ಮಾಂದಲ್ ಪಟ್ಟಿಗೆ ಪ್ರವೇಶ ನಿಷೇಧ: ಜೀಪ್ ಚಾಲಕರ ಆಕ್ರೋಶ
ಮಡಿಕೇರಿ, ಜುಲೈ 26: ಮಳೆಯಿಂದಾಗಿ ಮಡಿಕೇರಿಯ ಪ್ರವಾಸಿಗರ ಸ್ವರ್ಗವೆಂದೇ ಹೆಸರಾದ ಮಾಂದಲ್ ಪಟ್ಟಿ ಮಾರ್ಗದಲ್ಲಿ ಭೂಕುಸಿತವಾಗುತ್ತಿದ್ದು, ಆಗಸ್ಟ್ 31ರವರೆಗೆ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮಳೆಯಿಂದ ರಸ್ತೆ ಕುಸಿತದ ಮಾಹಿತಿ ಬಂದ ಮೇರೆಗೆ ಜಿಲ್ಲಾಡಳಿತ ತಾಂತ್ರಿಕ ಸಮಿತಿ ರಚಿಸಿ, ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಸೂಚಿಸಿತ್ತು. ಅದರಂತೆ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಮಾಂದಲ್ ಪಟ್ಟಿಗೆ ತೆರಳುವ ರಸ್ತೆಯ ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಅದನ್ನು ತೆರವುಗೊಳಿಸುತ್ತಿದ್ದರೂ ಮತ್ತೆ ಭೂಕುಸಿತವಾಗುತ್ತಿದೆ, ಮಾಂದಲ್ ಪಟ್ಟಿಗೆ ತೆರಳುವ ರಸ್ತೆಯು ಹಳ್ಳ-ದಿಣ್ಣೆಗಳಿಂದ ಕೂಡಿದ್ದು, ರಸ್ತೆಯ ಮತ್ತೊಂದು ಬದಿ ಆಳ ಮತ್ತು ತೋಟಗಳು ಇರುವುದರಿಂದ ಹೆಚ್ಚಿನ ಮಳೆ ಮುಂದುವರೆದರೆ ರಸ್ತೆ ಬದಿಯ ಗುಡ್ಡ ಕುಸಿಯುವ ಸಾಧ್ಯತೆಯಿದೆ. ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಆಗಸ್ಟ್ ಅಂತ್ಯದವರೆಗೆ ಪ್ರವಾಸಿಗರ ನಿಷೇಧ ಮಾಡುವುದು ಸೂಕ್ತ ಎಂದು ತಾಂತ್ರಿಕ ಸಮಿತಿ ವರದಿ ಸಲ್ಲಿಸಿತ್ತು.
ಹೀಗಾಗಿ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೆಟ್ಟಗೇರಿ- ದೇವಸ್ತೂರು- ಕಾಲೂರು- ಮಾಂದಲ್ ಪಟ್ಟಿ ರಸ್ತೆ ಹಾಗೂ ದೇವಸ್ತೂರು- ಮಾಂದಲ್ ಪಟ್ಟಿ ಈ ಎರಡೂ ರಸ್ತೆಗಳ ಮೂಲಕ ಮಾಂದಲ್ ಪಟ್ಟಿ ಪ್ರವಾಸಿ ತಾಣಕ್ಕೆ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಜೀಪ್ ಚಾಲಕರ ಆಕ್ರೋಶ: ಮಾಂದಲ್ ಪಟ್ಟಿಗೆ ಪ್ರತಿನಿತ್ಯ ಹಲವು ಬಾಡಿಗೆ ಜೀಪುಗಳು ಸಂಚರಿಸುತ್ತಿದ್ದವು. ತಿಂಗಳ ಮಟ್ಟಿಗೆ ಸಂಚಾರ ಬಂದ್ ಆಗಿದ್ದು, ವ್ಯಾಪಾರಕ್ಕೆ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತದ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಜೀಪ್ ಚಾಲಕರು ಒತ್ತಾಯಿಸಿದರು.
ಮಾಂದಲ್ ಪಟ್ಟಿಗೆ ತೆರಳುವ ಹೆಬ್ಬೆಟ್ಟಗೇರಿ- ದೇವಸ್ತೂರು ರಸ್ತೆಯ ಭಾಗಗಳಲ್ಲಿ ಸಣ್ಣ ಭೂಕುಸಿತವಾಗಿದೆ. ಸುರಕ್ಷತೆ ಹೆಸರಿನಲ್ಲಿ ತಿಂಗಳವರೆಗೆ ಪ್ರವಾಸಿಗರ ನಿಷೇಧ ಮಾಡುವ ಕ್ರಮ ಸೂಕ್ತವಲ್ಲ. ಬಾಡಿಗೆ ಜೀಪು ಚಾಲನೆಯನ್ನೇ ಅವಲಂಬಿಸಿರುವ 200ಕ್ಕೂ ಅಧಿಕ ಜೀಪು ಮಾಲೀಕರು ಹಾಗೂ ಚಾಲಕರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಗಳು ಸುರಕ್ಷಿತವಾಗಿವೆ. ನಿಷೇಧ ಹಿಂಪಡೆದು ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಅವಕಾಶ ಕಲ್ಪಿಸಬೇಕು ಎಂದು ಜೀಪು ಚಾಲಕರು ಮಾಂದಲ್ ಪಟ್ಟಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.












Click it and Unblock the Notifications