ದೇವಸ್ಥಾನದಲ್ಲಿಯೇ ಮದ್ಯದ ಬಾಟಲಿ ಹಂಚಿದ ಬಿಜೆಪಿ ನಾಯಕನ ಮಗ
ಹರ್ದೋಯ್ (ಉತ್ತರ ಪ್ರದೇಶ) ಜನವರಿ 8: ದೇವಸ್ಥಾನವೊಂದರಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಬಿಜೆಪಿ ಮುಖಂಡರೊಬ್ಬರ ಮಗ ಅಲ್ಲಿಯೇ ಆಹಾರದೊಂದಿಗೆ ಮದ್ಯದ ಬಾಟಲಿಗಳನ್ನು ಹಂಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಿಜೆಪಿ ಮುಖಂಡ ನರೇಶ್ ಅಗರವಾಲ್ ಅವರ ಮಗ ನಿತಿನ್, ಪಾಸಿ ಸಮುದಾಯದ ಜನರಿಗಾಗಿ ಹರ್ದೋಯ್ನ ಶ್ರವಣದೇವಿ ದೇವಸ್ಥಾನದಲ್ಲಿ ಸಮ್ಮೇಳನವೊಂದನ್ನು ಆಯೋಜಿಸಿದ್ದರು.
ಕಾರ್ಯಕ್ರಮದ ಬಳಿಕ ಗ್ರಾಮದ ಮುಖ್ಯಸ್ಥನಿಗೆ ಆಹಾರದ ಪೊಟ್ಟಣಗಳನ್ನು ನೀಡಲಾಗಿದ್ದು, ಆತ ಎಲ್ಲರಿಗೂ ಹಂಚಿಕೆ ಮಾಡಲಿದ್ದಾನೆ ಎಂದು ನಿತಿನ್ ಅಗರವಾಲ್ ವೇದಿಕೆ ಮೇಲಿಂದ ಪ್ರಕಟಿಸಿದ್ದರು.
ಆದರೆ, ಆಹಾರದ ಪೊಟ್ಟಣ ಪಡೆದುಕೊಂಡ ಕೆಲವು ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿತ್ತು. ಏಕೆಂದರೆ ಪೊಟ್ಟಣದಲ್ಲಿ ಆಹಾರದ ಜೊತೆಗೆ ಮದ್ಯವೂ ಇತ್ತು!

ನಿತಿನ್ ಅಗರವಾಲ್ ಅವರು ಆಯೋಜಿಸಿದ್ದ ಕಾರ್ಯಕ್ರಮ ಇದು. ಕಾರ್ಯಕ್ರಮದಲ್ಲಿ ಆಹಾರದ ಜೊತೆಗೆ ಮದ್ಯವನ್ನೂ ಇರಿಸಿ ಕೊಟ್ಟಿದ್ದಾರೆ ಎಂದು ವ್ಯಕ್ತಿಯೊಬ್ಬರು ತಿಳಿಸಿದರು.
ಆದರೆ, ಇದೇ ಪೊಟ್ಟಣಗಳನ್ನು ಅಪ್ರಾಪ್ತ ವಯಸ್ಸಿನ ಮಕ್ಕಳಿಗೂ ವಿತರಿಸಲಾಗಿದೆ. 'ಅಪ್ಪನ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದೆ. ನನಗೂ ಇದನ್ನು ಕೊಟ್ಟಿದ್ದಾರೆ' ಎಂದು ಬಾಲಕನೊಬ್ಬ ಹೇಳಿದ್ದಾನೆ.
ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹರ್ದೋಯ್ ಬಿಜೆಪಿ ಸಂಸದ ಅನ್ಷುಲ್ ವರ್ಮಾ, ಅಗರವಾಲ್ ಅವರನ್ನು ಟೀಕಿಸಿದ್ದಾರೆ. ದೇವಸ್ಥಾನದ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆ ಮಾಡಿದ ವಿಚಾರವನ್ನು ಪಕ್ಷದ ಮುಖಂಡರ ಬಳಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
'ಅಗರವಾಲ್ ಇತ್ತೀಚೆಗಷ್ಟೇ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ನಮ್ಮ ಧಾರ್ಮಿಕ ಸ್ಥಳವೊಂದರಲ್ಲಿ ಪಾಸಿ ಸಮ್ಮೇಳನ ಆಯೋಜಿಸಿದ್ದಾರೆ. ಇದನ್ನು ದುರದೃಷ್ಟಕರ ಕಾರ್ಯಕ್ರಮ ಎಂದು ಹೇಳುತ್ತೇನೆ. ಏಕೆಂದರೆ, ನಾವು ಪೆನ್ನು ಪುಸ್ತಕ ಕೊಡಬೇಕಾದ ಮಕ್ಕಳಿಗೆ ಅಗರವಾಲ್ ಮದ್ಯದ ಬಾಟಲಿಗಳನ್ನು ನೀಡಿದ್ದಾರೆ.
ಇದಕ್ಕೆ ಹೇಗೆ ಅವಕಾಶ ನೀಡಲಾಯಿತು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆದು ಕೇಳುತ್ತೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮದ್ಯ ಹಂಚಿಕೆ ಮಾಡಿದ್ದು ಅಬಕಾರಿ ಇಲಾಖೆಯ ಕಣ್ಣಿಗೆ ಹೇಗೆ ಬೀಳಲಿಲ್ಲ? ಈ ತಪ್ಪನ್ನು ತಿದ್ದಿಕೊಳ್ಳಲು ಬಿಜೆಪಿ ಮರುಚಿಂತನೆ ನಡೆಸಬೇಕಿದೆ' ಎಂದು ಅವರು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕರಾಗಿದ್ದ ನರೇಶ್ ಅಗರವಾಲ್ ಮಾರ್ಚ್ 2018ರಂದು ತಮ್ಮ ಮಗ ಹಾಗೂ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.












Click it and Unblock the Notifications