ಕೊಡಗಿನಲ್ಲಿ ಆಶ್ಲೇಷ ಮಳೆ ಅಬ್ಬರಕ್ಕೆ ಭಾಗಮಂಡಲ ಜಲಾವೃತ

ಮಡಿಕೇರಿ, ಆಗಸ್ಟ್ 6: ಕೊಡಗಿನಲ್ಲಿ ಆಶ್ಲೇಷ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಸಂಗಮಕ್ಷೇತ್ರವಾದ ಭಾಗಮಂಡಲ ಜಲಾವೃತವಾಗಿದೆ.

ಕಳೆದ ವರ್ಷ ಈ ವೇಳೆಗೆ ಹಲವು ಬಾರಿ ಸಂಗಮ ಜಲಾವೃತವಾಗಿತ್ತಾದರೂ ಈ ಬಾರಿ ಮಳೆಯ ಕೊರತೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಕಾವೇರಿ ನದಿಯಲ್ಲಿ ನೀರು ಕಾಣಿಸಿರಲಿಲ್ಲ. ಆದರೆ ಆಶ್ಲೇಷ ಮಳೆ ಆ.3ರಿಂದ ಆರಂಭವಾದ ನಂತರ ಮುಂಗಾರು ಚೇತರಿಕೆ ಕಂಡು ಬಂದಿದ್ದು ಅಬ್ಬರದಿಂದ ಮಳೆ ಸುರಿಯಲಾರಂಭಿಸಿದೆ.

ಈಗಾಗಲೇ ಭಾಗಮಂಡಲ ಸಂಗಮಕ್ಷೇತ್ರ ಜಲಾವೃತಗೊಂಡಿರುವುದರಿಂದ ತಲಕಾವೇರಿ ಸಂಪರ್ಕ ಕಳೆದುಕೊಂಡಿದೆ. ಇಲ್ಲಿ ಕಳೆದ ಒಂದು ದಿನದ ಅವಧಿಯಲ್ಲಿ 170 ಮಿಮೀ ಮಳೆ ಸುರಿದಿದ್ದು, ಈ ಮಳೆಯಿಂದಾಗಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಸಂಪರ್ಕ ಕಳೆದುಕೊಂಡಿರುವ ಕಾರಣ ಬೋಟ್‌ಗಳ ಮೂಲಕ ಸಂಪರ್ಕ ಕಲ್ಪಿಸಲಾಗುತ್ತಿದೆ.

Bhagamandala Covered By Water From Rain

ಭಾಗಮಂಡಲ ಮಡಿಕೇರಿ ಮತ್ತು ನಾಪೋಕ್ಲು ರಸ್ತೆಯ ಮೇಲೆಯೂ ನೀರು ಹರಿಯುತ್ತಿದ್ದು, ತಲಕಾವೇರಿ ವ್ಯಾಪ್ತಿಯ ಜನ ಜಲಾವೃತಗೊಂಡಿದ್ದರಿಂದ ಆತಂಕಗೊಂಡಿದ್ದಾರೆ. ಜಲಾವೃತ ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ ಅವರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇನ್ನು ದಕ್ಷಿಣ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು ಪೊನ್ನಂಪೇಟೆ ವ್ಯಾಪ್ತಿಯಲ್ಲಿ 180 ಮಿಮೀ ಮಳೆ ಸುರಿದಿದ್ದು, ಇದರಿಂದ ಸುತ್ತಮುತ್ತಲಿನ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಮಡಿಕೇರಿಯಲ್ಲಿ ಭಾರಿ ಗಾಳಿ ಬೀಸುತ್ತಾ ಮಳೆ ಸುರಿಯುತ್ತಿರುವುದರಿಂದ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಮಡಿಕೇರಿ ತಾಲೂಕಿನಲ್ಲಿ ಒಂದೇ ದಿನಕ್ಕೆ 95ಮಿಮೀ ಮಳೆ ಸುರಿದಿದೆ. ಇನ್ನು ಜಿಲ್ಲೆಯಲ್ಲಿ ಒಂದು ದಿನದ ಅವಧಿಯಲ್ಲಿ ಸರಾಸರಿ 76.97ಮಿಮೀ ಮಳೆ ಸುರಿದಿದ್ದು, ಮಳೆಯ ತೀವ್ರತೆ ಹೆಚ್ಚಾಗಿದೆ.

