ಒಡತಿ ಕಂಡೊಡನೆ ಕುಣಿದು ಕುಪ್ಪಳಿಸಿ ಪರಿಹಾರ ಕೇಂದ್ರಕ್ಕೆ ತೆರಳಿದ ನಾಯಿ
ಮಂಗಳೂರು, ಆಗಸ್ಟ್ 27: ಭೂ ಕುಸಿತ ಸೇರಿದಂತೆ ಜಲಸ್ಫೋಟ ಸಂಭವಿಸಿದ ಜೋಡುಪಾಲ, ಮದೆನಾಡು, ಮಣ್ಣಂಗೇರಿ ಬೆಟ್ಟ ಪ್ರದೇಶದಲ್ಲಿ ಮನೆ ಮಾಡಿಕೊಂಡಿದ್ದ ಸಂತ್ರಸ್ತರು ವಾರದ ಬಳಿಕ ಮತ್ತೆ ಮನೆ ಕಡೆ ತೆರಳಿ ಮನೆಯ ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ.
ರಕ್ಷಣಾ ತಂಡಗಳೊಂದಿಗೆ ಮನೆಗಳತ್ತ ತೆರಳುತ್ತಿರುವ ಸಂತ್ರಸ್ತರು ಮನೆಯಲ್ಲಿರುವ ಅಗತ್ಯ ವಸ್ತುಗಳನ್ನು ತಾವು ಆಶ್ರಯ ಪಡೆದ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೆ ಕೊಂಡೊಯ್ಯುತ್ತಿದ್ದಾರೆ.
ಜೋಡುಪಾಲದಲ್ಲಿ ಮನುಷ್ಯರ ಸುಳಿವಿಲ್ಲ, ಸಾಯೋ ಸ್ಥಿತೀಲಿ ಸಾಕುಪ್ರಾಣಿಗಳು
ಅಪಾಯಕಾರಿ ಪರಿಸ್ಥಿತಿಯಲ್ಲಿರುವ ಮನೆಗಳತ್ತ ಸಂತ್ರಸ್ತರನ್ನು ರಕ್ಷಣಾ ತಂಡಗಳು ಕರೆದುಕೊಂಡು ಹೋಗುವ ಕಾರ್ಯ ಮಾಡುತ್ತಿವೆ. ಹಾಗೆಯೇ ಬೆಟ್ಟ ಪ್ರದೇಶದಲ್ಲಿ ಆಹಾರ ಇಲ್ಲದೆ ಕಂಗಾಲಾಗಿದ್ದ ಸಾಕು ಪ್ರಾಣಿಗಳನ್ನು ಸುರಕ್ಷಿತವಾಗಿ ತರಲು ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್ ಗಣೇಶ್ ನೇತೃತ್ವದ ಯುವಕರ ತಂಡ ಕೈ ಜೋಡಿಸಿದೆ.
ಇನ್ನೊಂದೆಡೆ ಮಗಳು ಸಂಪರ್ಕಕ್ಕೆ ಸಿಗದೆ ಸುದ್ದಿಯಾಗಿದ್ದ ಎರಡನೇ ಮಣ್ಣಂಗೇರಿ ನಿವಾಸಿ 75 ವರ್ಷದ ಗಿರಿಜಾ ಎಂಬುವವರನ್ನು ಮತ್ತೆ ಮನೆ ಕಡೆ ರಕ್ಷಣಾ ತಂಡ ಕರೆದುಕೊಂಡು ಹೋಗಿತ್ತು. ಗುಡ್ಡದ ಮೇಲೆ ಬಿರುಕು ಬಿಟ್ಟ ಗಿರಿಜಾ ಅವರ ಮನೆ ನೆಲ ಸಮವಾಗುವ ಹಂತದಲ್ಲಿದೆ. ತನ್ನ ಕೈಯಾರೆ ನಿರ್ಮಿಸಿದ ಮನೆ ಕಂಡು ಆ ಹಿರಿಜೀವ ಮರುಗಿದೆ.
ಕೊಡಗಿನಲ್ಲಿ ಜನರ ಬಳಿಕ ಜಾನುವಾರುಗಳಿಗೆ ಹೆಲ್ಪ್ ಲೈನ್
ಮನೆಯಲ್ಲಿ ಉಳಿದಿದ್ದ ಅಗತ್ಯ ವಸ್ತುಗಳನ್ನು ಕೊಂಡು ಮನೆಯಿಂದ ಹೊರಡುವಷ್ಟರಲ್ಲಿ ಗಿರಿಜಾ ಅವರ ಧ್ವನಿ ಕೇಳಿ ಮನೆಯ ಸಾಕು ನಾಯಿ ಓಡಿ ಬಂದಿದೆ. ಅವರನ್ನು ಕಂಡು ಖುಷಿಯಿಂದ ಕುಪ್ಪಳಿಸಿದೆ. ನಂತರ ತನ್ನ ಸಾಕು ನಾಯಿಗೆ ಬನ್ ಹಾಕಿದ ಗಿರಿಜಾ ಅದನ್ನು ಸಂಪಾಜೆಯ ಪರಿಹಾರ ಕೇಂದ್ರಕ್ಕೆ ಕೊಂಡೊಯ್ದಿದ್ದಾರೆ. ಬದುಕಿದೆಯಾ ಬಡ ಜೀವವೇ.. ಎಂದು ನಾಯಿ ಗಿರಿಜಾ ಅವರೊಂದಿಗೆ ಸಂಪಾಜೆಯತ್ತ ಹೆಜ್ಜೆ ಹಾಕಿದೆ. ತನ್ನ ಒಡತಿಯನ್ನು ಕಂಡೊಡನೆ ಆ ಮೂಕ ಪ್ರಾಣಿಯ ಖುಷಿ ಅಕ್ಷರಗಳಲ್ಲಿ ವಿವರಿಸಲು ಸಾದ್ಯವಿಲ್ಲ.