ಕೊಡಗಿನಲ್ಲಿ ರೂ.35ಲಕ್ಷ ಕಪ್ಪು ಹಣ ವಶಕ್ಕೆ ಪಡೆದ ಪೊಲೀಸರು
ಕಪ್ಪುಹಣವನ್ನು ಸಕ್ರಮ ಮಾಡುವ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 35 ಲಕ್ಷದ 46 ಸಾವಿರ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಡಿಕೇರಿ, ಡಿಸೆಂಬರ್, 3: ಕಪ್ಪು ಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ನಿರತರಾಗಿದ್ದ ನಾಲ್ವರು ಆರೋಪಿಗಳನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿ 35 ಲಕ್ಷದ 46ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶನಿವಾರಸಂತೆ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್.ಅನಂತ್ಕುಮಾರ್, ಕುಶಾಲನಗರದ ಹ್ಯಾಮರ್ಸನ್ ಅಂತೋಣಿ, ಜಮೀಲ್ ಅಹಮ್ಮದ್, ಕೊಪ್ಪದ ಶ್ರೀಧರ್ ಬಂಧಿತರು.
ಇವರು ಸಮೀಪದ ಕೂರ್ಗ್ ಕೌಂಟಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿ ಕಪ್ಪು ಹಣವನ್ನು ಬಿಳಿ ಮಾಡುವ ಸಲುವಾಗಿ ಶುಕ್ರವಾರ ಗಿರಾಕಿಗಳಿಗಾಗಿ ಯತ್ನಿಸಿಚಲಾವಣೆಗೆ ತರಲು ಸಂಬಂಧಿಸಿದ ಗಿರಾಕಿಗಳಿಗಾಗಿ ರೂ.2,000 ಮುಖಬೆಲೆಯ ರೂ.34 ಲಕ್ಷ 40 ಸಾವಿರ, ರೂ.100 ಮುಖಬೆಲೆಯ ರೂ.96,000, ರೂ.50 ಮುಖಬೆಲೆಯ ರೂ.10 ಸಾವಿರ ರೂ.ಗಳನ್ನಿಟ್ಟುಕೊಂಡು ಕಾಯುತ್ತಿದ್ದರು.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರಿಗೆ ಬಂದ ಮಾಹಿತಿಯನ್ವಯ ಡಿವೈಎಸ್ಪಿ ಸಂಪತ್ ಕುಮಾರ್, ಕುಶಾಲನಗರ ವೃತ್ತ ನಿರೀಕ್ಷ ಕ್ಯಾತೆಗೌಡ, ಸುಂಟಿಕೊಪ್ಪ ಅರಕ್ಷಕ ಠಾಣಾಧಿಕಾರಿ ಅನೂಪ್ ಮಾದಪ್ಪ, ಸಿಬ್ಬಂದಿ ದಯಾನಂದ, ಪುಂಡರಿಕಾಕ್ಷ, ಮುಸ್ತಾಫ ಅವರನ್ನೊಳಗೊಂಡ ತಂಡ ಕೂರ್ಗ್ ಕೌಂಟಿ ರೆಸಾರ್ಟ್ ಮೇಲೆ ದಾಳಿ ನಡೆಸಿದೆ.
ಈ ಸಂದರ್ಭ ಯಾವುದೇ ದಾಖಲೆಗಳಿಲ್ಲದ ಕಪ್ಪು ಹಣವನ್ನಿಟ್ಟುಕೊಂಡು ಬಿಳಿ ಮಾಡಲು ಯತ್ನಿಸುತ್ತಿದ್ದ ಬಿ.ಎಸ್.ಅನಂತ್ಕುಮಾರ್, ಹ್ಯಾಮರ್ಸನ್ ಅಂತೋಣಿ, ಜಮೀಲ್ ಅಹಮ್ಮದ್, ಶ್ರೀಧರ್ ಎಂಬುವರು ಸಿಕ್ಕಿಬಿದ್ದಿದ್ದಾರೆ.
ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ.