ಕರಿಮೆಣಸಿಗೆ ಕೀಟದ ಕಾಟ, ಬೆಳೆಗಾರರಿಗೆ ಆತಂಕ
ಮಡಿಕೇರಿ, ಜನವರಿ 12 : ಕೊಡಗಿನ ಜನರ ಮುಖ್ಯ ಬೆಳೆ ಕಾಫಿ ಮತ್ತು ಕರಿಮೆಣಸು. ಮೂರ್ನಾಲ್ಕು ದಶಕಗಳ ಹಿಂದೆ ಏಲಕ್ಕಿ ಬೆಳೆಯೂ ಇಲ್ಲಿನ ಬೆಳೆಗಾರರನ್ನು ಕಾಪಾಡುತ್ತಿತ್ತು. ಆದರೆ, ವಾತಾವರಣದ ಏರುಪೇರು, ನೆಲಕಚ್ಚಿದ ಬೆಲೆಯಿಂದಾಗಿ ಏಲಕ್ಕಿ ಕೃಷಿಯನ್ನು ಬಿಟ್ಟು ಕಾಫಿ, ಕರಿಮೆಣಸನ್ನು ಇಲ್ಲಿನವರು ಬೆಳೆಯುವ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಫಿ ಮತ್ತು ಕರಿಮೆಣಸನ್ನು ವಿವಿಧ ರೋಗ, ಕೀಟಗಳು ಬಾಧಿಸುತ್ತಿದ್ದು ಇದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಳೆದ ಕೆಲವು ತಿಂಗಳ ಹಿಂದೆ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಶಂಖಹುಳಗಳು ಕಾಫಿಗಿಡದ ಎಲೆಗಳನ್ನೇ ತಿಂದು ಹಾಕುವ ಮೂಲಕ ನಾಶ ಮಾಡಿದ್ದವು.
ಕರ್ನಾಟಕದಲ್ಲಿ ಐದು ವರ್ಷದಲ್ಲಿ 3,515 ರೈತರ ಆತ್ಮಹತ್ಯೆ
ಕರಿಮೆಣಸಿನ ಬಗ್ಗೆ ಬೆಳೆಗಾರರಿಗೆ ಅಪಾರವಾದ ನಿರೀಕ್ಷೆಯಿತ್ತು. ಅದಕ್ಕೆ ಸೊರಗು ರೋಗ ತಗುಲಿದ್ದರೂ ಅದನ್ನು ನಿಬಾಯಿಸಿ ಬೆಳೆ ಬೆಳೆದರೂ ಇದೀಗ ಕೊಯ್ಲಿನ ಸಮಯದಲ್ಲಿ ಕೀಟಗಳ ಹಾವಳಿ ಆರಂಭವಾಗಿದೆ. ಬಲಿತಿರುವ ಕರಿಮೆಣಸಿನ ಗೊಂಚಲನ್ನೇ ತಿಂದು ಹಾಕುತ್ತಿರುವ ಕೀಟಗಳು ಬೆಳೆಗಾರರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಮಳೆಗಾಲದಲ್ಲಿ ಸೊರಗು ರೋಗ ಕಾಣಿಸಿಕೊಂಡಿದ್ದರೂ ಬಳ್ಳಿಗಳಲ್ಲಿ ಫಸಲು ಬಂದಿತ್ತು. ಈಗ ಕರಿಮೆಣಸನ್ನು ಕೀಟಗಳು ತಿಂದು ಹಾಕುತ್ತಿದ್ದು, ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ತುಮಕೂರು ರೈತನಿಗೆ ಭಾರಿ ಅದೃಷ್ಟ ತಂದು ಕೊಟ್ಟ ಅಪ್ಪ ನೆಟ್ಟ ಹಲಸಿನ ಗಿಡ
ಕೀಟಗಳ ಕಾಟದಿಂದ ಭಯಭೀತರಾಗಿರುವ ಬೆಳೆಗಾರರು ಹೀಗೆಯೇ ಮುಂದುವರೆದರೆ ಹೇಗಪ್ಪಾ? ಎಂದು ಚಿಂತಾಕ್ರಾಂತರಾಗಿದ್ದಾರೆ. ಇದೀಗ ಕೀಟದ ಹಾವಳಿ ತಡೆಗೆ ಕ್ರಿಮಿನಾಶಕಗಳನ್ನು ಸಿಂಪಡಿಸುವ ಸಾಹಸಕ್ಕೆ ಬೆಳೆಗಾರರು ಮುಂದಾಗಿದ್ದು, ಹೇಗಾದರೂ ಮಾಡಿ ಫಸಲನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.