ಯುವತಿಯ ಮಾರಾಟ, ಸಾಮೂಹಿಕ ಅತ್ಯಾಚಾರ, ಅವಮಾನ ಸಹಿಸದೆ ಆತ್ಮಹತ್ಯೆಗೆ ಯತ್ನ
ಮೀರತ್, ಮೇ 13 : ಸ್ವಂತ ತನ್ನ ತಂದೆ ಮತ್ತು ಸೋದರತ್ತೆಯಿಂದ ಮಾರಾಟ ಮಾಡಲಾದ 20ರ ಆಸುಪಾಸಿನ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದ್ದು, ಅವಮಾನ ಸಹಿಸಲಾಗದೆ ಆ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಭೀಭತ್ಸ ಘಟನೆ ಮೀರತ್ ನಲ್ಲಿ ಜುರಿಗಿದೆ.
ಹಣದ ಆಸೆಗೆ ಬಿದ್ದ ಅಪ್ಪ, ತನ್ನ ಮಗಳನ್ನು ಕೇವಲ 10 ಸಾವಿರ ರುಪಾಯಿಗೆ ಮಾರಾಟ ಮಾಡಿದ್ದಾನೆ. ಮಾರಾಟದ ನಂತರ ಆಕೆಯನ್ನು ಇಟ್ಟುಕೊಂಡಿದ್ದ ವ್ಯಕ್ತಿ ಮತ್ತು ಆತನ ಸ್ನೇಹಿತರು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇಷ್ಟು ಸಾಲದೆಂಬಂತೆ, ದೂರು ನೀಡಲು ಹೋದಾಗ ಪೊಲೀಸರು ಕೂಡ ದೂರು ಸ್ವೀಕರಿಸಿಲ್ಲ.
ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ:ದುಷ್ಕರ್ಮಿಗಳ ಪತ್ತೆಗೆ ತಂಡ
ಇದರಿಂದ ಬೇಸತ್ತ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಶೇ.80ರಷ್ಟು ಸುಟ್ಟಗಾಯದಿಂದ ಬಳಲುತ್ತಿರುವ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾಳೆ. ಲೈಂಗಿಕವಾಗಿ, ಮಾನಸಿಕವಾಗಿ ದೌರ್ಜನ್ಯಕ್ಕೊಳಗಾದ ಆಕೆಯ ಕಥೆ ನಿಜಕ್ಕೂ ಕರುಳು ಹಿಂಡುವಂತಿದೆ.
ಉತ್ತರ ಪ್ರದೇಶದ ಹಾಪುರ ಗ್ರಾಮದ ನಿವಾಸಿಯಾಗಿರುವ ಮಹಿಳೆಯನ್ನು, ಆಕೆಯ ಗಂಡ ತೀರಿಕೊಂಡ ಮೇಲೆ ಆಕೆಯ ಅಪ್ಪನೇ ದುರಾಸೆಗಾಗಿ ಕೇವಲ 10 ಸಾವಿರ ರುಪಾಯಿಗಾಗಿ ಮಾರಾಟ ಮಾಡಿದ್ದಾನೆ. ಆಕೆಯನ್ನು ಕೊಳ್ಳಲು ಸಾಲ ಮಾಡಿದ್ದ ವ್ಯಕ್ತಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಮಹಿಳೆಯನ್ನು ಸಾಲ ನೀಡಿದವರ ಮನೆಗೆ ಕೆಲಸಕ್ಕೆಂದು ನೇಮಿಸಿದ್ದಾನೆ.
ಆಕೆಯ ನರಕ ಯಾತನೆ ಅಲ್ಲಿಯೂ ಮುಂದುವರಿದಿದೆ. ಸಾಲ ಕೊಟ್ಟಿದ್ದ ವ್ಯಕ್ತಿಗಳೆಲ್ಲ, ಕೆಲಸ ಮಾಡಿಸಿಕೊಂಡಿದ್ದಕ್ಕಾಗಿ ಹಣವನ್ನೂ ನೀಡದೆ ಆಕೆಯನ್ನು ಚಿತ್ರಹಿಂಸೆಗೆ ಗುರಿಪಡಿಸಿ ಅತ್ಯಾಚಾರ ಎಸಗಿದ್ದಾರೆ. ತನ್ನ ಸಹಾಯಕ್ಕೆ ಕಡೆಗೆ ಪೊಲೀಸರು ಬಾರದಿದ್ದಾಗ ಅನ್ಯ ದಾರಿಯಿಲ್ಲದೆ ಜೀವ ಕಳೆದುಕೊಳ್ಳುವ ಪ್ರಯತ್ನಕ್ಕೆ ಆಕೆ ಕೈಹಾಗಿದ್ದಾಳೆ.
ಮುಜಾಫರ್ ಕಿರುಕುಳ ಪ್ರಕರಣ, 2 ವಾರದಲ್ಲಿ ತನಿಖೆ ಮುಗಿಸಲು ಸುಪ್ರೀಂ ಸೂಚನೆ
ಯುವತಿಯ ಕಥೆಯನ್ನು ಕೇಳಿದ ದೆಹಲಿಯ ಮಹಿಳಾ ಆಯೋಗ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, 14 ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗುವಂತೆ ಮಾಡಿದೆ. ಹಾಪುರ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ತನಿಖೆಯನ್ನು ಆರಂಭಿಸಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದು, ಸಂತ್ರಸ್ತ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿದ್ದಾರೆ.
ಅತ್ಯಾಚಾರಿಗಳಿಂದ ಮಾತ್ರವಲ್ಲ, ಅತ್ಯಾಚಾರ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಲು ನಿರಾಕರಿಸಿದ ಉತ್ತರ ಪ್ರದೇಶದ ಪೊಲೀಸರಿಂದ ಕೂಡ ನಂಬಲಸಾಧ್ಯ ರೀತಿಯಲ್ಲಿ ಕಿರುಕುಳ ಅನುಭವಿಸಿದ್ದಾರೆ. ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರಿಗೆ ನಾಚಿಕೆಯಾಗಬೇಕು. ಆಕೆ ದಹನ ಮಾಡಿಕೊಳ್ಳಲು ಯತ್ನಿಸಿದ್ದಕ್ಕೆ ಉತ್ತರ ಪ್ರದೇಶದ ಪೊಲೀಸರೂ ಕಾರಣ ಎಂದು ಸ್ವಾತಿ ಅವರು ಪತ್ರದಲ್ಲಿ ಬರೆದಿದ್ದಾರೆ.
56 ವರ್ಷದ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ:ಬಂಧನ
ಸಂತ್ರಸ್ತ ಯುವತಿಗೆ ಪರಿಹಾರ ದೊರಕಿಸಿಕೊಡಬೇಕು, ನ್ಯಾಯ ಸಿಗುವಂತಾಗಬೇಕು ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧವೂ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ, ಮಹಿಳೆ ಪೊಲೀಸರನ್ನೂ ದೂರಿದ್ದು, ಅವರು ಹಣ ಪಡೆದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗಳ ವಿರುದ್ಧ ದೂರು ಪಡೆಯಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.