ಅಕ್ಟೋಬರ್ 17ರಂದು ತಲ ಕಾವೇರಿಯಲ್ಲಿ ತೀರ್ಥೋದ್ಭವ
ಮಡಿಕೇರಿ, ಸೆಪ್ಟೆಂಬರ್ 18 : ಮಡಿಕೇರಿ ತಾಲೂಕಿನ ಭಾಗಮಂಡಲದ ತಲ ಕಾವೇರಿಯಲ್ಲಿ ಅಕ್ಟೋಬರ್ 17ರಂದು ತೀರ್ಥೋದ್ಭವ ನಡೆಯಲಿದೆ. ಭಾಗಮಂಡಲದ ಭಗಂಡೇಶ್ವರ ಜಾತ್ರೆಗೆ ಅಗತ್ಯ ಬಂದೋಬಸ್ತ್ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
'ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಯಲ್ಲಿ ಅ. 17ರ ಸೋಮವಾರ ಸಂಕ್ರಮಣ ಪುಣ್ಯಕಾಲ ಬೆಳಗ್ಗೆ 6.29ರ ತುಲಾ ಲಗ್ನದಲ್ಲಿ ತೀರ್ಥೋದ್ಭವ ನಡೆಯಲಿದೆ' ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಹೇಳಿದ್ದಾರೆ.[ತಾಂಬೂಲ ಪ್ರಶ್ನೆ : ಕಾವೇರಿ ಜಲಮೂಲಕ್ಕೆ ಕಾದಿದೆ ಆತಂಕ]
'ತೀರ್ಥೋದ್ಭವದ ದಿನ ಲಕ್ಷಾಂತರ ಭಕ್ತರು ತಲಕಾವೇರಿಗೆ ಆಗಮಿಸುತ್ತಾರೆ. ಆದ್ದರಿಂದ, ಭಕ್ತಾದಿಗಳಿಗೆ ತೊಂದರೆ ಆಗದಂತೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಭಗಂಡೇಶ್ವರ ಜಾತ್ರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.[ಮಳೆ ಕಡಿಮೆ ಆಗಿದ್ದಕ್ಕೆ ತಲಕಾವೇರಿಗಾದ ಅಪಚಾರ ಕಾರಣವೇ?]
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ, 'ತಲಕಾವೇರಿ ಸುತ್ತಮುತ್ತ ಪ್ರವಾಸಿಗರು ರಾತ್ರಿ ವೇಳೆಯೂ ಮದ್ಯ ಸೇವಿಸಿ ಪುಂಡಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯ ವಿಷಯ ಪ್ರಸ್ತಾಪಿಸಿದರು. ಇನ್ನು ಮುಂದೆ ಸ್ಥಳೀಯರನ್ನು ಹೊರತುಪಡಿಸಿ ಪ್ರವಾಸಿಗರಿಗೆ ಸಂಜೆ 6ರಿಂದ ಬೆಳಿಗ್ಗೆ 6ರ ತನಕ ತಲಕಾವೇರಿಗೆ ಪ್ರವೇಶ ನಿಷೇಧಿಸಲಾಗುವುದು' ಎಂದು ಸಚಿವರು ಹೇಳಿದರು.