವು ಎಚ್ಚೆತ್ತುಕೊಂಡು ನಮ್ಮ ಎಲ್ಲ ರಾಜಕೀಯ ಲಾಭದ ಲೆಕ್ಕಾಚಾರವನ್ನೆಲ್ಲ ಬದಿಗಿಟ್ಟು ಕೆಲಸದ ಕಡೆಗೆ ಗಮನಕೊಡದೆ ಹೋದರೆ ಮುಂದೆ ಬಹಳಷ್ಟು ಸಂಕಷ್ಟ ಎದುರಿಸಬೇಕಾದೀತು.

ರಾಜಕಾರಣಿಗಳು ಒಗ್ಗಟ್ಟಾಗುವುದು ಯಾವಾಗ?
ಇವತ್ತು ಭೂಕುಸಿತ, ಜಲಪ್ರಳಯವಾದ ಕೊಡಗಿನ ಸ್ಥಳಗಳಿಗೆ ರಾಜ್ಯ ಮತ್ತು ಕೇಂದ್ರದ ನಾಯಕರು ಬಂದಿದ್ದಾರೆ. ಬರುತ್ತಲೇ ಇದ್ದಾರೆ. ಅವರಿಂದ ಇಲ್ಲಿನವರಿಗೆ ಕಿರಿಕಿರಿಯಲ್ಲದೆ ಮತ್ತೇನು ಉಪಕಾರವಾದಂತೆ ಕಂಡು ಬರುತ್ತಿಲ್ಲ. ಆರೋಪ ಪ್ರತ್ಯಾರೋಪವಷ್ಟೆ. ಎಲ್ಲರೂ ಒಂದೆಡೆ ಕುಳಿತು ಮಾಡಬೇಕಾದ ಕಾರ್ಯಗಳ ಕುರಿತು ಚರ್ಚಿಸುವ ಕೆಲಸಕ್ಕೆ ಮುಂದಾಗುತ್ತಲೇ ಇಲ್ಲ. ಎಲ್ಲರೂ ಸೇರಿ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ ವಿನಃ ಮತ್ತೇನೂ ಮಾಡುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಮನೆ ಬದುಕು ಕಳೆದುಕೊಂಡವರ ಬದುಕು ಏನಾಗಬೇಕು? ನಮ್ಮ ರಾಜಕಾರಣಿಗಳು ಒಗ್ಗಟ್ಟಾಗಿ ನಿಲ್ಲುವುದು ಯಾವಾಗ? ಸದ್ಯಕ್ಕೆ ನಮ್ಮ ಮುಂದೆ ಇರುವುದು ಬರೀ ಪ್ರಶ್ನೆಗಳೇ...












Click it and Unblock the Notifications