ಕೊಡಗಿನಲ್ಲಿ ಮತ್ತೆ ಹುಯ್ಯುತ್ತಿದೆ ಭಾರೀ ಮಳೆ, ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ
ಮಡಿಕೇರಿ, ಜೂನ್ 27: ಕಳೆದ ಕೆಲವು ದಿನಗಳಿಂದ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ್ದ ಮಳೆ ಮತ್ತೆ ಜಿಲ್ಲೆಯಲ್ಲಿ ಚೇತರಿಸಿಕೊಂಡಿದೆ.
ಆಗಾಗ್ಗೆ ಬರುವ ಮಳೆ, ಚಳಿಗಾಳಿ, ಮೋಡ ಕವಿದ ವಾತಾವರಣ ಎಲ್ಲವೂ ಕೊಡಗನ್ನಾವರಿಸಿದ್ದು, ಆರಿದ್ರಾ ಮಳೆ ಅಬ್ಬರಿಸಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಈಗಾಗಲೇ ಮಳೆ ಚೆನ್ನಾಗಿ ಬಿದ್ದಿರುವ ಕಾರಣ ಭತ್ತದ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನವರು ನಿರತರಾಗಿದ್ದರೆ, ಕಾಫಿ ತೋಟ ಇನ್ನಿತರೆ ಕೆಲಸ ಕಾರ್ಯಗಳು ಸಮಾರೋಪಾದಿಯಲ್ಲಿ ಸಾಗುತ್ತಿವೆ.
ಚಿತ್ರಸುದ್ದಿ: ಕಾರ್ಮೋಡಗಳ ಕತ್ತಲಲ್ಲಿ ಮಕ್ಕಳ ಚೆಂಡಿನಾಟ!
ಮಳೆ ಮತ್ತೆ ಬಿರುಸುಗೊಳ್ಳುವ ಸಾಧ್ಯತೆಯಿರುವುದರಿಂದ ಜಿಲ್ಲಾಡಳಿತ ಕೂಡ ಮಳೆಹಾನಿ ತಡೆಗಟ್ಟುವ ಮತ್ತು ಪ್ರವಾಹದ ಸಂದರ್ಭ ನಿರ್ವಹಿಸಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಿದ್ಧತೆ ಕೈಗೊಂಡಿದೆ.
ಮಳೆಯ ಸಂದರ್ಭ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಜಿಲ್ಲಾಡಳಿತ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದೆಯಲ್ಲದೆ, ತುರ್ತು ಸಂದರ್ಭಗಳಲ್ಲಿ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಜತೆಗೆ ವಾಹನಗಳನ್ನು ಮರದ ಕೆಳಗೆ ನಿಲ್ಲಿಸಬಾರದು, ಮಳೆಗಾಲದಲ್ಲಿ ಮರದ ಕೆಳಗೆ ನಿಲ್ಲಬಾರದು, ನದಿ, ಹೊಳೆಗಳಲ್ಲಿ ನೀರಿಗೆ ಇಳಿಯಬಾರದು, ಜಲಪಾತಗಳ ತುಂಬಾ ಹತ್ತಿರಕ್ಕೆ ಹೋಗದಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಇನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಳ್ಳ, ಗುಂಡಿಗಳು ಕಣ್ಣಿಗೆ ಕಾಣದೇ ಇರುವುದರಿಂದ ಅಂತಹ ಪ್ರದೇಶಗಳಲ್ಲಿ ವಾಹನ ಚಲಾಯಿಸಬೇಡಿ. ಹಾಗೆಯೇ ಮಳೆಯ ಸಂದರ್ಭದಲ್ಲಿ ರಸ್ತೆಗಳಲ್ಲಿ ಜಾರುವ ಅಪಾಯವಿದ್ದು ದ್ವಿ-ಚಕ್ರ ವಾಹನಗಳನ್ನು ಬಳಸದಿರಿ, ಪ್ರವಾಹದ ಸಂದರ್ಭಗಳಲ್ಲಿ ವಾಹನಗಳಲ್ಲಿ ಸಿಕ್ಕಿಹಾಕಿಕೊಂಡರೆ, ವಾಹನವನ್ನು ತಕ್ಷಣವೇ ತ್ಯಜಿಸಿ ಎತ್ತರದ ಪ್ರದೇಶಕ್ಕೆ ತೆರಳಿ, ಪ್ರವಾಹ ಸಂದರ್ಭದಲ್ಲಿ ಮನೆಯ ವಿದ್ಯುತ್ ಸಂಬಂಧಪಟ್ಟ ವಯರಿಂಗ್ನ್ನು ಪರಿಶೀಲಿಸಿ ಮೈನ್-ಸ್ವಿಚ್ನ್ನು ಆಫ್ ಮಾಡಿ, ಪ್ರವಾಹ ಸಂದರ್ಭದಲ್ಲಿ ಟಾರ್ಚ್, ಪ್ಲಾಶ್ ಲೈಟ್ಗಳನ್ನು ಜೊತೆಯಲ್ಲಿಟ್ಟುಕೊಳ್ಳುವಂತೆಯೂ ಸಲಹೆ ನೀಡಿದೆ.
