ಕೊಲೆ ಆರೋಪಿಯನ್ನು ಪೊಲೀಸರ ಮುಂದೆಯೇ ಥಳಿಸಿ ಕೊಂದ ಗ್ರಾಮಸ್ಥರು: ದಾರುಣ ಘಟನೆ
ಲಕ್ನೋ, ಸೆಪ್ಟೆಂಬರ್ 7: ಕೋಪೋದ್ರಿಕ್ತರಾದ ಗ್ರಾಮಸ್ಥರು ಕೊಲೆ ಆರೋಪಿಯೊಬ್ಬನನ್ನು ಪೊಲೀಸರ ಸಮ್ಮುಖದಲ್ಲಿಯೇ ಥಳಿಸಿ ಕೊಂದ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸೋಮವಾರ ತನ್ನ ಮನೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಂದ ಆರೋಪಿಯನ್ನು ಗ್ರಾಮಸ್ಥರು ಉತ್ತರ ಪ್ರದೇಶದ ಕುಶಿನಗರ್ ಪ್ರದೇಶದಲ್ಲಿ ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ. ಘಟನೆಯ ಸ್ಥಳದಲ್ಲಿ ಪೊಲೀಸರು ಹಾಜರಿದ್ದರೂ ಈ ಕೃತ್ಯವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ.
ಕುಶಿನಗರ್ನ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ನಿದ್ದೆ ಮಾಡುತ್ತಿದ್ದಾಗ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಸ್ಕೂಟರ್ನಲ್ಲಿ ಬಂದ ಕೊಲೆ ಆರೋಪಿ ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದ ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಜನರಿಂದ ಹೊಡೆತ ತಪ್ಪಿಸಿಕೊಳ್ಳಲು ಟೆರೇಸ್ ಮೇಲೆ ಹತ್ತಿದ್ದ. ಮನೆಯ ಸುತ್ತಲೂ ಜನರು ನೆರೆದಿದ್ದರಿಂದ ಅವರನ್ನು ಬೆದರಿಸಿ ಓಡಿಸುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಲು ಶುರುಮಾಡಿದ್ದ.

ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಸ್ಥಳೀಯರು ಕೊಲೆ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಮನಬಂದಂತೆ ಥಳಿಸಿದ್ದಾರೆ. ಆತ ನಿತ್ರಾಣನಾಗಿ ಕೆಳಕ್ಕೆ ಕುಸಿಯುವವರೆಗೂ ಹಲ್ಲೆ ಮುಂದುವರಿಸಿದ್ದಾರೆ. ಕೊಲೆ ಆರೋಪಿಯು ಪೊಲೀಸರ ಮುಂದೆ ಶರಣಾಗತನಾಗಲು ಪ್ರಯತ್ನಿಸಿದ್ದ. ಆದರೆ ಜನರು ದೊಣ್ಣೆ ಮತ್ತು ರಾಡುಗಳಿಂದ ಆತನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ.
ಪೊಲೀಸ್ ಸಿಬ್ಬಂದಿ ಅಲ್ಲಿಯೇ ಇದ್ದರೂ ಆ ಸಂದರ್ಭದಲ್ಲಿ ಮೂಕ ಪ್ರೇಕ್ಷಕರಾಗಿದ್ದರು. ಆರೋಪಿಯನ್ನು ಗ್ರಾಮಸ್ಥರಿಂದ ಬಚಾವು ಮಾಡುವುದರಲ್ಲಿ ವಿಫಲರಾಗಿದ್ದಾರೆ. ಆರೋಪಿಯು ಗೋರಖ್ಪುರದಿಂದ ಕುಶಿನಗರ್ಗೆ ಸೋಮವಾರ ಬೆಳಿಗ್ಗೆ ಹತ್ಯೆ ಮಾಡುವ ಸಲುವಾಗಿ ಬಂದಿದ್ದ ಎನ್ನಲಾಗಿದೆ.
ಗುಂಪು ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗ್ರಾಮಸ್ಥರ ಗುಂಪು ಕೊಲೆ ಆರೋಪಿಯನ್ನು ಥಳಿಸುವ ದೃಶ್ಯ ಕಾಣಿಸುತ್ತದೆ. ಮತ್ತು ಪೊಲೀಸರು ಜನರನ್ನು ತಡೆಯಲು ಹಾಗೂ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನ ಮಾಡದೆ ಇರುವುದು ಸೆರೆಯಾಗಿದೆ.












Click it and Unblock the Notifications