ಕೊಡಗಿನ ಜನರೇ ಎಚ್ಚರ..! ಕರಿಮೆಣಸು ಕೊಯ್ಲಿನ ಭರದಲ್ಲಿ ಅಲ್ಯುಮಿನಿಯಂ ಏಣಿ ಬಳಸುವ ಮುನ್ನ ಜಾಗ್ರತೆ
ಮಡಿಕೇರಿ, ಫೆಬ್ರವರಿ 02: ಕೊಡಗಿನಲ್ಲೀಗ ಕಾಫಿ ಕೊಯ್ಲುನ ಭರಾಟೆ ಜೋರಾಗಿದೆ. ಕಾಫಿ ತೋಟಗಳಲ್ಲಿರುವ ಕಾರ್ಮಿಕರ ಕೊರತೆಯಿಂದ ಕೊಯ್ಲು ಮಾಡಲಾಗದ ಕಾರಣ ಕೆಲವೆಡೆ ಗಿಡಗಳಲ್ಲಿ ಹಣ್ಣು ಉದುರಲಾರಂಭಿಸಿದ್ದರೆ, ಮತ್ತೊಂದೆಡೆ ಹೆಮ್ಮರಗಳಲ್ಲಿ ಹಬ್ಬಿರುವ ಕರಿಮೆಣಸು ಕೂಡ ಕೊಯ್ಲಿಗೆ ಸಿದ್ಧವಾಗುತ್ತಿದೆ. ಹೀಗಾಗಿ ಎಲ್ಲವೂ ಜತೆ ಜತೆಯಲ್ಲಿ ನಡೆಯುತ್ತಿರುವುದರಿಂದ ಇಡೀ ಕೊಡಗು ಕೆಲಸದ ಒತ್ತಡದಲ್ಲಿರುವಂತೆ ಕಾಣಿಸುತ್ತಿದೆ.
ಕಾಫಿ ಕೊಯ್ಲು ಯಾರು ಬೇಕಾದರೂ ಮಾಡಬಹುದಾಗಿದೆ. ಕಾರಣ ಗಿಡಗಳು ನಾಲ್ಕೈದು ಅಡಿಯಷ್ಟು ಎತ್ತರದಲ್ಲಿರುವುದರಿಂದ ನಿಂತುಕೊಂಡೇ ಕೊಯ್ಲು ಮಾಡಬಹುದಾಗಿದೆ. ಆದರೆ ಕರಿಮೆಣಸು ಹಾಗಿಲ್ಲ. ಅದನ್ನು ಕೊಯ್ಲು ಮಾಡಬೇಕಾದರೆ ಮರವನ್ನು ಏಣಿಯ ಸಹಾಯದಿಂದ ಹತ್ತಬೇಕಾಗುತ್ತದೆ. ಈಗೀಗ ಈ ಏಣಿಯೇ ಬೆಳೆಗಾರರಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಹಿಂದೆ ಕರಿಮೆಣಸು ಕೊಯ್ಲು ಮಾಡಲು ಬಿದಿರು ಏಣಿಗಳನ್ನು ಬಳಸುತ್ತಿದ್ದರು. ಈ ವೇಳೆ ಬೇರೇನು ಅವಘಡಗಳು ಸಂಭವಿಸುತ್ತಿರಲಿಲ್ಲವಾದರೂ ಕೆಲವೊಮ್ಮೆ ಏಣಿಯಿಂದ ಬಿದ್ದು ಅವಘಡಗಳು ಸಂಭವಿಸುತ್ತಿದ್ದವು.

ಯಾವಾಗ ಕೊಡಗಿನಲ್ಲಿ ಬಿದಿರು ನಾಶವಾಗಿ ಬಿದಿರು ಏಣಿಗೆ ಬೇಡಿಕೆಗಳು ಹೆಚ್ಚಾದವೋ ಆಗ ಕಾರ್ಖಾನೆಗಳು ಆಲ್ಯುಮಿನಿಯಂ ಏಣಿಯನ್ನು ತಯಾರಿಸಲು ಆರಂಭಿಸಿದವು. ಅದು ಬೆಳೆಗಾರರಿಗೂ ಇಷ್ಟವಾಗಿತ್ತು. ಏಕೆಂದರೆ ಹಗುರವಾಗಿರುವ ಏಣಿಗಳನ್ನು ಒಂದೆಡೆಯಿಂದ ಮತ್ತೊಂಡೆಗೆ ಕೊಂಡೊಯ್ಯಲು ಅನುಕೂಲ. ಅಲ್ಲದೆ ಹೆಚ್ಚು ಕಾಲ ಬಾಳಿಕೆಯೂ ಬರುವುದರಿಂದ ಈ ಏಣಿಗಳು ಕಡಿಮೆ ಅವಧಿಯಲ್ಲಿ ಹೆಚ್ಚಿನವರ ಗಮನಸೆಳೆದಿದ್ದು, ಹೆಚ್ಚಿನ ಬೆಳೆಗಾರರು ಖರೀದಿಸಿ ಮನೆಯಲ್ಲಿಟ್ಟುಕೊಂಡಿದ್ದಾರೆ.
