ಕೊಡಗಿನ ಆನೆಕಾಡು ಅರಣ್ಯವನ್ನು ದಹಿಸಿಹಾಕಿದ ಕಾಡ್ಗಿಚ್ಚು
ಕೊಡಗು, ಮಾರ್ಚ್ 04 : ಕೊಡಗು ಜಿಲ್ಲೆಯ ಆನೆಕಾಡು ಅರಣ್ಯದಲ್ಲಿ ಕಾಡ್ಗಿಚ್ಚಿನಿಂದಾಗಿ ಸುಮಾರು 70ಕ್ಕೂ ಹೆಚ್ಚು ಎಕರೆ ಅರಣ್ಯ ನಾಶವಾಗಿದ್ದು, ಅರಣ್ಯ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಕಾಡ್ಗಿಚ್ಚಿನಿಂದಾಗಿ ಆನೆಕಾಡು ಅರಣ್ಯದಲ್ಲಿ ಈಗಾಗಲೇ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ. ಬೆಂಕಿಯ ಕೆನ್ನಾಲಗೆಗೆ ಹಲವಾರು ಅಪರೂಪದ ಪ್ರಾಣಿಗಳು ಕೂಡ ಸತ್ತಿರುವ ಸಂಭವನೀಯತೆಯಿದೆ. 60ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. [ಕಾರಣ ತಿಳಿಯದ ಕಾಡಿನ ಬೆಂಕಿಗೆ ಕಣ್ಮುಚ್ಚುತ್ತಿವೆ ಪ್ರಾಣಿ-ಪಕ್ಷಿ]
ಬಿಸಿಲಿನಿಂದಾಗಿ ಕಾಡ್ಗಿಚ್ಚು ನಂದಿಸುವುದು ದೊಡ್ಡ ಪ್ರಯಾಸದ ಕೆಲಸವಾಗಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಯಾರೋ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. [10 ದಿನದಲ್ಲಿ 4 ಕಡೆ ಕಾಳ್ಗಿಚ್ಚು, ನೂರಾರು ಎಕರೆ ಭಸ್ಮ]
ಈ ಭೀಕರ ಬೇಸಿಗೆಯಲ್ಲಿ ಕರ್ನಾಟಕದ ಅರಣ್ಯ ಸಂಪತ್ತು ಕಾಡಿನ ಬೆಂಕಿಯಿಂದ ಸಾಕಷ್ಟು ನಷ್ಟವಾಗಿದೆ. ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಶ್ರೀರಂಗಪಟ್ಟಣ, ಚಿಕ್ಕಮಗಳೂರಿನಲ್ಲಿ ಕಾಡ್ಗಿಚ್ಚಿನಿಂದ ಅರಣ್ಯ ಸರ್ವನಾಶವಾಗಿದೆ.
ಸಾಲದೆಂಬಂತೆ ಹೆಗ್ಗಡೆದೇವನ ಕೋಟೆ ಅರಣ್ಯ ಪ್ರದೇಶದಲ್ಲಿ ಬರುವ ನಾಗರಹೊಳೆ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚಿನಿಂದಾಗಿ ಹೊರಬರುತ್ತಿರುವ ಜಿಂಕೆಗಳನ್ನು ವಿಷವುಣ್ಣಿಸಿ ಕೆಲ ದುರುಳರು ಹತ್ಯೆ ಮಾಡುತ್ತಿದ್ದಾರೆ ಎಂಬ ಆಘಾತಕರ ಸಂಗತಿ ಕೂಡ ಬೆಳಕಿಗೆ ಬಂದಿದೆ.