ಕರಾವಳಿಯಲ್ಲಿ ಬಿಡದ ಮಳೆ, ಬೆಂಗಳೂರಲ್ಲಿ ತುಂತುರು ಸಾಧ್ಯತೆ
ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿ ಕಚೇರಿ-08272-221077, ಜಿಲ್ಲಾ ಅಗ್ನಿಶಾಮಕ ಕಚೇರಿ-101, 08272-229299, ತಾಲೂಕು ಕಚೇರಿ ಮಡಿಕೇರಿ-08272-228396, ನಗರಸಭೆ ಮಡಿಕೇರಿ 08272-220111, ತಾಲೂಕು ಕಚೇರಿ ಸೋಮವಾರಪೇಟೆ-08276-282045, ತಾಲೂಕು ಕಚೇರಿ ವಿರಾಜಪೇಟೆ-08274-256328 ಸಂಪರ್ಕಿಸುವಂತೆ ಕೋರಲಾಗಿದೆ.
ಇನ್ನು ಮಳೆಗಾಲದಲ್ಲಿ ಸೋಂಕು ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಸುರಕ್ಷಿತ ಮತ್ತು ಶುದ್ಧೀಕರಿಸಿದ (ಫಿಲ್ಟರ್) ನೀರು ಬಳಸಬೇಕು. ಪ್ರವಾಹದ ಸಂದರ್ಭದಲ್ಲಿ ಆಶ್ರಯ ನೀಡುವ ಸಲುವಾಗಿ ಎತ್ತರದ ಪ್ರದೇಶಗಳನ್ನು ಗುರುತಿಸಿ, ಭಾರೀ ಮಳೆಯ ಸಂದರ್ಭದಲ್ಲಿ ದೀರ್ಘಕಾಲದ ಜಲಾವೃತ ಪ್ರದೇಶಗಳಿಂದ ದೂರವಿರಬೇಕು. ಸಂಬಂಧ ಪಟ್ಟ ಪ್ರಾಧಿಕಾರಗಳು ನೀಡುವ ಎಚ್ಚರಿಕೆ ಮಾಹಿತಿ ಗಮನಿಸಿ. ವಿಶೇಷವಾಗಿ ಶಾಲೆಗಳು ರಜೆಯ ಸಲುವಾಗಿ ಮುಚ್ಚಿದ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಂದ ಈ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಮಳೆ ಬುಧವಾರ ಬೆಳಗ್ಗಿನವರೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 44.66 ಮಿ.ಮೀ. ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ 79.75 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 31.32 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 22.9 ಮಿ.ಮೀ. ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗಿನ 1243 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 628 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 615 ಮಿ.ಮೀ ಹೆಚ್ಚಿನ ಮಳೆಯಾಗಿರುವುದು ಕಂಡು ಬಂದಿದೆ.
ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಕೆಲವು ಭಾಗದಲ್ಲಿ ಸುರಿಯುತ್ತಿರುವ ಮಳೆ ನೀರು ಹರಿದು ಬಂದು ಹಾರಂಗಿ ಜಲಾಶಯವನ್ನು ಸೇರುತ್ತಿದ್ದು, ಸದ್ಯಕ್ಕೆ 1824 ಕ್ಯೂಸೆಕ್ ಒಳಹರಿವಿದೆ. ಗರಿಷ್ಠ 2,859 ಅಡಿ ಸಾಮಥ್ರ್ಯದ ಜಲಾಶಯದಲ್ಲಿ ಸದ್ಯ 2839.98 ಅಡಿಯಷ್ಟು ನೀರಿದೆ. ಜಲಾಶಯ ಭರ್ತಿಯಾಗಲು ಇನ್ನು ಕೇವಲ 20 ಅಡಿಯಷ್ಟು ಮಾತ್ರ ಬಾಕಿಯಿದೆ.