ಸಾವಿಗೆ ಕಾರಣವಾದ ಅಲ್ಯುಮಿನಿಯಂ ಏಣಿ
ಇದೇ ಅಲ್ಯುಮಿನಿಯಂ ಏಣಿ ಎಷ್ಟು ಉಪಯುಕ್ತವೋ ಎಚ್ಚರ ತಪ್ಪಿದರೆ ಅಷ್ಟೇ ಅಪಾಯಕಾರಿ ಎಂಬುದು ಈಗಾಗಲೇ ಬಹಳಷ್ಟು ಪ್ರಕರಣಗಳಲ್ಲಿ ಸಾಬೀತಾಗಿದೆ. ಇದಕ್ಕೆ ಕಾರಣ ಏಣಿಯಲ್ಲ ನಮ್ಮ ಅಜಾಗರೂಕತೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಈ ವಿಚಾರದಲ್ಲಿ ನಾವು ವಹಿಸುವ ನಿರ್ಲಕ್ಷ್ಯದಿಂದಲೇ ಕೊಡಗಿನಲ್ಲಿ ಸುಮಾರು ನಲುವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷವೂ ಕರಿಮೆಣಸು ಕೊಯ್ಲು ವೇಳೆ ಅಥವಾ ಮರಕಪಾತ್ ಸಂದರ್ಭ ಬೆಳೆಗಾರರು ಅಥವಾ ಕಾರ್ಮಿಕರು ಬಲಿಯಾಗುತ್ತಿದ್ದಾರೆ.
ಇದಕ್ಕೆ ಕಾರಣಗಳೇನು ಎನ್ನುವುದನ್ನು ಹುಡುಕುತ್ತಾ ಹೋದರೆ ಬಹಳಷ್ಟು ಕಾಫಿ ತೋಟದ ನಡುವೆ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಅವುಗಳನ್ನು ಗಮನಿಸದೆ ಏಣಿಗಳನ್ನು ಕೆಲಸದ ನಿಮಿತ್ತ ಒಂದೆಡೆಯಿಂದ ಮತ್ತೊಂದೆಡೆಗೆ ಕೊಂಡೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು ನೋವುಗಳು ಸಂಭವಿಸುತ್ತಿವೆ. ಒಂದು ಘಟನೆ ನಡೆದ ಮೇಲೂ ತಮ್ಮ ತೋಟದಲ್ಲಿ ಕಾರ್ಮಿಕರ ಮೂಲಕ ಕೆಲಸ ಮಾಡಿಸುವಾಗ ಮಾಲೀಕರು ಮುಂಜಾಗ್ರತಾ ಕ್ರಮ ವಹಿಸದ ಕಾರಣದಿಂದಲೇ ಘಟನೆಗಳು ನಡೆಯುತ್ತಲೇ ಇವೆ.

ವಿದ್ಯುತ್ ತಂತಿಯತ್ತ ಗಮನ ಹರಿಸಿ
ಹಲವು ವರ್ಷಗಳ ಹಿಂದೆಯೇ ಕೊಡಗಿನಲ್ಲಿ ಅಧಿಕಾರಿಗಳು ಅಲ್ಯುಮಿನಿಯಂ ಏಣಿಗಳ ಬದಲಿಗೆ ಫೈಬರ್ ಅಥವಾ ಬಿದಿರು ಏಣಿಗಳನ್ನು ಬಳಸುವಂತೆ ಸೂಚಿಸಿದ್ದರು. ಆದರೆ ಈಗಾಗಲೇ ಆಲ್ಯುಮಿನಿಯಂದ ಏಣಿಯನ್ನು ಖರೀದಿಸಿಟ್ಟುಕೊಂಡಿರುವ ತೋಟದ ಮಾಲೀಕರು ಕರಿಮೆಣಸು ಕೊಯ್ಲಿಗೆ, ಮರದ ಕೊಂಬೆಗಳನ್ನು ಕಡಿಯುವ ಸಲುವಾಗಿ ಮರ ಏರಲು ಆ ಏಣಿಗಳನ್ನೇ ಬಳಸುತ್ತಿದ್ದಾರೆ. ಈ ವೇಳೆ ದೂರದಿಂದ ಬರುವ ಕಾರ್ಮಿಕರಿಗೆ ಅಲ್ಯುಮಿನಿಯಂ ಏಣಿಗಳ ಬಗ್ಗೆಯಾಗಲೀ, ತೋಟದ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿಯ ಬಗ್ಗೆ ಮಾಹಿತಿ ನೀಡುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಕೆಲವೊಮ್ಮೆ ಕಾಫಿ ಗಿಡಗಳ ನಡುವೆ ತೆರಳುವಾಗ ವಿದ್ಯುತ್ ತಂತಿ ಹಾದು ಹೋಗಿರುವುದು ಗಮನಕ್ಕೆ ಬಾರದೆ ಆಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ತಗುಲಿ ಸಾವು ನೋವು ಸಂಭವಿಸುತ್ತಲೇ ಇದೆ.
