'ಯುಪಿ ಹಿಂಸಾಚಾರ ಯೋಗಿ ಸರ್ಕಾರಕ್ಕೆ ಅಂತ್ಯ ಹಾಡಲಿದೆ': ಕಾಂಗ್ರೆಸ್ ನಾಯಕ
ಲಕ್ನೋ, ಅಕ್ಟೋಬರ್ 05: "ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರವು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರಕ್ಕೆ ಅಂತ್ಯ ಹಾಡಲಿದೆ," ಎಂದು ಹಿರಿಯ ಕಾಂಗ್ರೆಸ್ ನಾಯಕ ದೀಪೆಂದರ್ ಸಿಂಗ್ ಹೂಡಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ರೈತರ "ಭಟ್ಟ ಪಾರ್ಸೌಲ್" ಚಳವಳಿಯನ್ನು ಉಲ್ಲೇಖ ಮಾಡಿದ್ದಾರೆ.
ಭಟ್ಟ ಪಾರ್ಸೌಲ್ ಉತ್ತರ ಪ್ರದೇಶದ ಒಂದು ಸ್ಥಳವಾಗಿದೆ. 2011 ರಲ್ಲಿ ಅಲ್ಲಿ ರಾಹುಲ್ ಗಾಂಧಿ ಭೂಸ್ವಾಧೀನ ವಿರುದ್ಧ ರೈತರ ಆಂದೋಲನವನ್ನು ಬೆಂಬಲಿಸಿ ಅವರ ಹೋರಾಟದಲ್ಲಿ ಸೇರಿಕೊಂಡಿದ್ದರು.
"ನಾನು ಭಟ್ಟ ಪಾರ್ಸೌಲ್ ಚಳವಳಿಯಲ್ಲಿ ಭಾಗಿಯಾಗಿಲ್ಲ. ಹಾಗೆಯೇ ಅದರ ರ್ಯಾಲಿಗಳಲ್ಲಿಯೂ ಭಾಗಿಯಾಗಿಲ್ಲ. ಆ ಸಂದರ್ಭದಲ್ಲಿ ಬಿಎಸ್ಪಿ ಸರ್ಕಾರವು ರೈತರನ್ನು ಗುರಿಯಾಗಿಸಿಕೊಂಡಿತ್ತು. ರೈತರ ಘನತೆಗೆ ಧಕ್ಕೆ ತಂದಿತ್ತು," ಎಂದು ತಿಳಿಸಿದ್ದಾರೆ.

ಇನ್ನು ಭಟ್ಟ ಪಾರ್ಸೌಲ್ ಚಳುವಳಿಗೆ ಇಂದಿನ ರೈತರ ಚಳವಳಿಯನ್ನು ಹೋಲಿಕೆ ಮಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ, "ಅಂದು ಬಿಎಸ್ಪಿ ಸರ್ಕಾರ ರೈತರನ್ನು ಗುರಿಯಾಗಿಸಿಕೊಂಡಿತ್ತು. ಇಂದು ಅದೇ ರೀತಿಯ ಸ್ಥಿತಿ ಬಂದಿದೆ. ಭಟ್ಟ ಪಾರ್ಸೌಲ್ ಚಳುವಳಿಯ ಬಳಿಕ ಉತ್ತರ ಪ್ರದೇಶದಲ್ಲಿ ಸರ್ಕಾರವೇ ಬದಲಾಗಿದೆ. ಹಾಗೆಯೇ ಈ ಲಖಿಂಪುರ್ ಖೇರಿ ಹಿಂಸಾಚಾರದ ಬಳಿಕವೂ ಸರ್ಕಾರದಲ್ಲಿ ಬದಲಾವಣೆಯಾಗಲಿದೆ," ಎಂದು ಅಭಿಪ್ರಾಯಿಸಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ತೆರಳುತ್ತಿದ್ದ ಸಂದರ್ಭ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ ಜೊತೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದೀಪೆಂದರ್ ಸಿಂಗ್ ಹೂಡಾ ಪೊಲೀಸ್ ವಶಕ್ಕೆ ಒಳಪಟ್ಟಿದ್ದರು. ಈ ಸಂದರ್ಭದಲ್ಲಿ ಇತರೆ ನಾಲ್ವರು ಕಾಂಗ್ರೆಸ್ ನಾಯಕರನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
2011 ರಲ್ಲಿ ಉತ್ತರ ಪ್ರದೇಶದ ಭಟ್ಟ ಪಾರ್ಸೌಲ್ನಲ್ಲಿ ಭೂಸ್ವಾಧೀನ ವಿರುದ್ಧ ರೈತರ ಆಂದೋಲನ ನಡೆಸಿದ್ದು, ಈ ಸಂದರ್ಭ ನಡೆದ ಹಿಂಸಾಚಾರದಲ್ಲಿ ಇಬ್ಬರು ಪೊಲೀಸರು ಹಾಗೂ ಇಬ್ಬರು ರೈತರು ಸಾವನ್ನಪ್ಪಿದ್ದರು. ಬಳಿಕ ಈ ಪ್ರದೇಶಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಾಗೂ ರಾಹುಲ್ ಗಾಂಧಿ ದ್ವಿ ಚಕ್ರ ವಾಹನದಲ್ಲಿ ಬಂದಿದ್ದರು. 2011 ರಲ್ಲಿ ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ ಸರ್ಕಾರವಿತ್ತು. ಆದರೆ ಆ ಬಳಿಕದ ಚುನಾವಣೆಯಲ್ಲಿ ಅಖಿಲೇಶ್ ಯಾದವ್ರ ಸಮಾಜವಾಗಿ ಪಕ್ಷ ಅಧಿಕಾರವನ್ನು ಪಡೆಯಿತು.
