ಹಣ ಡಬಲ್ ಮಾಡ್ತೀವಿ ಎಂದು ಟೋಪಿ ಹಾಕಿದ ಕುಶಾಲನಗರದ ಮೂವರ ಬಂಧನ
ಮಡಿಕೇರಿ, ಮಾರ್ಚ್ 4: ಜನರಿಗೆ ದುಪ್ಪಟ್ಟು ಹಣದ ಆಮಿಷವೊಡ್ಡಿ ವೆಬ್ ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವ ಜಾಲವನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ನೇತೃತ್ವದ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಕುಶಾಲನಗರದ ನಿವಾಸಿಗಳಾದ ಎ.ಜಾನ್ (45), ಶಶಿಕಾಂತ್ ಅಲಿಯಾಸ್ ಶಮ್ಮಿ (37), ಆಂಟೋನಿ ಡಿ. ಕುನ್ನ ಅಲಿಯಾಸ್ ಡ್ಯಾನಿ (39) ಬಂಧಿತ ಆರೋಪಿಗಳು. ಇವರಿಂದ ವಂಚನೆಗೆ ಬಳಸುತ್ತಿದ್ದ ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಉಳಿದ ನಾಲ್ವರು ಆರೋಪಿಗಳು ಕೂಡ ಕೊಡಗಿನವರೇ ಆಗಿದ್ದು, ಶೀಘ್ರ ಬಂಧಿಸುವುದಾಗಿ ತಿಳಿಸಿದರು.
ಬೆಂಗಳೂರಿನ ಸಂಸ್ಥೆಯೊಂದರ ಮೂಲಕ ವಂಚನೆಗಾಗಿ ವೆಬ್ ಸೈಟ್ ರೂಪಿಸಿಕೊಂಡ ಆರೋಪಿಗಳು, ಆಪ್ತ ಸ್ನೇಹಿತರ ಸಹಾಯದೊಂದಿಗೆ 'ಕ್ಯಾಪಿಟಲ್ ರಿಲೇಷನ್ಸ್ ಡಾಟ್ ಇನ್' ಎನ್ನುವ ವೆಬ್ಸೈಟಿಗೆ ಸುಮಾರು 4 ಸಾವಿರ ಮಂದಿಯನ್ನು ಹೂಡಿಕೆದಾರರನ್ನಾಗಿ ಮಾಡಿದರು. ವೆಬ್ ಸೈಟ್ ಮೂಲಕ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ನೀಡುವ ಆಮಿಷವೊಡ್ಡಿ ಸುಮಾರು 15 ಕೋಟಿ ರೂ.ಗಳಷ್ಟು ವ್ಯವಹಾರ ನಡೆಸಿದ್ದಾರೆ.

ವಂಚನಾ ಜಾಲದ ವೆಬ್ ಸೈಟ್ ಪ್ರಕಾರ, ಯೂಸರ್ ಐಡಿ ಪಾಸ್ ವರ್ಡ್ ನೊಂದಿಗೆ ಹೂಡಿಕೆದಾರರು ಮೊದಲಿಗೆ 3 ಇ-ಪಿನ್ ಖರೀದಿಸಬೇಕಾಗುತ್ತದೆ. ತಲಾ 1 ಸಾವಿರ ರೂ.ನಂತೆ 3 ಸಾವಿರ ರೂ.ಗಳನ್ನು ಸಂಬಂಧಿಸಿದವರ ಖಾತೆಗೆ ಜಮಾವಣೆ ಮಾಡಬೇಕಾಗುತ್ತದೆ. ಹಣ ಸಂದಾಯ ಮಾಡಿದ ರಶೀದಿಯನ್ನು ಅಪ್ ಲೋಡ್ ಮಾಡಿದ ನಂತರ ಏಳು ದಿನಗಳ ಒಳಗೆ 3 ಸಾವಿರ ರೂ.ಗಳಿಗೆ ದುಪ್ಪಟ್ಟಾಗಿ 6 ಸಾವಿರ ರೂ.ಗಳನ್ನು ಹೂಡಿಕೆದಾರನ ಖಾತೆಗೆ ಸಂದಾಯ ಮಾಡಲಾಗುತ್ತದೆ. ಈ ಪ್ರಕಾರವಾಗಿ ಆರಂಭದಲ್ಲಿ ಇ-ಪಿನ್ ಪಡೆಯಲೆಂದು ಹೂಡಿಕೆ ಮಾಡಿದ ಜನರು ಮೊದಮೊದಲು ಲಾಭ ಬಂತೆಂದು ನಂತರದ ದಿನಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಹಣ ಹೂಡಿಕೆ ಮಾಡಿ ಕೊನೆಯ ಕ್ಷಣದಲ್ಲಿ ಹಣ ಸಿಗದೆ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.
ಈ ವ್ಯವಹಾರ ಬ್ಯಾಂಕ್ ಖಾತೆಗಳ ಮೂಲಕ ನಡೆಯುತ್ತಿದ್ದರೂ ಇದು ಕಾನೂನು ಬಾಹಿರ. ಈ ರೀತಿ ವ್ಯವಹಾರಗಳನ್ನು ಮಾಡುವ ಅನೇಕ ವೆಬ್ ಸೈಟ್ ಗಳು ಚಾಲ್ತಿಯಲ್ಲಿವೆ. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿ, ಹಣದ ಆಮಿಷವೊಡ್ಡುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಿ" ಎಂದು ಎಸ್ಪಿ ಮನವಿ ಮಾಡಿದರು.












Click it and Unblock the Notifications