ಉತ್ತರ ಪ್ರದೇಶದಲ್ಲಿ ಕಾನ್ಸ್ ಟೇಬಲ್ ರನ್ನೇ ಹೊಡೆದು ಕೊಂದ ಗೂಂಡಾಗಳು!
ಲಕ್ನೋ, ಫೆಬ್ರವರಿ.10: ಅಕ್ರಮ ಮದ್ಯ ಜಪ್ತಿಗೆ ತೆರಳಿದ ಪೊಲೀಸರ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾಸಗಂಜ್ ನಲ್ಲಿ ನಡೆದಿದೆ. ಗೂಂಡಾಗಳ ದಾಳಿಯಲ್ಲಿ ಒಬ್ಬ ಪೊಲೀಸ್ ಕಾನ್ಸ್ ಟೇಬಲ್ ಮೃತಪಟ್ಟಿದ್ದು, ಸಬ್ ಇನ್ಸ್ ಪೆಕ್ಟರ್ ಗಾಯಗೊಂಡಿದ್ದಾರೆ. ಮೃತ ಕಾನ್ಸ್ ಟೇಬಲ್ ರನ್ನು ದೇವೇಂದ್ರ ಮತ್ತು ಸಬ್ ಇನ್ಸ್ ಪೆಕ್ಟರ್ ರನ್ನು ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.
ನಕಲಿ ಮದ್ಯ ಮಾರಾಟ ಜಾಲವನ್ನು ಭೇದಿಸಲು ತೆರಳಿದ ಸಂದರ್ಭದಲ್ಲಿ ಗೂಂಡಾಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವಿಷಯ ತಿಳಿಯುದ್ದಂತೆ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ.
ರಾಜಸ್ಥಾನದಲ್ಲಿ ನಾಲ್ವರ ಜೀವ ತೆಗೆದ ನಕಲಿ ಮದ್ಯ
ಸಿಧಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಧೀಮರ್ ಗ್ರಾಮದಲ್ಲಿ ಪೊಲೀಸರು ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಗಾಯಗೊಂಡ ಸಬ್ ಇನ್ಸ್ ಪೆಕ್ಟರ್ ಮತ್ತು ಕಾನ್ಸ್ ಟೇಬಲ್ ರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಾನ್ಸ್ ಟೇಬಲ್ ದೇವೇಂದ್ರ ಮೃತಪಟ್ಟಿದ್ದಾರೆ.
50 ಲಕ್ಷ ರೂಪಾಯಿ ಪರಿಹಾರ ಘೋಷಣೆ:
ಕಾಸಗಂಜ್ ನಲ್ಲಿ ನಡೆದ ಪೊಲೀಸರ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸೂಚಿಸಲಾಗಿದೆ.
ನಕಲಿ ಮದ್ಯ ಜಪ್ತಿಗೆ ತೆರಳಿದ ವೇಳೆ ಗೂಂಡಾಗಳ ಹಲ್ಲೆಯಿಂದ ಮೃತಪಟ್ಟಿರುವ ಕಾನ್ಸ್ ಟೇಬಲ್ ದೇವೇಂದ್ರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 50 ಲಕ್ಷ ರೂಪಾಯಿ ಪರಿಹಾರದ ಜೊತೆಗೆ ಮೃತ ಕಾನ್ಸ್ ಟೇಬಲ್ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ಅವರ ಹೆಚ್ಚಿನ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.