"ಕಳೆದ ರಾತ್ರಿಯಿಂದ ನಮಗೆ ಯಾರನ್ನೂ ಭೇಟಿಯಾಗಲು ಬಿಡುತ್ತಿಲ್ಲ. ಬೇರೆ ಯಾರನ್ನೂ ಕೂಡಾ ಆ ಪ್ರದೇಶಕ್ಕೆ ತೆರಳಲು ಬಿಡುತ್ತಿಲ್ಲ. ಸೀತಾಪುರದಲ್ಲಿ ಪೊಲೀಸರು ಇದ್ದಾರೆ. ನಾವು ನಾಲ್ವರು ಲಖಿಂಪುರ ಖೇರಿಗೆ ಹೋಗಲು ಹಾಗೂ ಮೃತರ ಕುಟುಂಬವನ್ನು ಭೇಟಿಯಾಗಲು ಅನುಮತಿ ಅಷ್ಟೇ ಕೇಳುತ್ತಿದ್ದೆವು. ನಾವು ಹೆಚ್ಚಿನ ಸಂಖ್ಯೆಯ ಬೆಂಬಲಿಗರೊಂದಿಗೆ ಅಲ್ಲಿಗೆ ತೆರಳಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
"ಆದರೆ ಯಾವುದೇ ಕಾರಣವಿಲ್ಲದೆ ನಮ್ಮನ್ನು ಅಲ್ಲಿ ತಳ್ಳಲಾಯಿತು. ನನಗೂ ಆ ಸಂದರ್ಭದಲ್ಲಿ ಬಹಳ ಆಶ್ಚರ್ಯವಾಯಿತು. ನಾನು ಸಮಾಜ ಸೇವೆಯನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಆದರೆ ಈಗ ಯಾವುದೇ ಕಾರಣವನ್ನು ನೀಡದೆ ನಮ್ಮನ್ನು ಅವರು ಪೊಲೀಸ್ ವಶಕ್ಕೆ ಪಡೆದಿದ್ದಾರೆ," ಎಂದಿದ್ದಾರೆ.
"ಬಿಜೆಪಿಯು ರೈತರ ಬೇಡಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರೈತರ ಮೇಲೆ ಹಿಂಸಾಚಾರ ನಡೆಸುತ್ತಿದೆ. ಈ ಘಟನೆಯು ಮಾನವೀಯತೆಗೆಯೇ ನಾಚಿಕೆ ಉಂಟು ಮಾಡುವಂತದ್ದು. ಇನ್ನು ಆ ಸಚಿವರುಗಳು ಇನ್ನೂ ಕೂಡಾ ರಾಜೀನಾಮೆ ನೀಡಿಲ್ಲ, ಹಾಗೆಯೇ ಅವರನ್ನು ಸರ್ಕಾರ ವಜಾವೂ ಮಾಡಿಲ್ಲ. ಆ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು," ಎಂದು ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ಉದ್ಧೇಶಿಸಿ ಆಗ್ರಹಿಸಿದರು.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳು ರೈತರ ಮೇಲೆ ಹರಿದು ಹೋದ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರನೂ ಇದ್ದರು ಎಂದು ಹೇಳಲಾಗಿದೆ. ಈ ನಡುವೆ ಕೇಂದ್ರ ಸಚಿವರ ಪುತ್ರ ಆಶೀಶ್ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications