ಮೈಸೂರು-ತಲಚೇರಿ ರೈಲ್ವೆ ಮಾರ್ಗದ ಸರ್ವೆ: ಕೊಡಗಿನಲ್ಲಿ ಆತಂಕ ಶುರು!
ಮಡಿಕೇರಿ, ಜುಲೈ 09: ಮೈಸೂರು-ತಲಚೇರಿ ರೈಲ್ವೆ ಮಾರ್ಗವನ್ನು ಕೊಡಗಿನ ಮೂಲಕ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ಬಂದಾಗಲೇ ಇಲ್ಲಿನ ಜನ ಬೀದಿಗಿಳಿದು ಹೋರಾಟ ಮಾಡಿದ್ದರು. ಇದಕ್ಕೆ ಕಾರಣವೂ ಇತ್ತು. ಒಂದು ವೇಳೆ ರೈಲ್ವೆ ಮಾರ್ಗ ಆಗಿದ್ದೇ ಆದರೆ ಕೊಡಗಿನ ಪರಿಸರ ನಾಶವಾಗುವುದರೊಂದಿಗೆ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ.
ಕಾಫಿಯನ್ನೇ ನಂಬಿ ಬದುಕುತ್ತಿರುವ ಬೆಳೆಗಾರರು ತಮ್ಮ ತೋಟವನ್ನು ಕಳೆದುಕೊಂಡು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುವುದರೊಂದಿಗೆ ಅರಣ್ಯ ನಾಶವಾಗಿ ಭವಿಷ್ಯದಲ್ಲಿ ಮಳೆಯಿಲ್ಲದೆ ಬರಡಾಗುವ ಆತಂಕವೂ ಇಲ್ಲಿನವರನ್ನು ಕಾಡುತ್ತಿದೆ. ಹೀಗಾಗಿಯೇ ನಮಗೆ ರೈಲು ಬೇಡ ಎಂಬ ಪ್ರತಿಭಟನೆಯನ್ನು ಫೆ.18ರಂದು ಮೈಸೂರಿನಲ್ಲಿ ನಡೆಸಿದ್ದರು.
ಬೆಂಗಳೂರು-ಕೊಯಮತ್ತೂರು ನಡುವೆ ಹೊಸ ರೈಲಿಗೆ ಚಾಲನೆ
ಇದೆಲ್ಲ ನಡೆದು ನಾಲ್ಕು ತಿಂಗಳೇ ಕಳೆದು ಹೋಗಿದೆ. ಆದರೆ ಇದೀಗ ಸದ್ದಿಲ್ಲದೆ ಕೊಡಗು ಜಿಲ್ಲೆಯ ಮೂಲಕ ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕೆ ದ.ಕೊಡಗಿನ ಕುಟ್ಟ, ಕೆ.ಬಾಡಗ ಮತ್ತು ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಯುತ್ತಿರುವುದು ಇಲ್ಲಿನ ಜನತೆಯನ್ನು ಆತಂಕಕ್ಕೆ ತಳ್ಳಿದೆ.
ಈ ಹಿಂದೆ ಮೈಸೂರಿನಿಂದ ಕೇರಳಕ್ಕೆ ಹೈಟೆನ್ಷನ್ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲಾಯಿತು. ಈ ವೇಳೆ ಇಲ್ಲಿನ ಜನ ಭಾರೀ ಹೋರಾಟ ನಡೆಸಿದ್ದರು. ಆದರೂ ಅದ್ಯಾವುದನ್ನು ಲೆಕ್ಕಿಸದೆ ವಿದ್ಯುತ್ ಮಾರ್ಗ ಮಾಡಲಾಯಿತು. ಇದರಿಂದ ಕಾಡಿನಲ್ಲಿದ್ದ, ತೋಟದಲ್ಲಿದ್ದ ಸಾವಿರಾರು ಮರಗಳು ನೆಲಕ್ಕುರುಳಿದವು. ಅದರ ಪರಿಣಾಮ ಕೊಡಗಿನಲ್ಲಿ ಮಳೆ ಇಳಿಮುಖವಾಗಿದೆ. ಕೆಆರ್ ಎಸ್ ಜಲಾಶಯ ತುಂಬುತ್ತಿಲ್ಲ. ರೈತರಿಗೆ ನೀರಿಲ್ಲದೆ ಬೆಳೆಬೆಳೆಯಲಾಗದೆ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.
ಇದೀಗ ರೈಲ್ವೆ ಮಾರ್ಗ ನಿರ್ಮಾಣವಾಗಿದ್ದೇ ಆದರೆ ಇನ್ನಷ್ಟು ಪರಿಸರಕ್ಕೆ ಹಾನಿಯಾಗಲಿದ್ದು, ಇಲ್ಲಿನ ಪ್ರಾಣಿ ಸಂಕುಲ, ಜನ ಜೀವನದ ಮೇಲೆಯೂ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.
