ಸುದ್ದಿಯ ಜಂಜಾಟ ಮರೆತು ಕೆಸರುಗದ್ದೆಯಲ್ಲಿ ಮಿಂದೆದ್ದ ಕೊಡಗಿನ ಪತ್ರಕರ್ತರು
ಮಡಿಕೇರಿ, ಜುಲೈ 26: ಸದಾ ಸುದ್ದಿ ಮನೆಯಲ್ಲಿ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದವರು ತಮ್ಮ ಜಂಜಾಟವನ್ನು ಮರೆತು ಮಳೆಗೆ ಕೆಸರುಗದ್ದೆಯ ವಿವಿಧ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಕೆಲವರು ಗೆದ್ದು ಬೀಗಿದರೆ, ಮತ್ತೆ ಕೆಲವರು ಸೋತರೂ ಮನರಂಜನೆ ಸಿಕ್ಕಿತಲ್ಲ ಎಂಬ ಸಂಭ್ರಮದಲ್ಲಿದ್ದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲುವಿನ ಕೊಳಕೇರಿ ಗ್ರಾಮದ ದಿವಂಗತ ಬಿದ್ದಾಟಂಡ ದೇವಯ್ಯ ಅವರ ಭತ್ತದ ಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಎಲ್ಲರ ಗಮನಸೆಳೆಯಿತು.
ಕೆಸರು ಗದ್ದೆ ಕ್ರೀಡಾಕೂಟವನ್ನು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಿದ್ದಾಟಂಡ ಬಿ. ಮುತ್ತಣ್ಣ ಉದ್ಘಾಟಿಸಿ ಶುಭಹಾರೈಸಿದರು. ಆ ನಂತರ ವಿವಿಧ ಕ್ರೀಡಾಕೂಟಗಳು ನಡೆದವು. ಈ ಕ್ರೀಡಾಕೂಟಗಳಲ್ಲಿ ಪತ್ರಕರ್ತರು ಭಾಗವಹಿಸಿ ಕ್ರೀಡಾಭಿಮಾನ ಮೆರೆದರು. ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.

ವಿವಿಧ ತಂಡಗಳು ಭಾಗಿ
ಜಿಲ್ಲೆಯ ವಿವಿಧೆಡೆಯ ಹತ್ತಕ್ಕೂ ಅಧಿಕ ತಂಡಗಳು ಭಾಗವಹಿಸಿತ್ತು. ಹ್ಯಾಂಡ್ ಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಡಿಕೇರಿಯ ಯಂಗ್ ಸ್ಪೈಡರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ವಿರಾಜಪೇಟೆಯ ಟೈಗರ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಗೆದ್ದವರ ಸಂಭ್ರಮ
ನಾಟಿ ಓಟ ಸ್ಪರ್ಧೆಯಲ್ಲಿ ಉದಯ್ ಮೊಣ್ಣಪ್ಪ(ಪ್ರಥಮ), ಅಜಿತ್ ನಾಣಯ್ಯ(ದ್ವಿತೀಯ), ದಿವಾಕರ್(ತೃತೀಯ) ಬಹುಮಾನ ಪಡೆದುಕೊಂಡರು. ಕೆಸರುಗದ್ದೆಯಲ್ಲಿ ನಡೆದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮಡಿಕೇರಿ ಯಂಗ್ ಸ್ಪೈಡರ್ಸ್ ತಂಡದ ಪಡೆಯಿತು. ಇದರಲ್ಲಿ ಆದರ್ಶ್, ನವೀನ್ ಡಿಸೋಜ, ವಿನೋದ್, ಇಸ್ಮಾಯಿಲ್ ಕಂಡಕರೆ, ವಿಘ್ನೇಶ್ ಎಂ. ಭೂತನಕಾಡು, ರೋಹಿತ್ ಇದ್ದರು. ದ್ವಿತೀಯ ಸ್ಥಾನ ವಿರಾಜಪೇಟೆ ಟೈಗರ್ಸ್ ತಂಡದ ಪಾಲಾಯಿತು ಇದರಲ್ಲಿ ನಾಯಕ ಪಾರ್ಥಚಿಣ್ಣಪ್ಪ, ಹೇಮಂತ್ ಕುಮಾರ್, ಅಜ್ಜಮಾಡ ರಮೇಶ್ ಕುಟ್ಟಪ್ಪ, ಟಿ.ಎನ್. ಮಂಜುನಾಥ್, ಲೋಹಿತ್ ಗೌಡ, ರವಿಕುಮಾರ್, ಡಿ.ಪಿ. ರಾಜೇಶ್ ಪಾಲ್ಗೊಂಡಿದ್ದರು.

ಮನಸೆಳೆದ ಹಗ್ಗಜಗ್ಗಾಟ
ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅಜಿತ್ ನಾಣಯ್ಯ, ಬೊಳ್ಳಜಿರ ಅಯ್ಯಪ್ಪ, ವಿನೋದ್, ನವೀನ್ ಡಿಸೋಜ, ರೋಹಿತ್, ಲೋಕೇಶ್ ಅವರಿದ್ದ ಆದರ್ಶ ತಂಡ ಪಡೆದರೆ, ದ್ವಿತೀಯ ಸ್ಥಾನವನ್ನು ನಾಯಕ ಪಾರ್ಥಚಿಣ್ಣಪ್ಪ, ಹೇಮಂತ್ ಕುಮಾರ್, ಎಂ.ಎನ್. ನಾಸೀರ್, ಟಿ.ಎನ್. ಮಂಜುನಾಥ್, ಲೋಹಿತ್ ಗೌಡ, ರವಿಕುಮಾರ್, ಡಿ.ಪಿ. ರಾಜೇಶ್ ಅವರನ್ನೊಳಗೊಂಡ ವಿರಾಜಪೇಟೆ ಟೈಗರ್ಸ್ ತಂಡ ಪಡೆಯಿತು.

ಗಣ್ಯರ ಉಪಸ್ಥಿತಿ
ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ, ನಾಪೋಕ್ಲು ಗ್ರಾಪಂ ಸದಸ್ಯೆ ಪುಲ್ಲೇರ ಪದ್ಮಿನಿ, ಸ್ಥಳೀಯರಾದ ಸೋಮಯ್ಯ, ಬೆಳೆಗಾರ ಬಿ.ಟಿ. ಕಾರ್ಯಪ್ಪ, ವಿರಾಜಪೇಟೆ ಉದ್ಯಮಿ ಚುಪ್ಪ ನಾಗರಾಜು, ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಪಾಧ್ಯಕ್ಷ ವಿಘ್ನೇಶ್ ಎಂ. ಭೂತನಕಾಡು, ಖಜಾಂಚಿ ರೆಜಿತ್ ಕುಮಾರ್ ಗುಹ್ಯ, ಸಂಘಟನಾ ಕಾರ್ಯದರ್ಶಿ ಎಂ.ಎ. ಅಜೀಜ್ ಮತ್ತಿತರರು ಕ್ರೀಡಾಕೂಟಕ್ಕೆ ಸಾಕ್ಷಿಯಾದರು.












Click it and Unblock the Notifications