ಅಯೋಧ್ಯೆ ರಾಮ ಮಂದಿರ ನಿರ್ಮಾಣ ಟ್ರಸ್ಟ್ ಮುಖ್ಯಸ್ಥರಿಗೆ Z+ ಭದ್ರತೆ
ಲಕ್ನೋ, ಜನವರಿ.10: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ನಿರ್ಮಾಣಕ್ಕೆ ಈಗಾಗಲೇ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ದೇಗುಲ ನಿರ್ಮಿಸಲೆಂದೇ ಟ್ರಸ್ಟ್ ಒಂದನ್ನು ರಚಿಸಿದ್ದು, ದೇವಸ್ಥಾನ ನಿರ್ಮಾಣದ ಸಂಪೂರ್ಣ ಹೊಣೆಯನ್ನು ಆ ಟ್ರಸ್ಟ್ ಗೆ ವಹಿಸಲಾಗಿದೆ.
ಇತ್ತೀಚಿಗೆ ನಡೆದ ಬೆಳವಣಿಗೆಗಳ ಹಿನ್ನೆಲೆ ರಾಮಜನ್ಮ ಭೂಮಿಯಲ್ಲಿ ದೇಗುಲ ನಿರ್ಮಾಣದ ಹೊಣೆ ಹೊತ್ತಿರುವ ಟ್ರಸ್ಟ್ ಮುಖ್ಯಸ್ಥರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಹೆಚ್ಚಿನ ಭದ್ರತೆ ನೀಡಲು ತೀರ್ಮಾನಿಸಿದೆ.
ಅಯೋಧ್ಯೆ ತೀರ್ಪಿನ ನಂತರ ರಾಮಮಂದಿರ ನಿರ್ಮಾಣಕ್ಕೆ ಮೊದಲ ಹೆಜ್ಜೆ
ಶ್ರೀರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಮುಖ್ಯಸ್ಥ ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರನ್ನೇ ರಾಮಮಂದರಿ ಟ್ರಸ್ಟ್ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ಝೆಡ್ ಪ್ಲಸ್ ಭದ್ರತೆಯನ್ನು ಒದಗಿಸಲು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Y+ ಭದ್ರತೆ ಹೊಂದಿದ್ದ ಮಹಾಂತ್ ನೃತ್ಯ ಗೋಪಾಲ್ ದಾಸ್:
ಶ್ರೀರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಮುಖ್ಯಸ್ಥರಾಗಿರುವ ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರಿಗೆ ಈ ಮೊದಲು ಸರ್ಕಾರದಿಂದ Y+ ಭದ್ರತೆಯನ್ನು ನೀಡಲಾಗಿತ್ತು. ಆದರೆ, ರಾಮ ಮಂದಿರ ಟ್ರಸ್ಟ್ ಗೆ ಇವರನ್ನೇ ನೇಮಿಸಲಾಗುತ್ತದೆ ಎಂದು ಸುದ್ದಿ ಹರಿದಾಡುತ್ತಿದ್ದಂತೆ ದಿಢೀರ್ ಎಂದು ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಹಿಂದೆ ನವೆಂಬರ್.09ರಂದು ರಾಮ ಮಂದಿರ ನಿರ್ಮಾಣ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. 1993ರ ಅಯೋಧ್ಯೆ ಕಾಯ್ದೆ ಅನ್ವಯ ಶ್ರೀರಾಮನ ದೇವಸ್ಥಾನ ನಿರ್ಮಾಣಕ್ಕೆ ಟ್ರಸ್ಟ್ ರಚನೆ ಮಾಡಬೇಕು. ಟ್ರಸ್ಟ್ ಮೂಲಕ ದೇವಸ್ಥಾನದ ನಿರ್ಮಾಣ ಕಾರ್ಯವು ನಡೆಯಬೇಕು.
ಇನ್ನು, ಮಸೀದಿ ನಿರ್ಮಾಣವನ್ನೂ ಸರ್ಕಾರ ನಿರ್ಲಕ್ಷಿಸುವಂತಿಲ್ಲ. ಅದಕ್ಕಾಗಿ ಅಯೋಧ್ಯೆಯಲ್ಲಿ ಸೂಕ್ತ ಜಾಗವನ್ನು ಹುಡುಕಿ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ ಐದು ಎಕರೆ ಪ್ರದೇಶವನ್ನು ಕೇಂದ್ರ ಸರ್ಕಾರವೇ ನೀಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.