ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಇಬ್ಬರು ಸಚಿವರ ಅಸಮಾಧಾನ!
ಲಕ್ನೋ ಜುಲೈ 20: ಉತ್ತರ ಪ್ರದೇಶದ ಜಲಶಕ್ತಿ ಖಾತೆ ಸಚಿವ ದಿನೇಶ್ ಖಟಿಕ್ ಯೋಗಿ ಆದಿತ್ಯನಾಥ್ ಸಂಪುಟದಿಂದ ಹೊರಬರಲಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಪಿಡಬ್ಲ್ಯೂಡಿ ಸಚಿವ ಜಿತಿನ್ ಪ್ರಸಾದ್ ಸಹ ತಮ್ಮ ವಿಶೇಷ ಕರ್ತವ್ಯಾಧಿಕಾರಿ ವರ್ಗಾವಣೆ ಮಾಡಿರುವ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬ ವರದಿಗಳಿವೆ. ಆದರೆ, ಯೋಗಿ ಆದಿತ್ಯನಾಥ್ ಸಂಪುಟದ ಇತರ ಸಚಿವರು ಇಂತಹ ವರದಿಗಳನ್ನು ತಳ್ಳಿಹಾಕಿದ್ದಾರೆ.
ಖಟಿಕ್ ತಮ್ಮ ಇಲಾಖೆಯಲ್ಲಿನ ವರ್ಗಾವಣೆ ಮತ್ತು ಹಸ್ತಿನಾಪುರದಲ್ಲಿ ಅವರ ಬೆಂಬಲಿಗರ ಮೇಲೆ ಎಫ್ಐಆರ್ ದಾಖಲಾದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬ ವರದಿ ಇದೆ.

ಸಚಿವ ಸ್ವತಂತ್ರ ದೇವ್ ಸಿಂಗ್ ತಮ್ಮ ಅಧಿಕೃತ ನಿವಾಸ ಮತ್ತು ವಾಹನವನ್ನು ಖಾಲಿ ಮಾಡಿ ಹಸ್ತಿನಾಪುರದ ತಮ್ಮ ಖಾಸಗಿ ನಿವಾಸಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಪಿಡಬ್ಲ್ಯುಡಿ ಸಚಿವ ಜಿತಿನ್ ಪ್ರಸಾದ್ ಅವರು ತಮ್ಮ ಒಎಸ್ಡಿ ಅನಿಲ್ ಕುಮಾರ್ ಪಾಂಡೆ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ಅಸಮಾಧಾನಗೊಂಡಿದ್ದಾರೆ. ಮಂಗಳವಾರ ತಡರಾತ್ರಿವರೆಗೂ ಇಬ್ಬರೂ ಸಚಿವರ ಫೋನ್ ಸ್ವಿಚ್ ಆಫ್ ಆಗಿತ್ತು.
ಈ ತಿಂಗಳ ಆರಂಭದಿಂದಲೂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸೂಚನೆಗಳು ಸಿಗುತ್ತಿವೆ. ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನವೂ ಸಹ ನಡೆದಿದೆ.
ಜಿತಿನ್ ಪ್ರಸಾದ್ ಬುಧವಾರ ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಜಿತಿನ್ ಪ್ರಸಾದ್ ಮಂಗಳವಾರ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಗೈರಾಗಿದ್ದರು.












Click it and Unblock the Notifications