ಕಬಿನಿ ಜಲಾಶಯ ಭರ್ತಿಗೆ ಬರೀ 5 ಅಡಿ ಬಾಕಿ
ಮೈಸೂರು, ಜುಲೈ 16: ಕೇರಳದಲ್ಲಿ ಮುಂಗಾರು ಬಿರುಸುಗೊಂಡಿರುವ ಕಾರಣ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಯಾಗಲು ಇನ್ನು ಐದು ಅಡಿಯಷ್ಟೆ ಬಾಕಿಯಿದೆ.
ಕೇರಳದಲ್ಲಿ ಮುಂಗಾರು ಆರಂಭದಲ್ಲಿಯೇ ಅಂದರೆ ಜೂನ್ ತಿಂಗಳಲ್ಲಿ ಆಶಾದಾಯಕವಾಗಿತ್ತು. ಒಂದು ವೇಳೆ ಅದು ಹಾಗೆಯೇ ಮುಂದುವರೆದಿದ್ದರೆ ಇಷ್ಟರಲ್ಲಿಯೇ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ಮೃಗಶಿರಾ ಮಳೆ ಬಳಿಕ ಆರಿದ್ರ ಮಳೆ ಸುರಿಯದೆ ಮುಂಗಾರು ಕ್ಷೀಣವಾದ ಕಾರಣ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿತ್ತು.
ಇದೀಗ ಮತ್ತೆ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಚೇತರಿಸಿದೆ. ವಯನಾಡು ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಪರಿಣಾಮ ಕಬಿನಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಸದ್ಯ ಸುಮಾರು ಇಪ್ಪತ್ತು ಸಾವಿರ ಕ್ಯುಸೆಕ್ಗಿಂತಲೂ ಹೆಚ್ಚು ಒಳಹರಿವಿದೆ.
ಕೊಡಗು ಜಿಲ್ಲೆಯಾದ್ಯಂತ ಪುನರ್ವಸು ಮಳೆಯ ಅಬ್ಬರ ಜೋರಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಧಾರಾಕಾವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 461 ಮಿ.ಮೀ ಮಳೆ ಜಾಸ್ತಿ ಸುರಿದಿದೆ. ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಧಾರಾಕಾರ ಮಳೆಗೆ ನದಿ, ತೊರೆ, ಹಳ್ಳಕೊಳ್ಳ, ಜಲಪಾತಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ.

2278.71 ಅಡಿಗಳಷ್ಟು ನೀರು ಸಂಗ್ರಹ
ಕೇರಳದಲ್ಲಿ ವರುಣ ಅಬ್ಬರಿಸಿದರೆ ಇದ್ದಕ್ಕಿದ್ದಂತೆಯೇ ಜಲಾಶಯಕ್ಕೆ ಒಳಹರಿವು ಇನ್ನಷ್ಟು ಹೆಚ್ಚಾಗಬಹುದು. ಸದ್ಯ ಜಲಾಶಯದ ಭದ್ರತೆಯ ದೃಷ್ಟಿಯಿಂದ ಸುಮಾರು ಹದಿನೈದು ಸಾವಿರ ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಪೈಕಿ ಐದು ಸಾವಿರ ಕ್ಯುಸೆಕ್ ನೀರನ್ನು ವಿದ್ಯುತ್ ಉತ್ಪಾದನಾ ಕೇಂದ್ರದ ಮೂಲಕ ನದಿಗೆ ಇನ್ನು ಹತ್ತು ಸಾವಿರ ಕ್ಯುಸೆಕ್ ನೀರನ್ನು ನದಿಗೆ ಕ್ರಸ್ಟ್ಗೇಟ್ ಮೂಲಕ ಬಿಡಲಾಗುತ್ತದೆ. ಸದ್ಯ 2284.00 ಅಡಿಗಳಷ್ಟು ಗರಿಷ್ಠ ನೀರಿನ ಸಂಗ್ರಹಣ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2278.71 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಕಬಿನಿ ನದಿ ಪಾತ್ರದ ಜನರಿಗೆ ಎಚ್ಚರಿಕೆ
"ಈ ನಡುವೆ ಕಬಿನಿ ಜಲಾಶಯದ ಒಳಹರಿವು ಹೆಚ್ಚಾಗುತ್ತಿದ್ದಂತೆಯೇ ಹೊರ ಹರಿವನ್ನು ಅನಿವಾರ್ಯವಾಗಿ ಹೆಚ್ಚಿಸಬೇಕಾಗಿರುವುದರಿಂದ ಕಬಿನಿ ನದಿ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ,'' ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತರ ಸಿ.ವಿ. ಸುರೇಶ್ ಬಾಬು ತಿಳಿಸಿದ್ದಾರೆ.

ಪ್ರವಾಹದ ಭಯ ರೈತರನ್ನು ಕಾಡುತ್ತಿದೆ
ಇಷ್ಟರಲ್ಲಿಯೇ ಜಲಾಶಯ ಭರ್ತಿಯಾಗಬಹುದೆಂದು ಖುಷಿಯಾಗಿದ್ದ ರೈತರು ಕೆಲವು ದಿನಗಳ ಹಿಂದೆ ಜಲಾಶಯಲಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ನೋಡಿ ಆತಂಕಗೊಂಡಿದ್ದರು. ಏಕೆಂದರೆ ನೀರಿನ ಮಟ್ಟ ಕಡಿಮೆಯಿತ್ತು. ಈಗ ಜಲಾಶಯದ ಒಳ ಹರಿವು ಹೆಚ್ಚಿರುವುದರಿಂದ ಖುಷಿಯಾಗಿದೆಯಾದರೂ ಪ್ರವಾಹದ ಭಯ ಈ ವ್ಯಾಪ್ತಿಯ ರೈತರನ್ನು ಕಾಡುತ್ತಿದೆ.

ಪರಿಸ್ಥಿತಿ ನಿರ್ಮಾಣವಾಗದಿದ್ದರೆ ಸಾಕು
ಕಳೆದ ಮೂರು ವರ್ಷಗಳಿಂದ ಜಲಾಶಯದಿಂದ ಸಹಸ್ರಾರು ಕ್ಯುಸೆಕ್ ನೀರನ್ನು ಹೊರ ಬಿಟ್ಟಿದ್ದರಿಂದ ತಗ್ಗು ಪ್ರದೇಶದಲ್ಲಿ ಕಪಿಲ ನದಿ ಉಕ್ಕಿ ಹರಿಯುತ್ತಾ ಪ್ರವಾಹ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದು, ಇದರಿಂದ ಕೃಷಿ ಭೂಮಿ ಜಲಾವೃತ ವಾಗುವುದರೊಂದಿಗೆ ಆಸ್ತಿ ಪಾಸ್ತಿಗೆ ನಷ್ಟವಾಗಿ ಇದರಿಂದ ಜನ ಸಂಕಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಈ ಬಾರಿ ಆಶಾದಾಯಕವಾಗಿ ಮುಂಗಾರು ಮುಂದುವರೆದು ಜಲಾಶಯ ಭರ್ತಿಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಿದ್ದರೆ ಈ ವ್ಯಾಪ್ತಿಯ ರೈತರು ಮತ್ತು ಜನರು ನೆಮ್ಮದಿಯುಸಿರು ಬಿಡಬಹುದೇನೋ?












Click it and Unblock the Notifications