ಒಂದು ವರ್ಷದ ಬಳಿಕ ದುಬಾರೆ ಸಾಕಾನೆ ಶಿಬಿರಕ್ಕೆ ಬಂದ ಕುಶ!
ಮಡಿಕೇರಿ, ಮಾರ್ಚ್ 31; ಕಳೆದ ಒಂದು ವರ್ಷದ ಹಿಂದೆ ದುಬಾರೆ ಸಾಕಾನೆ ತರಬೇತಿ ಶಿಬಿರದಿಂದ ಚೈನು ತುಂಡರಿಸಿಕೊಂಡು ತಪ್ಪಿಸಿಕೊಂಡು ಹೋಗಿದ್ದ 'ಕುಶ' ಆನೆ ಇದೀಗ ಮಂಗಳವಾರ ಶಿಬಿರಕ್ಕೆ ಮರಳಿ ಬಂದಿದ್ದಾನೆ.
ಕಾಣೆಯಾದ ದಿನದಿಂದ 'ಕುಶ' ಆನೆಯ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಯುತಿತ್ತು. ಆದರೆ, ಆನೆ ಅರಣ್ಯ ಇಲಾಖೆ ಕಣ್ಣಿಗೆ ಬಿದ್ದರು ಸೆರೆಹಿಡಿಯಲಾಗುತ್ತಿರಲಿಲ್ಲ. ಕಾವೇರಿ ನದಿಯ ತಣ್ಣನೆ ಸ್ನಾನ, ಬಿಸಿ ಬಿಸಿ ಹುರುಳಿ ಸಾಂಬಾರ್ ಮುದ್ದೆಯೂಟ ನಂತರ ದುಬಾರೆ ಸಾಕಾನೆ ಶಿಬಿರದ ಆನೆಗಳನ್ನು ಮೇವಿಗಾಗಿ ಕಾಡಿಗಟ್ಟುವುದು ಸಾಮಾನ್ಯ.
ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ
ಹೀಗೆ ಅರಣ್ಯದೊಳಗೆ ಹೋಗುತ್ತಿದ್ದ ಶಿಬಿರದ ಸಾಕಾನೆ 'ಕುಶ'ನಿಗೆ ಕಾಡಿನ ಹೆಣ್ಣಾನೆಗಳ ಜೊತೆ ಗೆಳೆತನ ಶುರುವಾಯಿತು. ಇದಲ್ಲದೆ ಆನೆಗಳೂ ಬೆದೆಗೆ ಬಂದಾಗ ಕಾಡಿನೊಳಗಿನ ಆನೆಗಳ ಜತೆ ಸೇರುವುದು ಸಹಜವಾಗಿದ್ದು, ಹತ್ತಾರು ದಿನಗಳು ಕಳೆದ ನಂತರ ಶಿಬಿರಕ್ಕೆ ಹಿಂತಿರುಗುವು ವಾಡಿಕೆ.
ಹೆದ್ದಾರಿಯಲ್ಲಿ 'ದರೋಡೆ' ಮಾಡಿದ ಆನೆ: ವೈರಲ್ ವಿಡಿಯೋ
ಆದರೆ, 'ಕುಶ' ತಿಂಗಳುಗಟ್ಟಲೆ ಕಳೆದರೂ ಶಿಬಿರಕ್ಕೆ ಹಿಂತಿರುಗಲೇ ಇಲ್ಲ. 2018ರಲ್ಲಿ ಚೆಟ್ಟಳ್ಳಿ ಕಂಡಕೆರೆ ವ್ಯಾಪ್ತಿಯಲ್ಲಿ ಈ ಆನೆ ಜನರಿಗೆ ಕಿರುಕುಳ ನೀಡುತ್ತಿದ್ದದ್ದನ್ನು ತಪ್ಪಿಸುವ ಸಲುವಾಗಿ ಅನುಮತಿ ಪಡೆದು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಬಳಿಕ ದುಬಾರೆ ಆನೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿತ್ತು.
