ಕಾವೇರಿ ಸಮಸ್ಯೆ ಕಾವೇರಿಯಿಂದಲೇ ಪರಿಹಾರ ಕಾಣಬೇಕು
ಮಡಿಕೇರಿ, ಸೆಪ್ಟೆಂಬರ್ 7: ರಾಜ್ಯದಲ್ಲಿ ಭುಗಿಲೆದ್ದಿರುವ ವಿವಾದ ತಣ್ಣಗಾಗಲು ಕಾವೇರಿ ಕೃಪೆ ತೋರಬೇಕು ಎಂದು ಪ್ರಾರ್ಥಿಸಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಆಶ್ರಯದಲ್ಲಿ ಬುಧವಾರ ನಡೆದ ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಹಲವು ಮುಖಂಡರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ತಲಕಾವೇರಿ ಕ್ಷೇತ್ರದ ಮುಖ್ಯಸ್ಥರಾದ ಕೋಡಿ ಮೋಟಯ್ಯ ಮಾತನಾಡಿ, ಕಾವೇರಿ ಜಲ ವಿವಾದ ತಣ್ಣಗಾಗಬೇಕಾದರೆ ಕಾವೇರಿ ಮಾತೆಯಿಂದ ಮಾತ್ರ ಸಾಧ್ಯ ಎಂದರು.[ಸೆ.9ರ ಕರ್ನಾಟಕ ಬಂದ್ ಬಿಸಿ ಎಲ್ಲಿಗೆ ತಟ್ಟಲಿದೆ?]
ನೀರಿಗಾಗಿ ಮಾನವರ ನಡುವೆ ಹೋರಾಟ ನಡೆಯುತ್ತಿರುವುದು ಸಮಂಜಸವಲ್ಲ. ನೀರಿನ ವ್ಯಾಜ್ಯಕ್ಕೆ ಸುಪ್ರೀಂ ಕೋರ್ಟ್ ನಿಂದಲೂ ಪರಿಹಾರ ಕಾಣಲು ಅಸಾಧ್ಯ ಎಂದು ಶಂಕೆ ವ್ಯಕ್ತಪಡಿಸಿದ ಅವರು, ಈ ನಿಟ್ಟಿನಲ್ಲಿ ಕಾವೇರಿ ಮಾತೆಯ ಮೊರೆ ಹೋಗುವುದು ಸೂಕ್ತ ಎಂದರು.
ಮುಖ್ಯ ಅರ್ಚಕರಾದ ರಾಮಕೃಷ್ಣ ಆಚಾರ್ ಮಾತನಾಡಿ, ಪ್ರಸಕ್ತ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ದೇವರ ಅನುಗ್ರಹದ ಅವಶ್ಯಕತೆ ಇರುವುದಾಗಿ ತಿಳಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಮಾತನಾಡಿ, ಜೀವನದಿ ಕಾವೇರಿಯ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡುವುದರೊಂದಿಗೆ ಪ್ರಮುಖ ನದಿಗಳನ್ನು ರಾಷ್ಟ್ರೀಕರಣಗೊಳಿಸುವುದರಿಂದ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.[ಕರ್ನಾಟಕದ ಜಲಾಶಯಗಳಲ್ಲಿ ನೀರು ಸಂಗ್ರಹ ಎಷ್ಟಿದೆ?]
ಇದೇ ಸಂದರ್ಭ ಭಗಂಡೇಶ್ವರ ದೇವಾಲಯದಲ್ಲಿ ಪೂಜಾ ಸಂಕಲ್ಪ ನೆರವೇರಿಸುವುದರೊಂದಿಗೆ ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಸಕ್ತ ತಲೆದೋರಿರುವ ಜಲವಿವಾದ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿದರು. ಭಾಗಮಂಡಲ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಾ ರೈ, ನದಿ ಸ್ವಚ್ಛತಾ ಆಂದೋಲನದ ಪ್ರಮುಖರಾದ ಕೆ.ಜಿ.ಮನು, ನಿಡ್ಯಮಲೆ ದಿನೇಶ್, ಎಂ.ಡಿ.ಕೃಷ್ಣಪ್ಪ, ವೈಶಾಖ್, ಬಿ.ಡಿ.ಅಣ್ಣಯ್ಯ, ವಿನೋದ್ ಇದ್ದರು.