ಪ್ರಧಾನಿಗೆ ಚುನಾವಣೆ ಸಂದರ್ಭದಲ್ಲೇ ಭಯೋತ್ಪಾದನೆ ನೆನಪಾಗುತ್ತದೆಯೇ?: ಪ್ರಿಯಾಂಕಾ ಗಾಂಧಿ ಪ್ರಶ್ನೆ
ಲಕ್ನೋ, ಫೆಬ್ರವರಿ 22: ದೇಶದ ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಕೆ ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ ಲಕ್ನೋ ಬಹಿರಂಗ ಪ್ರಚಾರದ ಸಂದರ್ಭದಲ್ಲಿ ಅವರು ಮಾತನಾಡಿದರು. "ಪ್ರಧಾನಿ ನರೇಂದ್ರ ಮೋದಿಯವರು ಇತರ ವಿಷಯಗಳ ಬದಲಿಗೆ ನಿರುದ್ಯೋಗದ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂದರು.
ಚುನಾವಣೆಯ ಕಾರಣಕ್ಕಾಗಿ ಪ್ರಧಾನಿಯವರು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಾರೆ. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳು ಅಥವಾ ಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರುವ ಹಣದುಬ್ಬರದ ಬಗ್ಗೆ ಏಕೆ ಏನನ್ನೂ ಹೇಳುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಬಿಜೆಪಿ ಮಾತಾಡುವುದಿಲ್ಲ:
ಉತ್ತರ ಪ್ರದೇಶ ಹಾರ್ದೋಯ್ನ ಬಿಲ್ಗ್ರಾಮ್ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಮಹಿಳೆಯರು, ಯುವಕರು ಮತ್ತು ಜನರ ಒಟ್ಟಾರೆ ಜೀವನದ ಗುಣಮಟ್ಟ ಸುಧಾರಿಸುವುದೇ ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಪುನರುಚ್ಚರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಮಾತಿನ ಬಾಣ ಬಿಟ್ಟ ಅವರು, ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಬಿಜೆಪಿಯವರು ತುಟಿ ಪಿಟಕ್ ಎನ್ನುವುದಿಲ್ಲ ಎಂದು ಆರೋಪಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಡಾಡಿ ದನಗಳ ಬಗ್ಗೆ ಇತ್ತೀಚಿಗೆ ಒಂದು ಕಡೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಈ ಸಮಸ್ಯೆಯನ್ನು ರಾಜ್ಯದ ಜನರು 2017ರಿಂದಲೂ ಎದುರಿಸುತ್ತಿದ್ದಾರೆ. ನಾವೂ ಇದರ ಬಗ್ಗೆ ಕೂಗಿ ಹೇಳಿದರೂ ಸರ್ಕಾರಕ್ಕೆ ಕಿವಿ ಕೇಳಿಸಲಿಲ್ಲ. ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿದಿಲ್ಲ ಎಂದರೆ ನಮಗೆ ನಂಬುವುದಕ್ಕೆ ಸಾಧ್ಯವಿಲ್ಲ, ಆದರೆ ಅವರಲ್ಲಿ ಸಮಸ್ಯೆಯನ್ನು ಪರಿಹರಿಸುವ ಇಚ್ಛೆ ಇದ್ದಂತೆ ತೋರುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ದೂಷಿಸಿದರು.
ಸುಳ್ಳು ಭರವಸೆ ನೀಡುವವರನ್ನು ನಂಬಬೇಡಿ:
ರಾಜ್ಯದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವವರ ಕೂಪಕ್ಕೆ ಬಲಿಯಾಗಬೇಡಿ. ಸಾಮಾಜಿಕ ಹಿತಾಸಕ್ತಿಯಲ್ಲಿ ಅಭಿವೃದ್ಧಿ ಕಾರ್ಯಸೂಚಿಗಾಗಿ ಎಲ್ಲರೂ ಒಟ್ಟಾಗುವಂತೆ ಪ್ರಿಯಾಂಕಾ ಗಾಂಧಿ ಕರೆ ನೀಡಿದರು. ರಾಜಕೀಯದಲ್ಲಿ ಜಾತಿ ಮತ್ತು ಧರ್ಮದ ವಿಷಯದಲ್ಲಿ ಸಮಯವನ್ನು ಕಳೆಯುವವರು ಕೊನೆಯಲ್ಲಿ ತಮಗೆ ಏನೂ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇಂಥ ಆಟವಾಡಲು ಬಂದವರು ಕೇವಲ ಹುಸಿ ಭರವಸೆಗಳನ್ನು ನೀಡಿ ಹೋಗುತ್ತಾರೆ. ಆದರೆ ಕಾಂಗ್ರೆಸ್ ಪಕ್ಷವು ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.












Click it and Unblock the Notifications