ಇನ್ನು ಜನವರಿಯಿಂದ ಇಲ್ಲಿಯವರೆಗಿನ 1158.82 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2634.29 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 1476 ಮಿಮೀ ಕಡಿಮೆ ಸುರಿದಿರುವುದು ಕಂಡು ಬಂದಿದೆ.

Bhagamandala Covered By Water From Rain

ಗರಿಷ್ಠ 2,859 ಅಡಿಗಳ ಹಾರಂಗಿ ಜಲಾಶಯದಲ್ಲಿ ಇದೀಗ 2835.16 ಅಡಿಯಷ್ಟು ನೀರಿದೆ. ಕಳೆದ ವರ್ಷ ಇದೇ ವೇಳೆ ಜಲಾಶಯ ಭರ್ತಿಯಾಗಿತ್ತಲ್ಲದೆ 2857.89 ಅಡಿಯಷ್ಟು ನೀರಿನ ಮಟ್ಟವನ್ನು ಕಾಪಾಡಿಕೊಂಡು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿತ್ತು. ಈ ಬಾರಿ ತಡವಾಗಿ ಮಳೆ ಆರಂಭವಾಗಿದ್ದು ಚಳಿಯೊಂದಿಗೆ ಗಾಳಿಯೂ ಮೈಕೊರೆಯುತ್ತಿದೆ. ಕೆಲವೆಡೆ ರಸ್ತೆ, ಗುಡ್ಡ ಕುಸಿತವಾಗುವ ಭಯವೂ ಜನರಲ್ಲಿದ್ದು, ಇದೇ ರೀತಿ ಮಳೆ ಬಂದರೆ ರಸ್ತೆ ಕುಸಿಯುವ ಆತಂಕವೂ ಇದೆ. ಕಾವೇರಿ ತುಂಬಿ ಹರಿದರೆ ಹಲವು ಕಡೆಗಳಲ್ಲಿ ಪ್ರವಾಹವುಂಟಾಗುವ ಸಾಧ್ಯತೆಯಿದೆ. ಮಳೆ ಭೋರ್ಗರೆದು ಸುರಿಯುತ್ತಿರುವ ಕಾರಣ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ.

ಒಟ್ಟಾರೆ ಜಿಲ್ಲೆಯಲ್ಲಿ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಬ್ಬರಿಸಲಿದ್ದು ಜಿಲ್ಲಾಡಳಿತ ಅಲರ್ಟ್ ಆಗಿದೆ. ಯಾವುದೇ ತೊಂದರೆಯಾಗದಂತೆ ಸರ್ವ ಸನ್ನದ್ಧವಾಗಿದೆ. ಕಳೆದ ಬಾರಿಯ ದುರಂತ ಕಣ್ಣ ಮುಂದೆಯೇ ಇರುವ ಕಾರಣದಿಂದಾಗಿ ಈ ಬಾರಿಯ ಮಳೆಗಾಲಕ್ಕೆ ಬೇಸಿಗೆಯಲ್ಲಿಯೇ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿತ್ತು.

ಇದೀಗ ಪ್ರವಾಹ ಪೀಡಿತ ಮತ್ತು ಭೂಕುಸಿತ ಪ್ರದೇಶಗಳಲ್ಲಿ ಜನ ಎಚ್ಚರವಾಗಿರುವಂತೆ ಸೂಚಿಸಲಾಗಿದ್ದು, ಅಧಿಕಾರಿಗಳು ಸ್ಥಳ ಬಿಟ್ಟು ಹೋಗದಂತೆಯೂ ಆದೇಶಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+