18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ: ಯೋಗಿ
ಲಕ್ನೋ, ಏಪ್ರಿಲ್ 21: ಉತ್ತರ ಪ್ರದೇಶ ಸರ್ಕಾರವು 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಲು ಮುಂದಾಗಿದೆ.
ಸೋಮವಾರ ನಡೆದ ತುರ್ತು ಸಭೆಯ ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೇ 1 ರಿಂದ ಆರಂಭವಾಗುವ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.
ರೆಮ್ಡೆಸಿವಿರ್ ಲಸಿಕೆ ಮೇಲಿನ ಆಮದು ಸುಂಕ ರದ್ದುಗೊಳಿಸಿದ ಭಾರತ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡಲು ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಯಾಬಿನೆಟ್ ಧನ್ಯವಾದ ತಿಳಿಸಿದೆ.
ಈ ಹಂತದಲ್ಲಿ ರಾಜ್ಯ ಸರ್ಕಾರಗಳು ತಮಗೆ ಅಗತ್ಯವಿರುವ ತಯಾರಕರಿಂದ ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ಅವಕಾಶ ನೀಡಿದೆ. ಪ್ರಧಾನಿಯವರ ಈ ನಿರ್ಧಾರವು ಕೋವಿಡ್ ಉತ್ತಮ ನಿರ್ವಹಣೆಗೆ ಸಹಾಯ ಮಾಡುತ್ತದೆ, ಬೃಹತ್ ಲಸಿಕಾ ಅಭಿಯಾನವು ಕೊರೊನಾ ವೈರಸ್ ಅನ್ನು ಸೋಲಿಸಲು ನೆರವಾಗುತ್ತದೆ.
18 ವರ್ಷ ಮೇಲ್ಪಟ್ಟವರಿಗೆ ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕಲು ನಾವು ನಿರ್ಧರಿಸಿದ್ದೇವೆ. ರಾಜ್ಯ ಸರ್ಕಾರವು ತನ್ನದೇ ಆದ ಸಂಪನ್ಮೂಲಗಳೊಂದಿಗೆ ಲಸಿಕೆ ಕಾರ್ಯಕ್ರಮದಲ್ಲಿ ಮುಂದಡಿ ಇಡಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತ ಸರ್ಕಾರವು ರೆಮ್ಡೆಸಿವಿರ್ ಲಸಿಕೆ ಹಾಗೂ ಅದರ ಕಚ್ಚಾವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಿದೆ. ಭಾರತವು ರೆಮ್ಡೆಸಿವಿರ್ ಅನ್ನು ರಫ್ತು ಮಾಡುವುದೇ ಹೆಚ್ಚು. ಕೆಲ ದಿನಗಳ ಹಿಂದಿನವರೆಗೂ ಸುಮಾರು 100 ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು.
ದೇಶದಲ್ಲಿ ಕೋವಿಡ್ ಪರಿಸ್ಥಿತಿ ಉಲ್ಬಣಿಸಿರುವುದರಿಂದ ಇತ್ತೀಚೆಗೆ ರಫ್ತು ನಿಷೇಧಿಸಲಾಗಿತ್ತು. ಈ ಮಧ್ಯೆ, ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ ರೆಮ್ಡೆಸಿವಿರ್ ಔಷಧವನ್ನು ಹಂಚಿಕೆ ಮಾಡಲೂ ಕೇಂದ್ರ ನಿರ್ಧರಿಸಿದೆ.
ರೆಮ್ಡೆಸಿವಿರ್ ಉತ್ಪಾದನೆಗೆ ಬಳಸುವ ಔಷಧೀಯ ಪದಾರ್ಥಗಳ ಮೇಲಿನ ಆಮದು ಸುಂಕವನ್ನೂ ರದ್ದುಪಡಿಸಲಾಗಿದೆ. ರೆಮ್ಡೆಸಿವಿರ್ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ದೇಶದಲ್ಲಿ ರೆಮ್ಡೆಸಿವಿರ್ ಕೊರತೆ ಇದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಈ ಜೀವರಕ್ಷಕಗಳ ಬೆಲೆ ಭಾರೀ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ವಿದೇಶದಿಂದ ಆಮದಾಗುವ ವಸ್ತುಗಳಿಗೆ ಶೇ.10ರಷ್ಟು ಸುಂಕ ಇರುತ್ತದೆ.