ಮಡಿಕೇರಿ-ಮಂಗಳೂರು ರಸ್ತೆ ಆಧುನಿಕ ತಂತ್ರಜ್ಞಾನದಿಂದ ದುರಸ್ತಿ
ಮಡಿಕೇರಿ, ಜೂನ್ 06 : ಮಡಿಕೇರಿ-ಮಂಗಳೂರು ರಸ್ತೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ದುರಸ್ತಿ ಮಾಡಲಾಗುತ್ತಿದೆ. 2018ರಲ್ಲಿ ಸುರಿದ ಮಳೆ, ಗುಡ್ಡ ಕುಸಿತದಿಂದಾಗಿ ರಸ್ತೆಗೆ ಬಾರಿ ಹಾನಿಯಾಗಿತ್ತು.
ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಭೂಕುಸಿತದಿಂದ ಹಾನಿಯಾಗಿದ್ದ ರಸ್ತೆಯನ್ನು Soil Nailing ಹಾಗೂ Shotcreting ತಂತ್ರಜ್ಞಾನ ಬಳಸಿ ಶಾಶ್ವತ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ.

ಕಳೆದ ವರ್ಷ ಈ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿ 3 ತಿಂಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂ-ಸ್ಯಾಂಡ್ ಚೀಲ, ಜಿಯೋ ಸಿಂಥೆಟಿಕ್ ಅಳವಡಿಕೆ ಮಾಡಿ ತಾತ್ಕಾಲಿಕವಾಗಿ ದುರಸ್ತಿ ಮಾಡಿತ್ತು.

ಬೇಸಿಗೆಯ ಬಿಸಿಲು, ಆಗಾಗ ಸುರಿಯುವ ಮಳೆಯಿಂದಾಗಿ ರಸ್ತೆ ಮತ್ತೆ ಕುಸಿಯುವ ಆತಂಕ ಎದುರಾಗಿತ್ತು. ಈಗ ಮುಂಗಾರು ಸಹ ಆರಂಭವಾಗುವುದರಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿ ಭೂ ಕುಸಿತ ಉಂಟಾಗುವ ಸ್ಥಳಗಳನ್ನು ದುರಸ್ತಿ ಮಾಡಲಾಗುತ್ತಿದೆ.
ರಸ್ತೆ ಬದಿಯಲ್ಲಿ ಹಾಕಿರುವ ಮರಳಿನ ಚೀಲದ ಮೇಲೆ ಕಬ್ಬಿಣದ ಸರಳು ಅಳವಡಿಸಿ, ಅದರ ಮೇಲೆ ಕಾಂಕ್ರೀಟ್ ಹಾಕಿ ಮಳೆಯ ನೀರು ಒಳಹೋಗದಂತೆ ಕಾಮಗಾರಿ ಕೈಗೊಳ್ಳಲಾಗಿದೆ. ಎರಡು ದಿನಗಳಿಂದ ಈ ಕಾಮಗಾರಿ ಪ್ರಗತಿಯಲ್ಲಿದೆ.
14 ಕಡೆ ಭೂ ಕುಸಿತ : 2018ರಲ್ಲಿ ಸುರಿದ ಮಳೆ, ಭೂ ಕುಸಿತದಿಂದಾಗಿ ಮಡಿಕೇರಿಯಿಂದ ಸಂಪಾಜೆ ತನಕ 14 ಕಡೆ ಭೂ ಕುಸಿತ ಉಂಟಾಗಿತ್ತು. ಕೆಲವು ಕಡೆ ರಸ್ತೆ ಇತ್ತು ಎಂಬುದನ್ನು ಹೇಳುವ ಕುರುಹುಗಳೇ ಇರಲಿಲ್ಲ. 10 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.












Click it and Unblock the Notifications