ಆಗಸ್ಟ್ ಭೀತಿಯಿಂದ ಮನೆ ಖಾಲಿ ಮಾಡುತ್ತಿರುವ ಕೊಡಗು ಮಂದಿ
ಮಡಿಕೇರಿ, ಜುಲೈ 3: ಕಳೆದ ವರ್ಷ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆ ಮಂಜಿನ ನಗರಿ ಮಡಿಕೇರಿಯ ಜನರನ್ನು ಮತ್ತೆ ಮತ್ತೆ ಕಾಡುತ್ತಿದೆ. ಈ ವರ್ಷ ಆಗಸ್ಟ್ ತಿಂಗಳಲ್ಲಿ ಏನಾಗುತ್ತದೋ ಎಂದು ಕೆಲವರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಜೊತೆಗೆ ಸ್ವಂತ ಮನೆಗಳನ್ನು ಖಾಲಿ ಮಾಡಿ ಬಾಡಿಗೆ ಮನೆಗಳತ್ತ ತೆರಳುವ ಚಿಂತೆ ಮಾಡುತ್ತಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಮತ್ತೆ ಆಗಸ್ಟ್ ತಿಂಗಳು ಹತ್ತಿರವಾಗುತ್ತಿದ್ದಂತೆ, ಮತ್ತೆ ಆತಂಕ ಎದುರಾಗಿದೆ. ಮಳೆಯೂ ಆರಂಭವಾಗುತ್ತಿರುವುದರಿಂದ ಮಡಿಕೇರಿಯ ಕೆಲವು ಬಡಾವಣೆಗಳ ನಿವಾಸಿಗಳು ಸ್ವಂತ ಮನೆ ಖಾಲಿ ಮಾಡಿ ಬೇರೆಡೆಗೆ ವಲಸೆ ತೆರಳುತ್ತಿದ್ದಾರೆ.
ಕಳೆದ ವರ್ಷದ ಮಳೆಯಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಸರ್ಕಾರದಿಂದ ಮನೆ ನಿರ್ಮಾಣ ಕಾರ್ಯ ಸಹ ನಡೆಯುತ್ತಿದೆ. ಆದರೆ ಮಡಿಕೇರಿ ಸೇರಿದಂತೆ ಕೆಲವು ಪ್ರದೇಶದಲ್ಲಿ ಮನೆಗಳು ಈಗಲೂ ಅಪಾಯದ ಸ್ಥಿತಿಯಲ್ಲೇ ಇವೆ. ಈ ಬಾರಿ ಮಳೆಯಿಂದ ಮತ್ತೆ ಅನಾಹುತ ಸಂಭವಿಸಬಹುದೆಂಬ ಭಯವೂ ಎಲ್ಲರಲ್ಲಿದೆ.

ಸರ್ಕಾರದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣವಾಗುತ್ತಿದ್ದರೂ, ಎಲ್ಲ ಸಂತ್ರಸ್ತರಿಗೆ ನೀಡುವುದು ಕಷ್ಟಸಾಧ್ಯ. ಈ ಹಿನ್ನೆಲೆ ಈಗಾಗಲೇ ಜಿಲ್ಲಾಡಳಿತ ಮುಂಜಾಗೃತಾ ಕ್ರಮವನ್ನು ಕೈಗೊಂಡಿದೆ. ಕೆಲವು ಸಂತ್ರಸ್ತರು ತಮ್ಮ ಮನೆಯ ಸ್ಥಿತಿಯನ್ನು ಅರಿತು ಸ್ವಯಂ ಪ್ರೇರಿತವಾಗಿ ಖಾಲಿ ಮಾಡುತ್ತಿದ್ದಾರೆ.












Click it and Unblock the Notifications