ಟಿಪ್ಪು ವಿರುದ್ಧ ಮಾತನಾಡಿದ್ದಕ್ಕೆ ಬಂಧಿಸಿದ್ದ ಪತ್ರಕರ್ತನಿಗೆ ಜಾಮೀನು
ಕೊಡಗು, ನವೆಂಬರ್ 13: ಟಿಪ್ಪು ಜಯಂತಿ ವಿರುದ್ಧ ಭಾಷಣ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪದಡಿ ಬಂಧಿಸಿದ್ದ ಪತ್ರಕರ್ತ ಸಂತೋಶ್ ತಮ್ಮಯ್ಯಗೆ ಜಾಮೀನು ದೊರೆತಿದೆ.
ಕೊಡಗಿನ ಗೋಣಿಕೊಪ್ಪ ಪೊಲೀಸರು ಸಂತೋಶ್ ತಮ್ಮಯ್ಯ ಅವರನ್ನು ನಿನ್ನೆ ಮಧ್ಯರಾತ್ರಿ ಬಂಧಿಸಿದ್ದರು. ಇದಕ್ಕೆ ಬಲಪಂಥೀಯ ಸಂಘಟನೆಗಳು ಮತ್ತು ಹಲವು ಪತ್ರಕರ್ತರು ವಿರೋಧ ವ್ಯಕ್ತಪಡಿಸಿದ್ದರು.
ಟಿಪ್ಪು ಜಯಂತಿಗೆ ಮುನ್ನಾ ದಿನ ಪತ್ರಕರ್ತ ಸಂತೋಶ್ ತಮ್ಮಯ್ಯ ಅವರು ಟಿಪ್ಪು ಜಯಂತಿ ವಿರೋಧಿಸಿ ಭಾಷಣ ಮಾಡಿದ್ದರು. ಅದರ ಆಧಾರವಾಗಿಟ್ಟುಕೊಂಡು ಗೊಣಿಕೊಪ್ಪ ಪೊಲೀಸರು ಅವರನ್ನು ಬಂಧಿಸಿದ್ದರು.

ಇದೀಗ ಪೊನ್ನಂಪೇಟೆಯ ಜೆಎಂಎಫ್ಸಿ ನ್ಯಾಯಾಲಯವು ಸಂತೋಶ್ ಅವರಿಗೆ ಜಾಮೀನು ನೀಡಿದ್ದು, ಇನ್ನು ಮುಂದೆ ಇಂತಹಾ ಹೇಳಿಕೆಗಳನ್ನು ನೀಡಿದರೆ ಜಾಮೀನು ರದ್ದಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೆ ಪ್ರಕರಣ ಇರುವಂದು ಕೋರ್ಟ್ಗೆ ಹಾಜರಾಗುವಂತೆ ಹಾಗೂ ಪೊಲೀಸರ ತನಿಖೆಗೆ ಸಹಕರಿಸುವಂತೆ ಕೋರ್ಟ್ ಹೇಳಿದೆ.
ಪತ್ರಕರ್ತ ಸಂತೋಶ್ ತಮ್ಮಯ್ಯ ಅವರ ಬಂಧನ ವಿರೋಧಿಸಿ ಇಂದು ಕೊಡಗಿನಲ್ಲಿ ಹಿಂದುಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ನಾಳೆ (ನವೆಂಬರ್ 13)ರ ಮಧ್ಯಾಹ್ವ 12 ರಿಂದ 1 ಗಂಟೆ ವರೆಗೆ ಕೊಡಗು ಬಂದ್ಗೆ ಸಹ ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿವೆ.
ಪತ್ರಕರ್ತ ಸಂತೋಶ್ ತಮ್ಮಯ್ಯ ಬಂಧನದ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ಸಹ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಹಲವರು ದೂರಿದ್ದರು.












Click it and Unblock the Notifications