ಯಾವುದೇ ಮಾಹಿತಿ ಇಲ್ಲದೆ ರೈಲ್ವೆ ಮಾರ್ಗದ ಸರ್ವೆ ಕಾರ್ಯಕ್ಕೆ ಮುಂದಾಗಿರುವುದು ಇಲ್ಲಿನ ಬೆಳೆಗಾರರನ್ನು ಕಂಗೆಡಿಸಿದೆ. ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು ಗುತ್ತಿಗೆ ಆಧಾರದಲ್ಲಿ ಈ ಸರ್ವೆ ಕಾರ್ಯಕ್ಕೆ ಮುಂದಾಗಿದ್ದು, ಮಹರಾಷ್ಟ್ರ ರಾಜ್ಯದ ನೋಂದಾಯಿತ ವಾಹನದೊಂದಿಗೆ ಜಿಪಿಎಸ್ ಹಾಗೂ ಸರ್ವೆ ಕಾರ್ಯದ ಪರಿಕರಗಳೊಂದಿಗೆ ಸರ್ವೆ ಕಾರ್ಯವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಸುಮಾರು 8 ಮಾಡುತ್ತಿದ್ದಾರೆ. ಇದರ ನೇತೃತ್ವವನ್ನು ಕೊಂಕಣ್ ರೈಲ್ವೇ ಕಾರ್ಪೋರೇಷನ್ ಲಿಮಿಟೆಡ್ ನ ಗುತ್ತಿಗೆ ಉದ್ಯೋಗಿ ಎಸ್.ಹೆಚ್. ಆದರ್ಶ್ ಕೌಶಲ್ ಅಗರ್ವಾಲ್ ವಹಿಸಿದ್ದು ಅವರ ನೇತೃತ್ವದಲ್ಲೆ ಸರ್ವೆ ಕಾರ್ಯ ಭರದಿಂದ ಸಾಗುತ್ತಿದೆ.
ದಿಢೀರ್ ಆಗಿ ಕಾಫಿ ತೋಟಗಳ ನಡುವೆ ಸರ್ವೆ ಕಾರ್ಯ ನಡೆಸುತ್ತಿದ್ದ ಸಿಬ್ಬಂದಿಗಳನ್ನು ನೋಡಿದ ಸ್ಥಳೀಯ ಕಾಫಿ ಬೆಳೆಗಾರರು ಬೆಚ್ಚಿ ಬಿದ್ದಿದ್ದು, ಹತ್ತಿರ ಹೋಗಿ ವಿಚಾರಿಸಿದಾಗ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೆ ಕಾರ್ಯ ಮಾಡುತ್ತಿರುವ ಬಗ್ಗೆ ತಿಳಿದು ಗರಂ ಆಗಿದ್ದಾರೆ. ಅಲ್ಲದೆ ಸರ್ವೆ ಕಾರ್ಯ ನಡೆಸದಂತೆ ತಡೆದಿದ್ದಾರೆ.
ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದೆ ಅಧಿಕಾರಿಗಳು ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ. ನಕಾಶೆ ಹಿಡಿದು ಸರ್ವೆ ಕಾರ್ಯ ನಡೆಸಿರುವ ತಂಡ ಮೈಸೂರಿನಿಂದ ದಕ್ಷಿಣ ಕೊಡಗಿನ ಮೂಲಕ ಕೇರಳದ ಕಾಟಿಕೊಳವನ್ನು ಗುರುತಿಸುವ ಸಂಪರ್ಕವನ್ನು ಗುರುತು ಮಾಡಿದ್ದಾರೆ ಎನ್ನಲಾಗಿದೆ. ಕೊಡಗಿನ ಕೆಲವು ಕಡೆಗಳಲ್ಲಿ ಸ್ಟೇಷನ್ ಗಳ ನಿರ್ಮಾಣದ ಗುರುತುಗಳನ್ನು ಮಾಡಲಾಗಿದೆ.
ಒಟ್ಟಾರೆ ಈ ರೈಲ್ವೆ ಮಾರ್ಗ ಅಸ್ತಿತ್ವಕ್ಕೆ ಬಂದಿದ್ದೇ ಆದರೆ ಕೇರಳ ಮತ್ತು ಕರ್ನಾಟಕ ರಾಜ್ಯದ ನಡುವೆ ಸಂಪರ್ಕ ಏರ್ಪಟ್ಟು ಹಲವು ಉಪಯೋಗವಾದರೂ ಕೊಡಗಿನ ಜನಕ್ಕೆ ಮಾತ್ರವಲ್ಲ ಕಾವೇರಿ ಕಣಿವೆ ಜನಕ್ಕೆ ಮಾತ್ರ ಭವಿಷ್ಯದಲ್ಲಿ ಮಾರಕವಾಗಲಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.