ಮಡಿಕೇರಿಯ ದುಬಾರೆಯಲ್ಲಿ ಆತಂಕ ಸೃಷ್ಟಿಸಿದ ಮದಗಜ!
ಮಡಿಕೇರಿ, ಜನವರಿ, 27: ಪ್ರವಾಸಿ ತಾಣ ಹಾಗೂ ಆನೆಗಳ ತರಬೇತಿ ಶಿಬಿರವಾಗಿರುವ ಕುಶಾಲನಗರ ಬಳಿಯ ದುಬಾರೆ ಅರಣ್ಯದಲ್ಲಿ ಮದಗಜವೊಂದು ಬೀಡು ಬಿಟ್ಟಿದ್ದು ಇದರಿಂದ ಆತಂಕ ಸೃಷ್ಟಿಯಾಗಿದೆ.
ದಿಢೀರ್ ಆಗಿ ಆನೆಶಿಬಿರದತ್ತ ಆಗಾಗ್ಗೆ ನುಗ್ಗುವ ಈ ಮದಗಜ ಸಾಕಾನೆಗಳ ಮೇಲೆ ದಾಳಿ ಮಾಡುತ್ತಿದೆ. ಅಷ್ಟೇ ಅಲ್ಲ ಹೆಣ್ಣಾನೆಗಳೊಂದಿಗೆ ಸರಸ ಸಲ್ಲಾಪ ನಡೆಸುತ್ತಾ ಹತ್ತಿರ ತೆರಳುವವರತ್ತ ದಾಳಿಗೆ ಮುಂದಾಗುತ್ತಿದೆ. ಇದರಿಂದ ಅರಣ್ಯವಾಸಿಗಳಲ್ಲದೆ, ಮಾವುತರು, ಕಾವಾಡಿಗಳು, ಅರಣ್ಯ ಸಿಬ್ಬಂದಿ, ಸಾಕಾನೆಗಳು ಸೇರಿದಂತೆ ಎಲ್ಲರೂ ಭಯಪಡುವಂತಾಗಿದೆ. ಅರಣ್ಯದಿಂದ ಬಂದ ಮದವೇರಿದ ಈ ಕಾಡಾನೆಯೊಂದು ಕಳೆದ ಕೆಲವು ದಿನಗಳಿಂದ ಸುತ್ತಾಡುತ್ತಾ ದಾಂಧಲೆ ನಡೆಸುತ್ತಿದೆ.[ಜೀವನ್ಮರಣ ಹೋರಾಟದಲ್ಲಿರುವ ಗಜರಾಜ ಸಿದ್ದನಿಗಾಗಿ ಪ್ರಾರ್ಥನೆ]

ದುಬಾರೆ ಆನೆ ಶಿಬಿರದಲ್ಲಿ ಸುಮಾರು 33 ಸಾಕಾನೆಗಳಿದ್ದು, ಬೆಳಗಿನ ಉಪಹಾರದ ನಂತರ ಆನೆಗಳನ್ನೆಲ್ಲ ಮೇಯಲು ಕಾಡಿಗೆ ಬಿಡಲಾಗುತ್ತಿದೆ. ಕೆಲವೊಮ್ಮೆ ಆನೆಗಳ ಜಾಡನ್ನು ಹಿಡಿದು ಬರುವ ಕಾಡಾನೆಗಳು ಕೆಲ ಸಮಯ ಆನೆಯೊಂದಿಗೆ ಸರಸ ಸಲ್ಲಾಪವಾಡಿ ಹಿಂದಿರುಗುವುದೂ ಇದೆ. ಆದರೆ ಕೆಲವು ದಿನಗಳಿಂದ ಮದವೇರಿದ ಕಾಡಾನೆಯೊಂದು ಸಾಕಾನೆಯ ಜಾಡನ್ನು ಹಿಡಿದು ದುಬಾರೆಯ ಆನೆ ಶಿಬಿರದೊಳಗೆ ನುಗ್ಗಿ ಸಾಕಾನೆಯೊಳಗೆ ಸೇರಿಕೊಂಡು ತೊಂದರೆ ನೀಡುತ್ತಿರುವುದು ಮಾತ್ರ ನುಂಗಲಾರದ ತುತ್ತಾಗಿದೆ. ಇದರ ಹಾವಳಿಗೆ ಸಾಕಾನೆಗಳಾದ ತೀರ್ಥರಾಮ, ಅಜೇಯ, ಗೋಪಿ ಭಯಭೀತರಾಗಿದ್ದಾರೆ.
ಮದಗಜವನ್ನು ಅರಣ್ಯಕ್ಕೆ ಅಟ್ಟುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆಯಾದರೂ ಯಾವಾಗ ಬೇಕಾದರೂ ಇದು ಶಿಬಿರದೊಳಗೆ ನುಗ್ಗಿ ಇತರೆ ಆನೆಗಳ ಮೇಲೆ ನುಗ್ಗಿ ದಾಂಧಲೆ ನಡೆಸುವ ಸಾಧ್ಯತೆಯಿರುವುದರಿಂದ ಅಲ್ಲಲ್ಲಿ ಬೆಂಕಿ ಹಾಕಿ ಕಾವಲು ಕಾಯುತ್ತಾ ಅದನ್ನು ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಜತೆಗೆ ಪ್ರವಾಸಿಗರಿಗೂ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications