ಕಗ್ಗೋಡ್ಲು ಕೆಸರುಗದ್ದೆ ಕ್ರೀಡೆಗೆ ಬೆಳ್ಳಿಹಬ್ಬದ ಸಂಭ್ರಮ
ಕೊಡಗಿನಲ್ಲಿ ಅಲ್ಲಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯುತ್ತಿದೆ. ಆದರೆ ಸಂತಸದ ವಿಷಯ ಏನೆಂದರೆ, ಕೆಸರುಗದ್ದೆ ಕ್ರೀಡೆಯನ್ನು ಹುಟ್ಟುಹಾಕಿದ ಮಡಿಕೇರಿ ಸಮೀಪದ ಕಗ್ಗೋಡ್ಲುವಿನ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಈಗ ಬೆಳ್ಳಿಹಬ್ಬದ ಸಂಭ್ರಮ.
ಇಲ್ಲಿ ಕ್ರೀಡಾಕೂಟ ಆ.13ರಂದು ನಡೆಯಲಿದೆ. ತಲೆತಲಾಂತರದಿಂದ ನಡೆದುಕೊಂಡು ಬಂದ ಸಾಂಪ್ರದಾಯಿಕ ನಾಟಿ ಓಟಕ್ಕೆ ನೂತನ ಮೆರುಗು ನೀಡಿ, ಕೆಸರುಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಸೇರ್ಪಡೆಗೊಳಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಅಗಿರುವುದು ಇತಿಹಾಸ.[ಕೊಡಗಿನ ಗಡಿಭಾಗದಲ್ಲೊಂದು 'ಕಲ್ಯಾಳ ಜಲಪಾತ']
ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯುವ ಕಗ್ಗೋಡ್ಲು ಮಡಿಕೇರಿಯಿಂದ 6 ಕಿ.ಮೀ.ದೂರದಲ್ಲಿದೆ. ಕಾಫಿ ತೋಟಗಳ ನಡುವಿನ ದೊಡ್ಡಗದ್ದೆಗಳನ್ನು ಒಳಗೊಂಡ ಭತ್ತದ ಬಯಲು ಇಲ್ಲಿನ ವಿಶೇಷತೆ.
ಸಿ.ಬಿ.ಬೋಪಯ್ಯ ಅವರ ಗದ್ದೆಯಲ್ಲಿ ನಾಟಿಯಾದ ಬಳಿಕ ಅದರ ಮೇಲೆ ಓಟವನ್ನು ಹಿಂದಿನಿದಿಂದಲೂ ಏರ್ಪಡಿಸಲಾಗುತ್ತಿತ್ತು. ಇದರಲ್ಲಿ ಗೆದ್ದವರಿಗೆ ನಗದು, ಬಾಳೆಗೊನೆ, ತೆಂಗಿನಕಾಯಿ ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು. ಹೀಗೆ ನಡೆಯುತ್ತಿದ್ದ ನಾಟಿ ಓಟದ ಪ್ರಾಯೋಜಕತ್ವವನ್ನು ಲಯನ್ಸ್ ಕ್ಲಬ್, ಕೊಡಗು ಪೊಲೀಸ್ ಇಲಾಖೆ ನಡೆಸುವ ಮೂಲಕ ಇನ್ನಷ್ಟು ಮೆರುಗು ನೀಡಿತು.[ಕೊಡಗಿನ ಗದ್ದೆ ಹಬ್ಬ 'ಬೇಲ್ ನಮ್ಮೆ' ವಿಶೇಷ ಗೊತ್ತಾ?]
ಪ್ರತಿ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ಶನಿವಾರ ಮಧ್ಯಾಹ್ನ ನಾಟಿ ಓಟ ನಡೆಸಲಾಗುತ್ತಿತ್ತು. ಅಲ್ಲದೆ, ವಿಜೇತರಿಗೆ ಸ್ವಾತಂತ್ರ್ಯೋತ್ಸವದ ದಿನದಂದು ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತಿತ್ತು.
ಇದು ಕೆಲವು ವರ್ಷಗಳ ಕಾಲ ಹೀಗೆಯೇ ನಡೆಯುತ್ತಾ ಬಂದಿತಾದರೂ ಇದಕ್ಕೆ ಹೊಸರೂಪ ನೀಡಿದ್ದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಯೂತ್ ಹಾಸ್ಟೆಲ್ ಮಡಿಕೇರಿ ಘಟಕ.
ಯೂತ್ ಹಾಸ್ಟೆಲ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಇತರೆ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಸಾಂಪ್ರದಾಯಿಕ ನಾಟಿ ಓಟದೊಂದಿಗೆ ಕೆಸರು ಗದ್ದೆಯಲ್ಲಿ ವಾಲಿಬಾಲ್, ಕೆಸರುಗದ್ದೆ ಓಟ, ರಿಲೇ, ನಿಂಬೆಹಣ್ಣು ಚಮಚ ಓಟ, ಹಗ್ಗಜಗ್ಗಾಟ ಸೇರಿದಂತೆ ಹಲವು ಕ್ರೀಡೆಗಳನ್ನು ಸೇರಿಸಿ, ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನಾಗಿ ಮಾರ್ಪಡಿಸಿತು.
ಆಗಿನಿಂದ ಇಲ್ಲಿ ತನಕ ಪ್ರತಿ ವರ್ಷ ಆಗಸ್ಟ್ 15ನೇ ತಾರೀಕಿನ ಹಿಂದಿನ ಶನಿವಾರ (ಈ ಬಾರಿ ಆಗಸ್ಟ್ 13ರಂದು) ಕ್ರೀಡಾಕೂಟ ನಡೆಸಿಕೊಂಡು ಬರಲಾಗುತ್ತಿದೆ.
ಕ್ರೀಡಾಕೂಟದ ದಿನ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಮಕ್ಕಳು, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಬೃಹತ್ ಕೆಸರು ಗದ್ದೆಗಳಲ್ಲಿ ಕೆಸರು ಸಿಂಚನದೊಂದಿಗೆ ಪ್ರಶಸ್ತಿಗಾಗಿ ಸೆಣಸಾಡುವ ದೃಶ್ಯ ನೋಡುಗರ ಗಮನ ಸೆಳೆಯುತ್ತದೆ. ಮಳೆಯಿರಲಿ ಬಿಸಿಲಿರಲಿ ಕ್ರೀಡಾಕೂಟ ನಡೆಯುತ್ತದೆ. ಮಳೆಯಿದ್ದರೆ ಕ್ರೀಡಾಕೂಟಕ್ಕೆ ಇನ್ನಷ್ಟು ಮೆರುಗು ಸಿಗುತ್ತದೆ. .
ನಿತ್ಯದ ಜಂಜಾಟ, ಸದಾ ಗಿಜಿಗಿಡುವ ಪೇಟೆಯ ಬದುಕಿನಿಂದ ಹೊರಗಿದ್ದು ಒಂದಷ್ಟು ಹೊತ್ತು ನೆಮ್ಮದಿಯಾಗಿ ಸಮಯ ಕಳೆಯೋಣ ಎನ್ನುವವರು ಪ್ರತಿ ವರ್ಷವೂ ಇಲ್ಲಿಗೆ ಬರುತ್ತಾರೆ.