ಹಾಸನದಲ್ಲಿ ಪುಂಡ ಗಂಡಾನೆಗೆ ರೇಡಿಯೋ ಕಾಲರ್
2019ರ ಸೆಪ್ಟೆಂಬರ್ ತಿಂಗಳಲ್ಲಿ ಕುಶ ಶಿಬಿರದಿಂದ ಚೈನು ಮತ್ತು ಬೇಡಿಯನ್ನು ತುಂಡರಿಸಿ ತಪ್ಪಿಸಿಕೊಂಡಿತ್ತು. ಮದವೇರಿದ ಪರಿಣಾಮ ಕಾಲಿಗೆ ಕಟ್ಟಲಾಗಿದ್ದ ಚೈನ್ಅನ್ನು ಕೂಡ ಕಿತ್ತು ತಪ್ಪಿಸಿಕೊಂಡು ಸುಮಾರು 17 ಆನೆಗಳನ್ನೊಳಗೊಂಡ ಕಾಡಾನೆ ಗುಂಪೊಂದನ್ನು ಸೇರಿಕೊಂಡಿತ್ತು.
ಕಾಡಾನೆ ಹಿಂಡು ಸೇರಿದ್ದ 'ಕುಶ'ನನ್ನು ಇಲಾಖೆಯವರು ಸೆರೆಹಿಡಿಯಲೆಂದು ಸಮೀಪ ಹೋದರೆ, ಓಡಿ ಹೋಗುತಿತ್ತು. ಸುಮಾರು 1 ಕಿ. ಮೀ. ದೂರದಲ್ಲಿಯೇ ಕಾರ್ಯಾಚರಣೆ ನಡೆಸುವ ತಂಡದವರ ವಾಸನೆ, ಶಬ್ಧ ಕೇಳಿ ತಪ್ಪಿಸಿಕೊಂಡು ಕೈಗೆ ಸಿಗದೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನೇ ಆಟವಾಡಿಸುತಿತ್ತು.
'ಕುಶ' ಸೇರಿದ್ದ 17 ಆನೆಗಳ ಗುಂಪಿನಲ್ಲಿ ಮರಿಯಾನೆಗಳು ಕೂಡ ಇತ್ತು. ಗುಂಪಿನ ಹೆಣ್ಣಾನೆಗಳು ಆಕ್ರಮಣಕಾರಿ ಸ್ವಭಾವ ಇದ್ದ ಹಿನ್ನೆಲೆ ಕಾರ್ಯಾಚರಣೆ ತೊಡಕಾಗುತಿತ್ತು. 'ಕುಶ'ನ ಕತ್ತಲ್ಲಿ ಶಿಬಿರದಲ್ಲಿ ಹಾಕಲಾಗಿದ್ದ ಹಗ್ಗದಿಂದ ಗುರುತಿಸಲು ಸುಲಭವಾಗಿದ್ದು ಹಿಡಿಯಲೇಬೇಕೆಂದು ತಂಡ ರಚನೆ ಮಾಡಿ ಕೊನೆಗೂ ಶಿಬಿರಕ್ಕೆ ಸೇರಿಸುವಲ್ಲಿ ಅರಣ್ಯಾಧಿಕಾರಿಗಳು ಸಫಲರಾಗಿದ್ದಾರೆ.
ಆನೆ ಸೆರೆ ತಂಡದ ಜೊತೆಗೆ ದುಬಾರೆ ಸಾಕಾನೆ ಶಿಬಿರದ ಆನೆಗಳಾದ ಪ್ರಶಾಂತ, ಧನಂಜಯ, ಸುಗ್ರೀವ ಮತ್ತು ಲಕ್ಷ್ಮಣ ಇವುಗಳ ಸಹಕಾರ ವಿಶೇಷವಾಗಿತ್ತು. ಕಾಡಿನ ಇತರ ಆನೆಗಳೊಂದಿಗೆ ಸುತ್ತಾಡುತ್ತಿದ್ದ 'ಕುಶ'ನನ್ನು ಅವುಗಳ ತಂಡದಿಂದ ಮೊದಲಿಗೆ ಬಿಡಿಸಲಾಯಿತು.
Recommended Video
ಬಳಿಕ ಸೆರೆಹಿಡಿದು ಪ್ರಸ್ತುತ ಮೀನುಕೊಲ್ಲಿ ಅರಣ್ಯ ಶಾಖೆಯ ಸಿಬ್ಬಂದಿ ವಸತಿಗೃಹದ ಮೀಸಲು ಅರಣ್ಯದ ಬಳಿ ಕಟ್ಟಿ ಹಾಕಲಾಗಿದ್ದು ಇಂದು ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಗಿದೆ. 'ಕುಶ'ನಿಗೆ ಪುನಃ ತರಬೇತಿ ಮೂಲಕ ಪಳಗಿಸಲಾಗುತ್ತದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ತಿಳಿಸಿದ್ದಾರೆ.