ಇಂತಹ ಘಟನೆ ನಡೆಯುವುದನ್ನು ತಪ್ಪಿಸಬೇಕಾದರೆ ತೋಟದ ಮಾಲೀಕರು ಕೆಲಸಗಾರರಿಗೆ ವಿದ್ಯುತ್ ತಂತಿ ಬಗ್ಗೆ ಮಾಹಿತಿ ನೀಡಬೇಕು, ಕೆಲಸಗಾರರು ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಬಿಟ್ಟು ಅಲ್ಯುಮಿನಿಯಂ ಏಣಿ ಬಳಸಿ ಕರಿಮೆಣಸು ಕೊಯ್ಲು, ಮರಕಪಾತ್ ಮಾಡುವಾಗ ತೋಟದ ನಡುವೆ ವಿದ್ಯುತ್ ತಂತಿ ಹಾದು ಹೋಗಿದೆಯಾ ಎಂದು ನೋಡಿಕೊಳ್ಳುವ ಮೂಲಕ ಜಾಗ್ರತೆ ವಹಿಸಬೇಕು, ತಾವು ಮರಹತ್ತಲು ತಂದ ಅಲ್ಯುಮಿನಿಯಂ ಏಣಿಯನ್ನು ತಮ್ಮ ಪಾಡಿಗೆ ಎತ್ತಿಕೊಂಡು ಹೋಗುವ ಮುನ್ನ ಸುತ್ತಲೂ ಗಮನಿಸಿ ವಿದ್ಯುತ್ ತಂತಿಗೆ ತಾಕದಂತೆ ಎಚ್ಚರ ವಹಿಸಬೇಕಾಗಿದೆ.

ವಿದ್ಯುತ್ ನಿರೋಧಕ ಏಣಿಗೆ ಆದ್ಯತೆ ನೀಡಿ
ಇನ್ನು ಅಲ್ಯೂಮಿನಿಯಂ ಏಣಿ ಲೋಹವಾಗಿರುವುದರಿಂದ ವಿದ್ಯುತ್ ವಾಹಕಗಳಾಗಿದ್ದು, ಎತ್ತರ ಸಾಮಾನ್ಯವಾಗಿ ಇಪ್ಪತ್ತು ಅಡಿಗಿಂತಲೂ ಹೆಚ್ಚಿದ್ದು, ಕೆಲವೊಮ್ಮೆ ತೋಟದ ನಡುವೆ ಕೊಂಡೊಯ್ಯುವಾಗ ಗಮನಕ್ಕೆ ಬಾರದೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ದುರಂತಕ್ಕೆ ದಾರಿ ಮಾಡಿಕೊಡುತ್ತಿದೆ. ಈ ಬಾರಿಯಾದರೂ ಕಾಫಿ ಬೆಳೆಗಾರರು ಅಲ್ಯುಮಿನಿಯಂ ಏಣಿಗಳನ್ನು ಬಳಸುವಾಗ ಎಚ್ಚರ ವಹಿಸಲಿ. ಸಾಧ್ಯವಾದರೆ ಫೈಬರ್, ಬಿದಿರು ಇತ್ಯಾದಿಗಳಿಂದ ನಿರ್ಮಿತವಾದ ವಿದ್ಯುತ್ ನಿರೋಧಕ ಏಣಿಗಳ ಬಳಕೆಗೆ ಆದ್ಯತೆ ನೀಡಲಿ. ಬೆಳೆಗಾರರು ತಮ್ಮ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳ ಬಗ್ಗೆ ಮಾಹಿತಿ ನೀಡಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications