ಭ್ರಷ್ಟಾಚಾರ ತಡೆಗೆ ಮಡಿಕೇರಿಯಲ್ಲಿ ಸಹಾಯವಾಣಿ ಸೌಲಭ್ಯ
ಮಡಿಕೇರಿ, ಜುಲೈ 15: ಕೊಡಗು ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಲಂಚ ತಾಂಡವಾಡುತ್ತಿದ್ದು, ಭ್ರಷ್ಟ ವ್ಯವಸ್ಥೆಯನ್ನು ತಡೆಯುವ ಸಲುವಾಗಿ ಮಡಿಕೇರಿ ಕೊಡವ ಸಮಾಜ ಸಹಾಯವಾಣಿಯೊಂದನ್ನು ಆರಂಭಿಸಲು ತೀರ್ಮಾನಿಸಿದೆ ಎಂದು ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಮಾದೇಟಿರ ಬೆಳ್ಯಪ್ಪ ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದ್ದು, ಹಣವಿಲ್ಲದೆ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲವೆಂದು ಹೇಳಿದ ಅವರು ಪ್ರತಿಯೊಂದು ಟೇಬಲ್ ಲಂಚವನ್ನು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಹಾಗೂ ನೋಂದಣಿ ಇಲಾಖೆಯಲ್ಲಿ ಅರ್ಜಿದಾರರಿಗೆ ಹೆಚ್ಚಿನ ಅಡಚಣೆಯಾಗುತ್ತಿದ್ದು, ಭೂಮಿ ವಿಚಾರಕ್ಕೆ ಸಂಬಂಧಿಸಿದ ಕಡತಗಳು ವಿಲೇವಾರಿಯಾಗುತ್ತಿಲ್ಲ. ಈ ಬೆಳವಣಿಗೆಯಿಂದ ಸಕಾಲದಲ್ಲಿ ಕೆಲಸ, ಕಾರ್ಯಗಳು ನಡೆಯದೆ ಸಂಕಷ್ಟಕ್ಕೆ ಸಿಲುಕಿರುವ ಕೊಡವ ಸಮುದಾಯದ ಅರ್ಜಿದಾರರು ಸಹಾಯವಾಣಿಯ ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದ್ದಾರೆ.

ಸಹಾಯವಾಣಿ ಕಚೇರಿಯಲ್ಲಿ ಸಮುದಾಯದ ನಿವೃತ್ತ ಸರ್ಕಾರಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದು, ಅರ್ಜಿ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಅಗತ್ಯ ಸಹಕಾರವನ್ನು ನೀಡಲಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದ ಮಾಹಿತಿಯ ಕೊರತೆಯನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಕಾರ್ಯವನ್ನು ಕೂಡ ಮಾಡಲಾಗುವದು.
ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೂ ಸ್ಪಂದಿಸಲಾಗುವುದು. ಕಾನೂನಿನ ಸಹಕಾರವನ್ನು ಕೂಡ ನೀಡಲಾಗುವುದು. ಸಹಾಯವಾಣಿ ಸಂಖ್ಯೆ 08272-225776 ಆಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications