ಸಿಎನ್ ಸಿಯಿಂದ ಮಡಿಕೇರಿಯಲ್ಲಿ ಕೈಲ್ ಪೋಳ್ದ್
ಮಡಿಕೇರಿ, ಸೆಪ್ಟೆಂಬರ್ 2: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ ಸಿ) ಸಂಘಟನೆ ವತಿಯಿಂದ ಕೈಲ್ ಪೋಳ್ದ್(ಕೈಲ್ ಮಹೂತ್) ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು.
ನಗರದ ಜೂನಿಯರ್ ಕಾಲೇಜಿನಲ್ಲಿ ಸೇರಿ ಸಾಂಪ್ರದಾಯಿಕವಾಗಿ ಕೋವಿ - ಕತ್ತಿ ಸಹಿತ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿ, ಹಿರಿಯರಿಗೆ ಮೀದಿ ಅರ್ಪಿಸಲಾಯಿತು. ಬಳಿಕ ವಾಹನ ಮೆರವಣಿಗೆಯೊಂದಿಗೆ ನಗರದ ಮುಖ್ಯ ಬೀದಿಯಲ್ಲಿ ಸಾಗಿ, ನಗರ ಹೊರವಲಯದ ಕ್ಯಾಪಿಟಲ್ ವಿಲೇಜ್ ಗೆ ತೆರಳಿ, ಅಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಪ್ರದಾಯಿಕ ಊಟೋಪಚಾರದೊಂದಿಗೆ ಹಬ್ಬದ ಆಚರಣೆ ನಡೆಯಿತು.[ಭತ್ತದ ಕೃಷಿಯ ಬತ್ತದ ಖುಷಿ: ಕೊಡಗಿನಲ್ಲಿ ಕೈಲ್ ಮುಹೂರ್ತದ ಸಂಭ್ರಮ]

ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವರ ಹಕ್ಕಿಗಾಗಿ ಸಿಎನ್ ಸಿ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಎಲ್ಲ ಬೇಡಿಕೆಗಳು ಸಂವಿಧಾನಾತ್ಮಕವಾಗಿಯೇ ಇದೆ. ಆದರೆ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಸಂಘಟನೆಯ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿವೆ ಎಂದರು.
ದೇವಟ್ ಪರಂಬ್, ಕೊಡವ ಕುಂದ್ ಗೆ ಈ ಕಾರಣಕ್ಕಾಗಿಯೇ ವಿರೋಧ ವ್ಯಕ್ತವಾಗಿದೆ. ದೇವಟ್ ಪರಂಬ್ ನಲ್ಲಿ ಸ್ಮಾರಕವಾದರೆ, ಕೊಡವ ಕುಂದ್ ನಲ್ಲಿ ಕೊಡವ ವಿಶ್ವವಿದ್ಯಾನಿಲಯ ಸ್ಥಾಪನೆಯಾದರೆ ಈ ಸ್ಥಳಗಳಲ್ಲಿ ಜನಾಂಗಕ್ಕೆ ರಕ್ಷಣೆ ಸಿಗಲಿದೆ ಎಂದರು.[ದಾಂಪತ್ಯಕ್ಕೆ ಕಾಲಿರಿಸಿದ ಸಾಧಕಿ ಕೊಡಗಿನ ಪ್ರೀತ್]

ಹಿಂದೂ ಸಂಘಟನೆಯ ಪ್ರಮುಖ ಚಿ.ನಾ.ಸೋಮೇಶ್ ಮಾತನಾಡಿ, ಹಲವಾರು ರಾಜ ಪರಂಪರೆಗಳು ಅದರದ್ದೇ ಆಚಾರ- ವಿಚಾರ ಹೊಂದಿವೆ. ಅದರಂತೆ ಕೊಡಗಿನಲ್ಲಿ ಕೊಡವಾಮೆ ಇದೆ. ಕೊಡವಾಮೆ ಉಳಿದರೆ ಎಲ್ಲವೂ ಉಳಿಯುತ್ತದೆ ಎಂದರು. ಹಬ್ಬದ ಅಂಗವಾಗಿ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ವಿವಿಧ ಸ್ಪರ್ಧೆ, ನೃತ್ಯ ನಡೆದವು.












Click it and Unblock the Notifications